ಲೈಟ್ಹೌಸ್ ಚಿತ್ರತಂಡದಿಂದ ನೇತೃದಾನ ವಾಗ್ದಾನ ಕಾರ್ಯಕ್ರಮ

ಉಡುಪಿ : ನೇತ್ರದಾನ ಮಹಾದಾನ ಎಂಬ ಮುಖ್ಯ ಸಂದೇಶ ದೊಂದಿಗೆ ಮೇ 16ರಂದು ಬಿಡುಗಡೆ ಗೊಳ್ಳಲಿರುವ ‘ಲೈಟ್ ಹೌಸ್’ ಚಿತ್ರತಂಡ ಮತ್ತು ಪ್ರಸಾದ್ ನೇತ್ರಾಲಯ ಉಡುಪಿ ಇದರ ವತಿಯಿಂದ ನೇತ್ರದಾನ ಅರಿವು ಮೂಡಿಸುವ ನೇತ್ರದಾನ ವಾಗ್ದಾನ ಕಾರ್ಯಕ್ರಮವನ್ನು ಪ್ರಸಾದ್ ನೇತ್ರಾಲಯದ ಸಭಾಂಗಣದಲ್ಲಿ ರವಿವಾರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಸಾದ್ ನೇತ್ರಾಲಯ ಇದರ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ್ ಕೂಡ್ಲು ಮಾತನಾಡಿ, ಭಾರತದಲ್ಲಿ ನೇತ್ರದಾನದ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಇದರಿಂದ ದೃಷ್ಟಿ ಕಳೆದುಕೊಂಡವರಿಗೆ ಶ್ರೀಲಂಕಾದಿಂದ ಕಣ್ಣಿನ ಕರಿಗುಡ್ಡೆಯನ್ನು ಆಮದು ಮಾಡಿ ರೋಗಿಗಳಿಗೆ ನೀಡಲಾಗು ತ್ತಿದೆ. ಬೌದ್ಧ ಧರ್ಮದಲ್ಲಿ ನೇತ್ರದಾನಕ್ಕೆ ವಿಶೇಷವಾದ ಆದ್ಯತೆ ಇರುವ ಕಾರಣ ಅವರು ಹೆಚ್ಚಿನ ಸಂಖ್ಯೆ ಯಲ್ಲಿ ನೇತ್ರದಾನ ಮಾಡಲು ಮುಂದೆ ಬರುತ್ತಿದ್ದಾರೆ. ಒಂದು ಕರಿಗುಡ್ಡೆಯಿಂದ ನಾಲ್ಕು ಜನರಿಗೆ ದೃಷ್ಟಿ ನೀಡಲು ಸಾಧ್ಯ ಎಂದು ತಿಳಿಸಿದರು.
ಕಾರ್ಕಳ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುರೇಂದ್ರನಾಥ ಎಂ.ವಿ. ಶುಭ ಹಾರೈಸಿದರು. ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಮಾತನಾಡಿದರು. ವೈದ್ಯರಾದ ಡಾ.ಶಮಂತ್ ಶೆಟ್ಟಿ, ಡಾ.ಸ್ನೇಹ ನೇತೃದಾನದ ಬಗ್ಗೆ ಮಾಹಿತಿ ನೀಡಿದರು.
ಲೈಟ್ ಹೌಸ್ ಚಲನಚಿತ್ರದ ನಿರ್ಮಾಪಕರಾದ ದತ್ತಾತ್ರೇಯ ಪಾಟ್ಕಾರ್ ಉಪಸ್ಥಿತರಿದ್ದರು. ಚಿತ್ರದ ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ಸ್ವಾಗತ ಮತ್ತು ಪ್ರಸ್ತಾವನೆಗೈದರು. ರಂಗಭೂಮಿ ಕಲಾವಿದ ರಾಮಾಂಜಿ ನಮ್ಮ ಭೂಮಿ ನಿರೂಪಿಸಿ, ವಂದಿಸಿದರು.







