ಶೈಕ್ಷಣಿಕ ಸಾಧನೆ ಜೊತೆ ಜೀವನದಲ್ಲೂ ಉನ್ನತ ಶ್ರೇಣಿ ಸಾಧಿಸುವುದೇ ವಿದ್ಯಾರ್ಜನೆಯ ಗುರಿಯಾಗಿರಲಿ: ಸಯ್ಯದ್ ಬ್ಯಾರಿ
ಕೋಡಿ: ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶೈಕ್ಷಣಿಕ ಸಂವಾದ ಕಾರ್ಯಕ್ರಮ

ಕುಂದಾಪುರ, ಜೂ.11: ಶೈಕ್ಷಣಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯನ್ನು ಪಡೆಯುವಂತೆ, ಜೀವನ ಪರೀಕ್ಷೆಯಲ್ಲೂ ಉನ್ನತ ಶ್ರೇಣಿಯನ್ನು ಸಾಧಿಸುವುದೇ ವಿದ್ಯಾರ್ಜನೆಯ ಗುರಿಯಾಗಿರಬೇಕು ಎಂದು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಯ್ಯದ್ ಮುಹಮ್ಮದ್ ಬ್ಯಾರಿ ಹೇಳಿದ್ದಾರೆ.
ಕೋಡಿಯಲ್ಲಿರುವ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಥಮ ವರ್ಷದ ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ಶೈಕ್ಷಣಿಕ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ನಾವು ಎನ್ನುವುದು ವಿಶಾಲವಾದ ಅರ್ಥವನ್ನು ಸೂಚಿಸುತ್ತದೆ. ನಾನು ಎನ್ನುವುದರಿಂದ ಅಹಂ ಮತ್ತು ಅಹಂಕಾರ ಹುಟ್ಟುತ್ತದೆ. ಮಾನವ ಹುಟ್ಟುವಾಗ ಏನನ್ನೂ ತರುವುದಿಲ್ಲ ಹೋಗುವಾಗ ಏನನ್ನೂ ಕೊಂಡೊಯ್ಯಲಾರ. ಹುಟ್ಟು ಮತ್ತು ಸಾವಿನ ನಡುವೆ ಇರುವುದೇ ಜೀವನ. ಇಂತಹ ಜೀವನವನ್ನು ಜನ ಮೆಚ್ಚುವಂತೆ ಆದರ್ಶ ಮತ್ತು ಉನ್ನತವಾಗಿ ಸಾಗಿಸಬೇಕಿದೆ. ಒಂದು ನಾಣ್ಯದಲ್ಲಿ ಎರಡು ಮುಖಗಳು ಇರುವಂತೆ ಒಂದು ಮುಖ ಯಶಸ್ಸನ್ನು ತಿಳಿಸಿದರೆ ಇನ್ನೊಂದು ಮುಖ ತ್ಯಾಗವನ್ನು ಅರ್ಥೈಸುತ್ತದೆ. ಇವೆರಡನ್ನು ಶಿಕ್ಷಕರಾದವರು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಎಂದರು.
ಶಿಕ್ಷಕರಿಗೆ ಆದರ್ಶ ಸಮಾಜವನ್ನು ಕಟ್ಟುವ ಜವಾಬ್ದಾರಿಯುತ ಕರ್ತವ್ಯವಿದೆ. ಇಲ್ಲಿ ತರಬೇತಿ ಪಡೆಯುತ್ತಿರುವ ನೂರು ಪ್ರಶಿಕ್ಷಣಾರ್ಥಿಗಳು ಶಿಕ್ಷಕರಾದ ನಂತರದಲ್ಲಿ ಕನಿಷ್ಠ ಓರ್ವ ಶಿಕ್ಷಕ ಒಂದು ವರ್ಷದಲ್ಲಿ ನಲವತ್ತು ವಿದ್ಯಾರ್ಥಿಗಳಿಗೆ ಬೋಧಿಸಿದರೆ ನೂರು ಶಿಕ್ಷಕರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬೋಧಿಸಿ ಬದುಕನ್ನು ಕಟ್ಟಿಕೊಡಲು ಸಾಧ್ಯವಾಗುತ್ತದೆ. ಬೋಧನೆ ಎನ್ನುವುದು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಿರಬಾರದು. ಅದರೊಂದಿಗೆ ಪಠ್ಯೇತರ ಮತ್ತು ಅದಕ್ಕೆ ಸಂಬಂಧಿಸಿದ ಸಾಮಾಜಿಕ ಅನುಭವ ಮತ್ತು ಜೀವನದ ಅನುಭವ ಕೂಡ ಅಳವಡಿಸಿಕೊಂಡು ಬೋಧಿಸಿದರೆ ಅದು ಪರಿಣಾಮಕಾರಿಯಾಗುತ್ತದೆ ಎಂದು ಸಯ್ಯದ್ ಬ್ಯಾರಿ ಹೇಳಿದರು.
ಮಾತೃಭಾಷೆಯನ್ನು ಅದಮ್ಯವಾಗಿ ಪ್ರೀತಿಸಬೇಕು ಅದರೊಂದಿಗೆ ಇತರ ಭಾಷೆಯನ್ನು ಗೌರವಿಸಬೇಕು. ಜೊತೆಗೆ ಇಂದಿನ ಆಧುನಿಕ ಜಗತ್ತಿಗೆ ಅಗತ್ಯವಾಗಿ ಬೇಕಾದ ಇಂಗ್ಲಿಷ್ ಭಾಷಾ ಕಲಿಕೆ ಕೂಡ ಅನಿವಾರ್ಯವಾಗಿದೆ ಎನ್ನುವುದರೊಂದಿಗೆ ತಾವೆಲ್ಲರೂ ಮುಂದಿನ ದಿನದಲ್ಲಿ ಆದರ್ಶ ಶಿಕ್ಷಕರಾಗಿ ಎಂದು ಶುಭಕೋರಿದರು.
ಈ ಸಂದರ್ಭದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರು ಮತ್ತು ಸಹ ಪ್ರಾಧ್ಯಪಕರು ಉಪಸ್ಥಿತರಿದ್ದರು ಹಾಗೂ ಪ್ರಶಿಕ್ಷಣಾರ್ಥಿಗಳು ಪ್ರಶ್ನೋತ್ತರಗಳ ಮೂಲಕ ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.