ಮಧುವನ ಇಸಿಆರ್ ಸಂಸ್ಥೆಯಲ್ಲಿ ಎಐ ರೋಬೋಟ್ ಬಳಕೆ
ಉಡುಪಿ, ಮೇ 10: ಬ್ರಹ್ಮಾವರ ತಾಲೂಕು ಅಚ್ಲಾಡಿ ಗ್ರಾಮದ ಮಧುವನದಲ್ಲಿರುವ ಇಸಿಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟಷ್ನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಎಐ ರೋಬೋಟಿಕ್ ಟೀಚರ್ಸ್ನ್ನು ತರಗತಿ ಗಳಿಗೆ ಪರಿಚಯಿಸಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ತ ಮಧು ಟಿ.ಭಾಸ್ಕರನ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಭಾಸ್ಕರನ್, ಕಾಲೇಜಿನ ಎಲ್ಲಾ ತರಗತಿ ಗಳಲ್ಲೂ ಎಐ ರೋಬೋಟಿಕ್ ಟೀಚರ್ಸ್ನ್ನು ಪರಿಚಯಿಸುವ ರಾಜ್ಯದ ಮೊತ್ತಮೊದಲ ವಿದ್ಯಾಸಂಸ್ಥೆ ತಮ್ಮದಾಗಿದೆ ಎಂದರು.
ಇದರ ಉದ್ಘಾಟನಾ ಸಮಾರಂಭ ಮೇ 12ರಂದು ಸೋಮವಾರ ಬೆಳಗ್ಗೆ 10ಗಂಟೆಗೆ ನಡೆಯಲಿದೆ ಎಂದ ಅವರು, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಎಸ್ಪಿ ಡಾ.ಅರುಣ್ ಕೆ. ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದರು.
ಇಸಿಆರ್ ಸಂಸ್ಥೆಯ ವಿದ್ಯಾರ್ಥಿಗಳೇ ಎಐ ರೋಬೋಟ್ಗಳನ್ನು ತಯಾರಿಸಿದ್ದಾರೆ. ಪ್ರತಿ ತರಗತಿಯಲ್ಲೂ ಒಂದೊಂದು ರೋಬೋಟ್ಗಳನ್ನು ಬಳಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ತರಗತಿಯ ಯಾವುದೇ ವಿಷಯದ ಯಾವುದೇ ಸಂಶಯವನ್ನು ಖುದ್ಧಾಗಿ ರೋಬೋಟ್ ಮೂಲಕ ಬಗೆಹರಿಸಿಕೊ ಳ್ಳಬಹುದು. ತರಗತಿಯಲ್ಲಿ ಶಿಕ್ಷಕರೂ ಇರುತ್ತಾರೆ ಎಂದರು.
ಪ್ರಾಂಶುಪಾಲ ಡಾ.ನೀಲೇಶ್ ಮಟ್ಕೆ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ನಟರಾಜ್ ಕೆ., ಉಪಪ್ರಾಂಶುಪಾಲ ಅಶೋಕ್ ಜೋಗಿ ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.