ಮುಂದಿನ ವರ್ಷದೊಳಗೆ ಎಲ್ಲ ಕಾಲುಸಂಕಗಳ ನಿರ್ಮಾಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ, ಮೇ 11: ಮಳೆಗಾಲದಲ್ಲಿ ಉಡುಪಿ ಜಿಲ್ಲೆಯ ಕೆಲವು ಕಡೆ ಕಾಲು ಸಂಕಗಳು ಇಲ್ಲದೇ ಇರುವು ದರಿಂದ ದೊಡ್ಡ ಸಮಸ್ಯೆಗಳು ಆಗುತ್ತಿವೆ. ಕಾಲು ಸಂಕ ನಿರ್ಮಾಣಕ್ಕೆ ಈಗಾಗಲೇ 8ಕೋಟಿ ರೂ. ಅನು ದಾನ ಬಿಡುಗಡೆಯಾಗಿದೆ. ಉಳಿದ 400 ಕಾಲು ಸಂಕಗಳಿಗೆ ಅನುದಾನ ಕೂಡ ಮಂಜೂರಾಗಿದೆ. ಮುಂದಿನ ವರ್ಷದೊಳಗೆ ಉಡುಪಿ ಜಿಲ್ಲೆಯ ಎಲ್ಲ ಕಾಲು ಸಂಕಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸ ಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.
ಮಳೆಗಾಲ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕುರಿತು ಉಡುಪಿ ಜಿಪಂ ಸಭಾಂಗಣದಲ್ಲಿ ರವಿವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಉಡುಪಿ ಜಿಲ್ಲೆಯಲ್ಲಿ 36 ಕಾಲು ಸಂಕ ನಿರ್ಮಾಣಕ್ಕೆ 5ಕೋಟಿ ರೂ. ಅನುದಾನ ಮಂಜೂರಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಉಳಿದ ಸುಮಾರು 420 ಕಾಲು ಸಂಕಗಳ ಪೈಕಿ ಸಣ್ಣವುಗಳನ್ನು ನರೇಗಾದ ಮೂಲಕ ನಿರ್ಮಿಸಲಾಗುವುದು. ದೊಡ್ಡ ಕಾಲು ಸಂಕಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾಪ ಕಳುಹಿಸಲಾಗುವುದು ಎಂದರು.
ಕಳೆದ ವರ್ಷದ ಮಳೆಗಾಲದ ನಷ್ಟ ಪರಿಹಾರಕ್ಕೆ ಸಂಬಂಧಿಸಿ ಎನ್ಡಿ ಆರ್ಎಫ್ ಎಸ್ಡಿಆರ್ಎಫ್ ಎಲ್ಲ ರೀತಿಯ ಸಹಕಾರ ಕೊಡುತ್ತಿದೆ. ಕಂದಾಯ, ಲೋಕೋಪಯೋಗಿ ಇಲಾಖೆಗಳ ಕಾಮಗಾರಿಗಳು ಕೂಡ ನಡೆಯುತ್ತಿದೆ. ಶಾಲಾ ಕಟ್ಟಡ, ಅಂಗನವಾಡಿ ದುರಸ್ತಿ ಕಾರ್ಯ ಮಾಡಲಾಗಿದೆ. ಎಲ್ಲ ಪರಿಹಾರ ಕಾರ್ಯ ವನ್ನು ಸರಕಾರದಿಂದಲೇ ನಾವು ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಮಳೆಗಾಲಕ್ಕೆ ಕಾರ್ಯಪಡೆ ರಚನೆ: ಈ ವರ್ಷ ಅತೀ ಹೆಚ್ಚು ಮಳೆ ಯಾಗುವ ಸೂಚನೆ ಇದ್ದು, ಮಳೆಗಾಲದ ವೇಳೆ 24 ಗಂಟೆ ಎಚ್ಚರವಾಗಿದ್ದು, ಪ್ರಾಣ ಹಾನಿಯಾಗದಂತೆ ಜವಾಬ್ದಾರಿಯಾಗಿ ನಿರ್ವ ಹಿಸುವಂತೆ ಮತ್ತು ಇದಕ್ಕಾಗಿ ಕಾರ್ಯಪಡೆ ರಚಿಸಿ ಕಾರ್ಯ ಪ್ರವೃತ್ತರಾಗುವಂತೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ವಿದ್ಯುತ್ ಕಂಬಗಳ ನಿರ್ವಹಣೆ, ಉಳಿದಂತೆ, ಅಗತ್ಯ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತದೆ. ನಗರದಲ್ಲಿ ಸಣ್ಣ ಮಳೆಯಾದರೂ ಸಮಸ್ಯೆ ಯಾಗುತ್ತಿದ್ದು, ಎಲ್ಲಾ ಇಲಾಖೆಗಳು ಜವಾಬ್ದಾರಿ ತೆಗೆದು ಕೊಂಡು ಕೆಲಸ ಮಾಡಲಿವೆ. ಮಳೆಗಾಲ ನಿರ್ವಹಣೆಗೆ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ನಿರ್ದೇಶನ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.
