ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊರಗರಿಂದ ಧರಣಿ ಸತ್ಯಾಗ್ರಹ

ಉಡುಪಿ, ಜು.14: ಉಡುಪಿ ಜಿಲ್ಲಾ ಕೊರಗರ ಸಂಘದ ನೇತೃತ್ವದಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೂಲ ನಿವಾಸಿ ಕೊರಗರು ಇಂದು ಜಿಲ್ಲಾಧಿಕಾರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಕೊರಗರ ಅಭಿವೃದ್ಧಿ ಕೆಲಸಗಳಿಗಾಗಿ 2021-22ನೇ ಸಾಲಿನಲ್ಲಿ ಮಂಜೂರಾದ 320.12ಲಕ್ಷ ರೂ. ಅನುದಾನದಲ್ಲಿ ಕೇವಲ 160.06ಲಕ್ಷ ರೂ. ಮಾತ್ರ ಬಿಡುಗಡೆಯಾಗಿದ್ದು, ಅದನ್ನು ಶಿಕ್ಷಣ, ಸ್ವ ಉದ್ಯೋಗ, ಭೂ ಅಭಿವೃದ್ಧಿ ಕೆಲಸಗಳಿಗೆ ವ್ಯಯ ಮಾಡಲಾಗಿದೆ. ಆನಂತರ ಬಾಕಿ ಹಣವನ್ನು ಸರಕಾರ, ನಾಲ್ಕು ವರ್ಷಗಳಾದರೂ ಇನ್ನೂ ಬಿಡುಗಡೆಗೊಳಿಸಿಲ್ಲ. ಅದನ್ನು ಕೂಡಲೇ ಬಿಡುಗಡೆಗೊಳಿಸಿ, ಮಕ್ಕಳ ಶಿಕ್ಷಣಕ್ಕೆ ಹಾಗೂ ಯುವಜನರ ಉದ್ಯೋಗಕ್ಕೆ ಭರಿಸಿಕೊಳ್ಳಬೇಕು. ಕೊರಗರಿಗೆ ಉಚಿತ ಶಿಕ್ಷಣದ ಗ್ಯಾರಂಟಿ ಕೊಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಈ ಬಾರಿಯ ಬಜೆಟ್ನಲ್ಲಿ ಆದಿವಾಸಿಗಳಿಗೆ ಘೋಷಿಸಿದ 200ಕೋಟಿ ಅನುದಾನದಲ್ಲಿ ಕೊರಗರಿಗೂ 25 ಕೋಟಿ ಮೀಸಲಿರಿಸಬೇಕು ಹಾಗೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡುವ ಯೋಜನೆಗಳಿಗೆ ಸ್ಥಳೀಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೊರಗರ ಭಾಗಿದಾರಿಕೆಯಲ್ಲಿ ಕ್ರಿಯಾಯೋಜನೆ ರೂಪಿಸು ವಂತಾಗಬೇಕು ಎಂದು ಅವರು ಒತ್ತಾಯಿಸಿದರು.
ಈ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಈ ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸುವುದಾಗಿಯೂ, ಅನುದಾನ ತರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಸ್ಥಳೀಯ ಶಾಸಕ ಯಶಪಾಲ್ ಸುವರ್ಣ ಹಾಗೂ ಅಪರ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸ ಲಾಯಿತು.
ಕೊರಗ ಸಂಘದ ಮುಖಂಡರಾದ ಗೌರಿ ಕೊರಗ, ಗಣೇಶ್ ಕೊರಗ ಕುಂದಾಪುರ, ಗಣೇಶ್ ಬಾರಕೂರು, ಲಕ್ಷ್ಮಣ್ ಬೈಂದೂರು, ಕುಡುಪ ಸಚ್ಚಿರಿಪೇಟೆ, ರಂಗ ಕೊರಗ, ಬಾಬು ಪಾಂಗಾಳ, ಕುಮಾರ್ ದಾಸ್ ಹಾಲಾಡಿ, ವಿನಿತಾ ಕುಂಭಾಶಿ, ಸುಮಂಗಲ ಮಧುವನ, ಬಬಿತಾ, ವಸಂತ ಕಾಡಬೆಟ್ಟು ದಕ್ಷಿಣ ಕನ್ನಡ ಜಿಲ್ಲಾ ಕೊರಗ ಸಂಘದ ಎಂ.ಸುಂದರ್, ರಾಮು ಕೋಡಿಕಲ್ ಮೊದಲಾದವರು ಉಪಸ್ಥಿತರಿದ್ದರು.







