ಶಿಕ್ಷಣ ಸಂಸ್ಥೆಗಳ ಆವರಣ ರಾಜಕೀಯ, ದ್ವೇಷದಿಂದ ದೂರ ಇರಲಿ: ಅಪ್ಪಣ್ಣ ಹೆಗ್ಡೆ

ಕುಂದಾಪುರ, ಮೇ 10: ಅಧ್ಯಾಪಕರ ಕೊರತೆ, ಮೂಲ ಸೌಕರ್ಯಗಳ ಕೊರತೆ ನೀಗಿಸುವಲ್ಲಿ ಸರಕಾರ ಆದ್ಯತೆ ನೀಡಬೇಕು. ಶಿಕ್ಷಣ ಸಂಸ್ಥೆಗಳ ಆವರಣ ರಾಜಕೀಯ, ದ್ವೇಷ ಮತ್ತು ಅಸೂಯೆಗಳಿಂದ ದೂರ ಇರಬೇಕು. ಗುಂಪುಗಾರಿಕೆ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಸಮಾಜದ ಬೆಳವಣಿಗೆಯ ಬ್ರಹ್ಮಾಸ್ತ್ರವಾಗಿರುವ ಶಿಕ್ಷಣ ಸಂಸ್ಥೆಗಳ ಕೊಡುಗೆಗಳನ್ನು ಸಮಾಜ ಮರೆಯಬಾರದು ಎಂದು ಮಾಜಿ ಶಾಸಕ ಹಾಗೂ ಬಸ್ರೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದ್ದಾರೆ.
ವಂಡ್ಸೆ-ನೆಂಪುವಿನ ಕೆಪಿಎಸ್ ಸ್ಕೂಲ್ ಆವರಣದಲ್ಲಿ ಅಂದಾಜು 1.25 ಕೋಟಿ ರೂ. ವೆಚ್ಚದಲ್ಲಿ ದಾನಿಗಳು ಹಾಗೂ ಹಳೆ ವಿದ್ಯಾರ್ಥಿಗಳು ನಿರ್ಮಿಸಿಕೊಟ್ಟ ಹೊಳ್ಮಗೆ ವಿನೋದಾ ರವಿ ಶೆಟ್ಟಿ ಸಾಂಸ್ಕೃತಿಕ ರಂಗ ’ಐಕ್ಯಮ್’ ಲೋಕಾರ್ಪಣೆ ಹಾಗೂ ಮಾಜಿ ಶಾಸಕ ಯಡ್ತರೇ ಮಂಜಯ್ಯ ಶೆಟ್ಟಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕರ್ಕುಂಜೆ ಗ್ರಾಪಂ ಅಧ್ಯಕ್ಷ ರಾಜೀವ ಶೆಟ್ಟಿ ಬಿಜ್ರಿ, ಕುಂದಾಪುರ ರೆಡ್ಕ್ರಾಸ್ ಘಟಕದ ಅಧ್ಯಕ್ಷ ಎಸ್.ಜಯಕರ ಶೆಟ್ಟಿ, ಉದ್ಯಮಿ ಅಶೋಕ ಕುಮಾರ ಶೆಟ್ಟಿ ಕುಂದಾಪುರ, ಬೈಂದೂರು ವಲಯ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕೆಪಿಎಸ್ ಸ್ಕೂಲ್ ಪ್ರಾಂಶುಪಾಲ ಕೃಷ್ಣರಾಜ್ ಭಟ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಕೆ. ನಾರಾಯಣ ಶೆಟ್ಟಿ, ಅಧ್ಯಕ್ಷ ಎನ್.ಸಂತೋಷ್ ಕುಮಾರ ಶೆಟ್ಟಿ ಉಪಸ್ಥಿತರಿದ್ದರು.
ಗಜದ್ವಾರ ಉದ್ಘಾಟನೆ, ಮಾಜಿ ಶಾಸಕ ಯಡ್ತರೇ ಮಂಜಯ್ಯ ಶೆಟ್ಟಿ ಪುತ್ಥಳಿ ಅನಾವರಣ, ಹಳೆ ವಿದ್ಯಾರ್ಥಿ ಸಂಘದ ಕಚೇರಿ ಉದ್ಘಾಟನೆ, ಜ್ಞಾನ ಸಂಗಮ ಸಭಾಂಗಣ, ಶೋಭಾ ಬಿ.ಎನ್.ಶೆಟ್ಟಿ ಬಗ್ವಾಡಿ ಯಕ್ಷರಂಗ ಸಭಾ ವೇದಿಕೆ ಉದ್ಘಾಟನೆ ನಡೆಯಿತು.
ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಬಿ.ಎನ್.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಚಿತ್ತೂರು ಸ್ವಾಗತಿಸಿದರು. ಶಿಕ್ಷಕ ವಸಂತ್ರಾಜ್ ಶೆಟ್ಟಿ ವಂಡ್ಸೆ ಸನ್ಮಾನ ಪತ್ರ ಓದಿದರು, ಡಾ.ಕಿಶೋರಕುಮಾರ ಶೆಟ್ಟಿ ನಿರೂಪಿಸಿದರು. ಮುಖ್ಯ ಶಿಕ್ಷಕ ಶ್ರೀಧರ ಭಟ್ ವಂದಿಸಿದರು.