ಕೇವಲ 3 ಗ್ರಾಮಗಳಲ್ಲಿ ಸ್ವಲ್ಪಕುಡಿಯುವ ನೀರಿನ ಸಮಸ್ಯೆಯಿದ್ದು, ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಕೇವಲ ಕಚೇರಿಯಲ್ಲಿ ಕುಳಿತು ವರದಿ ಮಾಡದೆ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಪರಿಶೀಲಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ವಿದ್ಯುತ್ ಕಂಬಗಳ ನಿರ್ವಹಣೆ, ಅಂಗನವಾಡಿ, ಶಾಲೆಗಳ ಕಟ್ಟಡ ಪರಿಸ್ಥಿತಿ ಪರಿಶೀಲಿಸಿ ಅಪಾಯವಾಗದಂತೆ ಎಚ್ಚರವಹಿಸಲಾಗುತ್ತದೆ ಎಂದರು.
ಸಭೆಯಲ್ಲಿ ಸಚಿವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಹಾಗೂ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಅರಣ್ಯಾಧಿಕಾರಿ ಗಣಪತಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಮಳೆಗಾಲ ಎದುರಿಸಲು ಸರ್ವ ಸನ್ನದ್ಧ
ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಅದರಂತೆ ಮುನ್ನಚ್ಚರಿಕೆಯಾಗಿ ಸಭೆ ಕರೆದು ಚರ್ಚಿಸ ಲಾಗಿದೆ. ಯಾವುದೇ ಪ್ರಾಣಹಾನಿ, ಆಸ್ತಿ ಹಾನಿಯಾಗದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಲಾ ಗಿದೆ. ಈ ಮೂಲಕ ಉಡುಪಿ ಜಿಲ್ಲಾಡಳಿತ ಮುಂಬರುವ ಮಳೆಗಾಲ ಎದುರಿಸಲು ಸರ್ವ ಸನ್ನದ್ಧವಾಗಿ ದೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಎಲ್ಲ ಇಲಾಖಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸಲಹೆ ಸೂಚನೆ ನೀಡಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಮೂರು ಬಾರಿ ಸಭೆ ಕರೆದು ಚರ್ಚಿಸಿದ್ದಾರೆ. ಅಪಾಯಕಾರಿ ಸ್ಥಿತಿಯಲ್ಲಿರುವ ಮರದ ಗೆಲ್ಲುಗಳನ್ನು ಅರಣ್ಯ ಇಲಾಖೆಯವರು ಕಡಿಯುವ ಮತ್ತು ಮೆಸ್ಕಾಂನವರು ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಸರಿಪಡಿಸುವ ಕಾರ್ಯ ಮಾಡುವಂತೆ ಸೂಚಿಸಲಾಗಿದೆ ಎಂದರು.
‘ಕಡಲ್ಕೊರಕೆತಕ್ಕೆ ಸಂಬಂಧಿಸಿ 5ಕೋಟಿ ರೂ. ಬಿಡುಗಡೆಯಾಗಿದೆ. ಮತ್ತೆ 200ಕೋಟಿ ರೂ. ಅನು ದಾನದ ಪ್ರಾಸ್ತಾಪ ಕಳುಹಿಸಲಾಗಿದೆ. ಆದರೆ ಇದೀಗ 60-70ಕೋಟಿ ರೂ. ಅನುದಾನ ಸಾಕಾಗಬಹುದು ಎಂದು ಹೇಳಲಾಗಿದೆ. ಅದರಂತೆ ಮತ್ತೆ ಪ್ರಸ್ತಾಪ ಸಲ್ಲಿಸಲಾಗಿದ್ದು, ಅಷ್ಟು ಅನುದಾನ ಮಂಜೂರಾಗುತ್ತದೆ ಎಂಬ ನಿರೀಕ್ಷೆ ಇದೆ’
-ಲಕ್ಷ್ಮೀ ಹೆಬ್ಬಾಳ್ಕರ್, ಸಚಿವರು







