ಉಡುಪಿ: ಸನ್ಯಾಸಿಗಳ ಸೋಗಿನಲ್ಲಿ ಮಂಕು ಬೂದಿ ಎರಚಿ ಉಂಗುರ, ನಗದು ಕಳವು; ಪ್ರಕರಣ ದಾಖಲು

ಅಜೆಕಾರು, ಮೇ 10: ಖಾವಿಧಾರಿ ಸನ್ಯಾಸಿಗಳ ಸೋಗಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಂಗಡಿ ಮಾಲಕರೊಬ್ಬರಿಗೆ ಮಂಕುಬೂದಿ ಎರಚಿ ಕೈಯಲ್ಲಿದ್ದ ಉಂಗುರ ಹಾಗೂ ನಗದು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಅಜೆಕಾರು ಸುಧಣ್ಣ ರೆಸಿಡೆನ್ಸಿ ಬಳಿ ಮೇ 9ರಂದು ಸಂಜೆ ನಡೆದಿದೆ.
ದುರ್ಗಾ ಎಂಟರ್ಪ್ರೈಸಸ್ ಎಂಬ ಇಲೆಕ್ಟ್ರಾನಿಕ್ಸ್ ಅಂಗಡಿಗೆ ಖಾವಿ ಧರಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದಿದ್ದು, ಅಲ್ಲಿ ಮಾಲಕ ರಂಜಿತ್(30) ಅವರಿಗೆ ಆರ್ಶಿವಾದ ಮಾಡುವುದಾಗಿ ಹಿಂದಿಯಲ್ಲಿ ಹೇಳಿದರು.
ಅಂಗಡಿಯ ಒಳಗಡೆ ಬಂದ ಅವರು, ರಂಜಿತ್ ತಲೆಯ ಮೇಲೆ ಕೈ ಇಟ್ಟು ಅವರ ಗಮನವನ್ನು ಬೇರೆ ಕಡೆಗೆ ಸೆಳೆದಿದ್ದು, ಅಷ್ಟರಲ್ಲಿ ಇನ್ನೋರ್ವ ವ್ಯಕ್ತಿ ಅವರ ಬಲಕೈ ಹಿಡಿದು ಗಮನಕ್ಕೆ ಬಾರದಂತೆ ಬೆರಳಿನಲ್ಲಿ ಇದ್ದ 2 ಪವನ್ ತೂಕದ ಚಿನ್ನದ ಉಂಗುರವನ್ನು ಹಾಗೂ ಕಿಸೆಯಲ್ಲಿದ್ದ 2,000ರೂ. ಹಣವನ್ನು ಕಳವು ಮಾಡಿ ಕೊಂಡು ಹೊರಟು ಹೋಗಿರುವುದಾಗಿ ದೂರಲಾಗಿದೆ.
ರಂಜಿತ್ಗೆ ಸ್ವಲ್ಪ ಸಮಯ ಮಂಕು ಬಡಿದ ತರಹ ಆಗಿದ್ದು, ಸುಮಾರು 3-4 ನಿಮಿಷಗಳ ಬಳಿಕ ಎಚ್ಚರ ಆದ ರೀತಿಯಾಗಿ ನೋಡಿದಾಗ ಅಲ್ಲಿ ಯಾರೂ ಇರಲಿಲ್ಲ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.