"ಪೊಲೀಸ್ ಸಿಬ್ಬಂದಿ ಕೊರತೆ ನೀಗಿಸಲು ಶೀಘ್ರ ನೇಮಕಾತಿ ಪಕ್ರಿಯೆ"
ಕೋಟ ಠಾಣೆಗೆ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೋಟ: ಪೊಲೀಸ್ ಕಾನ್ಸ್ಟೇಬಲ್ ಆಸಕ್ತ ಅಭ್ಯರ್ಥಿಗಳ ವಯೋಮಿತಿ ೩೩ ವರ್ಷಕ್ಕೆ ಏರಿಕೆ ಬಗ್ಗೆ ಅನ್ಯ ರಾಜ್ಯಗಳಲ್ಲಿನ ವಿವರ ಪಡೆದು ಮುಂದೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಗಳ ಕೊರತೆ ನೀಗಿಸಲು ಆದಷ್ಟು ಬೇಗ ನೇಮಕಾತಿ ಪಕ್ರಿಯೆ ನಡೆಸಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕೋಟ ಪೊಲೀಸ್ ಠಾಣೆಗೆ ಶನಿವಾರ ಭೇಟಿ ನೀಡಿದ ಸಂದರ್ಭ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿ ಸಿದರು. ಈ ವೇಳೆ ಸಚಿವರು ದೂರು ನೀಡಲು ಬಂದವರ ಜೊತೆ ಮಾತನಾಡಿ, ಠಾಣೆಯ ಕುರಿತು ಅಭಿಪ್ರಾಯ ಪಡೆದು ಕೊಂಡು ಅಗತ್ಯ ಸಲಹೆ, ಸೂಚನೆ ನೀಡಿದರು.
ಠಾಣಾ ವ್ಯಾಪ್ತಿಯಲ್ಲಿನ ಸಿವಿಲ್ ವ್ಯಾಜ್ಯಗಳು, ಅಪಘಾತ, ಅಪರಾಧ ಪ್ರಕರಣಗಳು, ಅಧಿಕೃತ ರಕ್ಷಣಾ ಆಯುಧಗಳ ಪರವಾನಿಗೆ ಹೊಂದಿದವರ ಕುರಿತು ಮಾಹಿತಿ ಪಡೆದರು. ಸಾಮಾಜಿಕ ಕಾರ್ಯಕರ್ತ ಡಾ.ಎಂ.ವಿ ಹೊಳ್ಳ ಪೊಲೀಸ್ ವಾಹನಗಳ ಕೊರತೆ ಕುರಿತು ಗಮನ ಸೆಳೆದರು.
ಹೆದ್ದಾರಿ ಬ್ಯಾರಿಕೇಡ್ ಅವಾಂತರ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ ಸುಗಮ ಸಂಚಾರ ವ್ಯವಸ್ಥೆ ಗೆ ಅನುವು ಮಾಡಿಕೊಡುವಂತೆ ಮನವಿ ಮಾಡಲಾಯಿತು. ಎಲ್ಲಾ ಜಾತಿ, ಸಮುದಾಯದ ಸಣ್ಣ, ದೊಡ್ಡ ಪ್ರಾರ್ಥನಾ ಮಂದಿರಗಳಿಗೆ ರಾತ್ರಿ ಬೆಳಕಿನ ಸೌಲಭ್ಯ ಹಾಗೂ ಸಿಸಿಟಿವಿ ಅಳವಡಿಸುವಂತೆಯೂ, ಅದರ ಮಾಹಿತಿ ಪ್ರತಿದಿನ ಠಾಣಾ ವ್ಯಾಪ್ತಿಯಲ್ಲಿ ಬರುವಂತೆಯೂ ಸಲಹೆ ನೀಡಲಾಯಿತು.
ದಲಿತ ಕುಂದುಕೊರತೆ ಸಭೆಗಳನ್ನು ಪ್ರತಿ ತಿಂಗಳು ನಡೆಸುತ್ತಿದ್ದೇವೆ ಎಂದು ಠಾಣಾ ಉಪನಿರೀಕ್ಷಕ ರಾಘವೇಂದ್ರ ಸಿ. ಸಚಿವರ ಪ್ರಶ್ನೆಗೆ ಉತ್ತರ ನೀಡಿದರು. ಪೊಲೀಸ್ ವಸತಿ ನಿಲಯಗಳ ಕುರಿತು ಸಚಿವರು ಮಾಹಿತಿ ಪಡೆದುಕೊಂಡರು.
ಎರಡು ಮೂರು ತಿಂಗಳಿಂದ ಕೋಟ ಠಾಣೆಗೆ ವಾಹನ ಇಲ್ಲದೆ ಇರುವುದು, ಟೋಲ್ ಸಮಸ್ಯೆ, ಸಮುದ್ರ ಕಿನಾರೆಯಲ್ಲಿನ ಬಂದೋ ಬಸ್ತ್, ದಲಿತ ಸಮುದಾಯಗಳ ಅಹವಾಲು, ಕಂದಾಯ ಇಲಾಖೆಯ ವ್ಯಾಜ್ಯ ಗಳು ಸೇರಿದಂತೆ ಅನೇಕ ಸಮಸ್ಯೆಗಳು ಪ್ರಸ್ತಾಪವಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಉಡುಪಿ ಎಸ್ಪಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿಪರಮೇಶ್ವರ್, ಉಡುಪಿ ಡಿವೈಎಸ್ಪಿ ಡಿ.ಟಿ.ಪ್ರಭು, ಕುಂದಾಪುರ ಡಿವೈಎಸ್ಪಿ ಎಚ್.ಡಿ ಕುಲಕರ್ಣಿ, ಬ್ರಹ್ಮಾವರ ವೃತ್ತನಿರೀಕ್ಷಕ ಗೋಪಿಕೃಷ್ಣ, ಕೋಟ ಠಾಣೆ ಉಪನಿರೀಕ್ಷಕರಾದ ರಾಘವೇಂದ್ರ ಸಿ., ಸುಧಾ ಪ್ರಭು, ಕಾಂಗ್ರೆಸ್ ಮುಖಂಡರಾದ ಎಂ.ಎ. ಗಫೂರ್, ಮುನಿಯಾಲು ಉದಯ ಕುಮಾರ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಗೋಪಾಲ ಪೂಜಾರಿ, ರಾಜು ಪೂಜಾರಿ ಉಪಸ್ಥಿತರಿದ್ದರು.







