ದಿ.ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಬಹುಮಾನ ವಿತರಣೆ

ಉಡುಪಿ, ಜೂ.8: ದಾನ ಮಾಡುವಾಗ, ಅದನ್ನು ಪ್ರಚಾರ ನಿರೀಕ್ಷಿಸದೆ, ಪ್ರೀತಿ ಭಾವದಿಂದ ಮಾಡಬೇಕು ಎಂದು ಉದ್ಯಮಿ ಹಾಗೂ ದಾನಿ ಜೊಸೇಫ್ ಮಿನೇಜಸ್ ಹೇಳಿದ್ದಾರೆ.
ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ರವಿವಾರ ನಡೆದ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವಾರ್ಷಿಕ ಮಹಾಸಭೆ, ಸಹಮಿಲನ ಮತ್ತು ದಿ.ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇವರು ದೇವಾಲಯಗಳ ಮೂರ್ತಿಗಳಲ್ಲಿದ್ದಾನೆಂದು ಅಲ್ಲ, ಅವನು ಜೀವಿಗಳಲ್ಲಿ ಇದ್ದಾನೆ. ಆಸ್ಪತ್ರೆಯ ರೋಗಿಗಳಲ್ಲಿ, ನೆರೆಹೊರೆಯ ಅಗತ್ಯವಿರುವ ಜನರಲ್ಲಿ. ಅವರನ್ನು ಸೇವಿಸುವುದು ದೇವರ ನಿಜವಾದ ಪ್ರೀತಿ. ಕಥೊಲಿಕ್ ಸಭಾ ಉಡುಪಿ ಪ್ರದೇಶ ಎಲ್ಲಾ ಸಮುದಾಯದವರಿಗೂ ನೀಡುತ್ತಿರುವ ವಿಶೇಷ ಸೇವೆ ಶ್ಲಾಘನೀಯವಾದುದು ಎಂದರು.
ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ನೂತನ ಟೆಲಿ ಫೋನ್ ಡೈರಕ್ಟರಿಯನ್ನು ಆಧ್ಯಾ ತ್ಮಿಕ ನಿರ್ದೇಶಕ ಹಾಗೂ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅನಾವರಣಗೊಳಿಸಿದರು. ದಿ.ಡೆನಿಸ್ ಡಿಸಿಲ್ವಾ ಸ್ಮಾರಕ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ 21 ವಿದ್ಯಾರ್ಥಿಗಳಿಗೆ ಡಾಲಿಯಾ ರೋಡ್ರಿಗಸ್ ಮತ್ತು ಡಯಾನಾ ಬ್ರಿಟ್ಟೋ ಬಹುಮಾನ ವಿತರಿಸಿದರು.
ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ರೊನಾಲ್ಡ್ ಡಿ ಆಲ್ಮೇಡಾ ವಹಿಸಿ ಮಾತ ನಾಡಿ, ಮುಂದಿನ ದಿನಗಳಲ್ಲಿ ಅಗತ್ಯವಿರುವವರಿಗೆ ರಕ್ತ ಬ್ಯಾಂಕ್ ಮತ್ತು ಗೋರಟ್ಟಿ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸುವ ಕುರಿತು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ರಾಜ್ಯ ಕಾರ್ಮಿಕ ಕಲ್ಯಾಣ ಫೆಡರೇಶನ್ ಅಧ್ಯಕ್ಷರಾಗಿ ನೇಮಕ ಗೊಂಡಿರುವ ಎಲ್ರೋಯ್ ಕಿರಣ್ ಕ್ರಾಸ್ಟೋ ಮತ್ತು ಕುಂದಾಪುರ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ವಿನೋದ್ ಕ್ರಾಸ್ಟೋ ಹಾಗೂ ಜೋಸೆಫ್ ಮಿನೇಜಸ್ ಅವರನ್ನು ಸನ್ಮಾನಿಸಲಾಯಿತು. ಅತ್ಯುತ್ತಮ ಸೇವಾ ಪ್ರದ ರ್ಶನ, ಆಮ್ಚೊ ಸಂದೇಶ್ ಚಂದಾದಾರರು ಹಾಗೂ ಜಾಹೀರಾತು ಸಂಗ್ರಹದ ಘಟಕ ಮತ್ತು ವಲಯಗಳಿಗೆ ಪ್ರಶಸ್ತಿ ನೀಡಲಾಯಿತು
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕರ್ನೆಲಿಯೋ, ಕೇಂದ್ರಿಯ ಕೋಶಾಧಿಕಾರಿ ಗ್ಯಾರಿಫಿಲ್ಡ್ ಉರ್ಬಾನ್, ನಿಯೋಜಿತ ಅಧ್ಯಕ್ಷ ಲೂವಿಸ್ ಡಿಸೋಜ ವಲಯ ಅಧ್ಯಕ್ಷರುಗಳು, ಮಾಜಿ ಅಧ್ಯಕ್ಷರುಗಳಾದ ವಲೇರಿಯನ್ ಫೆರ್ನಾಂಡಿಸ್, ವಾಲ್ಟರ್ ಸಿರಿಲ್ ಪಿಂಟೊ, ಆಲ್ಫೋನ್ಸ್ ಡಿಕೋಸ್ತಾ, ಆಲ್ವಿನ್ ಕ್ವಾಡ್ರಸ್ ಮೊದಲಾದವರು ಉಪಸ್ಥಿತರಿದ್ದರು.
ಕೇಂದ್ರಿಯ ಕಾರ್ಯದರ್ಶಿ ಜೋಯೆಲ್ ಅಲ್ಮೇಡಾ ವಂದಿಸಿದರು. ಎರಿಕ್ ಸೋನ್ಸ್ ಕಾರ್ಯಕ್ರಮ ನಿರ್ವಹಿಸಿದರು. ಸಹಮಿಲನಕ್ಕೂ ಮುನ್ನ ಅಧ್ಯಕ್ಷ ರೊನಾಲ್ಡ್ ಡಿ ಆಲ್ಮೇಡಾ ಅಧ್ಯಕಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ಜರಗಿತು. ಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ ಮಾಡಲಾಯಿತು.







