ಮಾನವ ಎನಿಸಿಕೊಳ್ಳಲು ಮಾನವೀಯತೆ ಇರಬೇಕು: ನ್ಯಾ.ಸಂತೋಷ್ ಹೆಗ್ಡೆ
ಹೆಬ್ರಿ ತಾ.ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ

ಹೆಬ್ರಿ: ಮಾನವನೆನಿಸಿಕೊಳ್ಳಲು ಮಾನವೀಯತೆ ಇರಬೇಕು. ಮಾನವೀಯತೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು, ಮಾನವೀಯ ನೆಲೆಯಲ್ಲಿ ಜನಸೇವಕರಾಗಿ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಶುಕ್ರವಾರ ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಎಸ್ಆರ್ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ, ಸಂಘದಿಂದ ಗೌರವ ಸ್ವೀಕರಿಸಿ ಅವರು ಮಾತನಾಡುತಿದ್ದರು.
ತಪ್ಪು ದಾರಿಯಲ್ಲಿ ಸಂಪಾದಿಸಿದ ಸಂಪತ್ತಿನಿಂದ ಬದುಕಿನಲ್ಲಿ ನಿಮಗೆಂದೂ ಶಾಂತಿ ದೊರೆಯುವುದಿಲ್ಲ. ಪ್ರತಿಯೊಬ್ಬರು ಜೀವನದಲ್ಲಿ ಶ್ರೀಮಂತನಾಗು ವುದು, ದೊಡ್ಡ ವ್ಯಕ್ತಿ ಎನಿಸಿಕೊಳ್ಳುವುದು, ದೊಡ್ಡ ಹುದ್ದೆಗೆ ಹೋಗುವುದು ಖಂಡಿತ ತಪ್ಪಲ್ಲ. ಆದರೆ ಎಲ್ಲಿಯೂ ಕಾನೂನಿನ ಚೌಕಟ್ಟು ಮೀರಬಾರದು. ಅಕ್ರಮ ಸಂಪತ್ತು ಮಾಡಿದವನು ಸದಾ ಕಾನೂನಿನ ಭಯದಡಿ ನೆಮ್ಮದಿ ಇಲ್ಲದ ಜೀವನ ನಡೆಸಬೇಕಾಗುತ್ತದೆ ಎಂದವರು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಯಾವುದೇ ಕೆಲಸ ಮಾಡುವಾಗಲೂ, ಯಾವುದೇ ಹುದ್ದೆಗೆ ಹೋದರೂ ಅದರ ಮಹತ್ವ ತಿಳಿದು ಕೆಲಸ ಮಾಡಬೇಕು. ಅದಕ್ಕೆ ನ್ಯಾಯ ನೀಡಬೇಕು.ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಬೇಕಾದರೆ ವಿದ್ಯಾರ್ಥಿ ಗಳು ಇಂದಿನಿಂದಲೇ ಎಚ್ಚರಗೊಳ್ಳಬೇಕು ಎಂದವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹೆಬ್ರಿ ಎಸ್. ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ ಶೆಟ್ಟಿ ಮಾತನಾಡಿ, ನಾವು ಮಾಡುವ ಒಳ್ಳೆ ಕೆಲಸಗಳನ್ನು ಸಮಾಜಕ್ಕೆ ಬಿತ್ತರಿಸುವ ಒಳ್ಳೆಯ ಕೆಲಸ ಮಾಧ್ಯಮದಿಂದ ಆಗಿದೆ. ಬದಲಾದ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬಾರಿ ಪ್ರಮಾಣದ ಬದಲಾವಣೆ ಕಂಡುಕೊಂಡಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಕುಮಾರ್ ಮುನಿಯಾಲ್ ವಹಿಸಿದ್ದರು. ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ, ಹೆಬ್ರಿ ಎಸ್ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೆಚ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ, ಧಾರ್ಮಿಕ ಮುಂದಾಳು ಹೆಬ್ರಿ ಭಾಸ್ಕರ ಜೋಯಿಸ್, ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜೇಶ ಶೆಟ್ಟಿ ಅಲೆವೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮಹಮ್ಮದ್ ಶರೀಫ್ ಕಾರ್ಕಳ, ಹೆಬ್ರಿ ತುಳಸಿ ಗ್ರೂಪ್ಸ್ ಉದ್ಯಮ ಸಮೂಹದ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ, ಉಪ ಪ್ರಾಂಶುಪಾಲ ದೀಪಕ್ ಎನ್. ಅವರನ್ನು ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್, ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಉದಯ ಕುಮಾರ್ ಶೆಟ್ಟಿ, ಸುಮಲತಾ ಹೆಬ್ಬಾರ್, ಸಂಜೀವ ಆರ್ಡಿ, ಶ್ರೀದತ್ತಾ ಶೆಟ್ಟಿ, ರಂಜಿತ್ ಶಿರ್ಲಾಲ್ ಉಪಸ್ಥಿತರಿದ್ದರು.
ಪತ್ರಕರ್ತ ಉದಯಕುಮಾರ ಶೆಟ್ಟಿ ಸ್ವಾಗತಿಸಿದರೆ, ನರೇಂದ್ರ ಎಸ್. ಮರಸಣಿಗೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







