ಗುಲ್ವಾಡಿ ಗ್ರಾಪಂ ಎದುರು ಕಾಂಗ್ರೆಸ್ನಿಂದ ‘ಸತ್ಯದರ್ಶನ’ ಪ್ರತಿಭಟನೆ

ಕುಂದಾಪುರ, ಜು.10: ಹಲವು ಸಮಾಜಮುಖಿ ಯೋಜನೆಗಳ ಮೂಲಕ ಜನರನ್ನು ತಲುಪುವ ಕಾರ್ಯ ವನ್ನು ಕಾಂಗ್ರೆಸ್ ಮಾಡಿದ್ದು, ಈ ಹತಾಶೆ ಯಿಂದ ಬಿಜೆಪಿಗರು ಅವರ ಸರಕಾರ ಆಡಳಿತದಲ್ಲಿರುವಾಗ ನಡೆದ ತಪ್ಪನ್ನು ಕಾಂಗ್ರೆಸ್ ಪಕ್ಷದ ಮೇಲೆ ಹಾಕಿ ಜನರನ್ನು ಗೊಂದಲಕ್ಕೀಡುಮಾಡುತ್ತಿದ್ದಾರೆ. ಆಶ್ರಯ ಮನೆ, 94ಸಿ, 53-57 ಅಕ್ರಮ ಸಕ್ರಮ, ಪಿಂಚಣಿ ರದ್ದು ಸಮಸ್ಯೆ ಯಾರ ಕಾಲದಲ್ಲಿ ಆರಂಭವಾಗಿದ್ದು ಎಂಬುದನ್ನು ಬಿಜೆಪಿ ಪುನರ್ ಪರಾಮಾರ್ಶೆ ಮಾಡಲಿ ಎಂದು ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಗುಲ್ವಾಡಿ ಗ್ರಾಮ ಪಂಚಾಯತ್ ಎದುರು ಗುರುವಾರ ಸಂಜೆ ನಡೆದ ಬಿಜೆಪಿ ಸುಳ್ಳುಗಳ ವಿರುದ್ಧ ಕಾಂಗ್ರೆಸ್ ಸತ್ಯದರ್ಶನ ಪ್ರತಿಭಟನೆ ಯನ್ನುದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿಗರು ರಾಜಕೀಯ ಲಾಭಕ್ಕೋಸ್ಕರ ಗೋಮಾತೆ ಅನ್ನುತ್ತಾರೆ. ರಾಜಕೀಯ ಮಾಡಲು ಒಂದು ಇತಿಮಿತಿ ಬೇಕು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜಾನುವಾರು ಸಾಕಿ-ಸಲುಹಿದ, ಹೈನುಗಾರಿಕೆ ಮಾಡುತ್ತಿ ರುವ ಉದಾಹರಣೆಗಳಿವೆ. ಪುತ್ತೂರು ಪ್ರಕರಣದಲ್ಲಿ ಸಂತ್ರಸ್ತ ಯುವತಿಗೆ ನ್ಯಾಯ ಒದಗಿಸಿ ನೈತಿಕತೆ ಪ್ರದರ್ಶನ ಮಾಡಿ ಎಂದು ಅವರು ಆಗ್ರಹಿಸಿದರು.
ಕರ್ನಾಟಕ ಸರಕಾರ ನೀಡಿದ ಅನುದಾನದಲ್ಲಿ ನಡೆಯುವ ಕಾಮಗಾರಿಗೆ ಕೇಂದ್ರ ನಾಯಕರ ಭಾವಚಿತ್ರ ಗಳಿರುವ ಫ್ಲೆಕ್ಸ್ ಅಳವಡಿಕೆ ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಈ ಬಗ್ಗೆ ಅಗತ್ಯ ಬಿದ್ದಲ್ಲಿ ಪ್ರತಿಭಟನೆ ಅನಿವಾರ್ಯ. ಬ್ಯಾಂಕ್ಗಳು, ವಿಮಾನ ನಿಲ್ದಾಣ ಸಹಿತ ಬೇರೆಬೇರೆ ಸಂಸ್ಥೆಗಳು ಬಂಡವಾಳಶಾಹಿಗಳ ಪರವಾಗಿ ನಿಂತು ಖಾಸಗಿಕರಣದತ್ತ ಹೋಗಿದ್ದು ಇದರಿಂದ ಮದ್ಯಮ ವರ್ಗ, ಬಡವರು ಕಷ್ಟಪಡಬೇಕಿದೆ. ಬಿಎಸ್ಎನ್ಎಲ್ ಇಂದು ಅತಂತ್ರವಾಗಿದೆ. ದೇಶದ ಆಸ್ತಿ ಮಾರುವ ಯೋಚನೆಗಳು ಇದಾಗಿದೆ ಎಂದವರು ಆರೋಪಿಸಿದರು.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಮಾತನಾಡಿದರು. ಅಲ್ಪಸಂಖ್ಯಾತ ಘಟಕ ರಾಜ್ಯ ಕಾರ್ಯದರ್ಶಿ ಜಿ.ಪಿ. ಮಹಮ್ಮದ್, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಕರ್ಕಿ, ಗುಲ್ವಾಡಿ ಗ್ರಾ.ಪಂ. ಉಪಾಧ್ಯಕ್ಷ ಚಂದ್ರ ಪೂಜಾರಿ, ಮಾಜಿ ಅಧ್ಯಕ್ಷ ಸುದೇಶ್ ಕುಮಾರ್ ಶೆಟ್ಟಿ, ಸದಸ್ಯರಾದ ಸಲಾಂ, ಹಂಜಾ, ವಂಡ್ಸೆ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇರ್ಫಾನ್, ಕಾಂಗ್ರೆಸ್ ಮುಖಂಡರಾದ ಹನೀಫ್ ಗುಲ್ವಾಡಿ, ರಾಜು ಮೊದಲಾದವರು ಉಪಸ್ಥಿತರಿದ್ದರು.







