ಮುಷ್ತಾಕ್ ಹೆನ್ನಾಬೈಲ್ ಅವರ ‘ಧರ್ಮಾಧರ್ಮ’ ಬಿಡುಗಡೆ

ಉಡುಪಿ, ಜು.5: ವಿಜಯಪುರದ ಹೋಟೆಲ್ ಮಧುವನ್ ಇಂಟರ್ ನ್ಯಾಶನಲ್ನಲ್ಲಿ ಇತ್ತೀಚೆಗೆ ನಡೆದ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆಯ ಸೌಹಾರ್ದ ಸಮ್ಮಿಲನ ಕಾರ್ಯಕ್ರಮದಲ್ಲಿ ಲೇಖಕ ಮುಷ್ತಾಕ್ ಹೆನ್ನಾಬೈಲ್ ಪ್ರಕಟಿಸಿದ ‘ಧರ್ಮಾಧರ್ಮ’ ಪುಸ್ತಕ ಬಿಡುಗಡೆಗೊಂಡಿತು.
ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಕಾರ್ಗಿಲ್ ಯುದ್ಧದ ಶೌರ್ಯಕ್ಕಾಗಿ ಗ್ಯಾಲಂಟರಿ ಪದಕ ಪಡೆದ ಭಾರತೀಯ ಸೇನೆಯ ಬ್ರಿಗೇಡಿಯರ್ ಮುಹಮ್ಮದ್ ಮುಷ್ತಾಕ್ ಹುಸೇನ್, ಇಸ್ಲಾಂ ಧರ್ಮ ಮತ್ತು ಮುಸ್ಲಿಮರ ಕುರಿತು ವ್ಯಾಪಕ ಅಪಪ್ರಚಾರಗಳಿವೆ. ಸ್ವತ: ಮುಸ್ಲಿಮರಿಗೇ ತಮ್ಮ ಧರ್ಮ ಮತ್ತು ಸಮುದಾಯದ ವಿರುದ್ಧ ಬರುವ ವಿಚಾರಗಳನ್ನು ಎದುರಿಸುವುದು ಹೇಗೆ ಎನ್ನುವುದು ಗೊತ್ತಿರುವುದಿಲ್ಲ. ಭಾರತದಲ್ಲಿರುವ ಹಿಂದೂ ಮುಸ್ಲಿಮರು ವಿಶ್ವದ ಅತ್ಯಂತ ದೊಡ್ಡ ಸಮುದಾಯಗಳು. ಇಷ್ಟು ದೊಡ್ಡ ಸಮುದಾಯಗಳ ನಡುವೆ ಸಂಶಯಗಳು ಉಳಿದಲ್ಲಿ, ಸಾಮರಸ್ಯ ಎಂದಿಗೂ ಸಾಧ್ಯವಾಗದು ಎಂದರು.
ವೇದಿಕೆ ಕರ್ನಾಟಕ ಸಂಘಟನೆ ಗೌರವಾಧ್ಯಕ್ಷ ಡಾ.ಮುಹಮ್ಮದ್ ಶಫಿ ಮುಲ್ಲಾ, ಅಧ್ಯಕ್ಷ ಝಾಕೀರ್ ಹುಸೇನ್ ಉಚ್ಚಿಲ, ಕಾರ್ಯದರ್ಶಿ ಡಾ. ರಹಮತುಲ್ಲಾ ದಾವಣಗೆರೆ, ನಿವೃತ್ತ ಡಿವೈಎಸ್ಪಿಸೂಹೇಲ್ ಅಹಮದ್ ಮರೂರ್, ಸಮಾಜಸೇವಕ ಕೋಟ ಇಬ್ರಾಹಿಂ ಸಾಹೇಬ್, ನಿವೃತ್ತ ನ್ಯಾಯಮೂರ್ತಿ ನಬಿ ರಸೂಲ್ ಮುಹಮ್ಮದಾಪುರ, ಮುಝಫರ್ ಹುಸೇನ್ ಉಪಸ್ಥಿತರಿದ್ದರು.