ಯುವ ಕ್ರಿಕೆಟಿಗ ಮೊಹಮ್ಮದ್ ಫಾಹಿಮ್ ಆಯ್ಕೆ

ಕುಂದಾಪುರ, ಜು.21: ಬೆಂಗಳೂರಿನ ಪ್ರತಿಷ್ಠಿತ ಕರ್ನಾಟಕ ಇನ್ಸ್ಟಿಟ್ಯುಟ್ ಆಫ್ ಕ್ರಿಕೆಟ್ ಶ್ರೀಲಂಕಾದ ಬಿಯಾಗಮ ಕ್ರಿಕೆಟ್ ಕ್ಲಬ್ ವಿರುದ್ಧ 8 ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಲು ತೆರಳುವ 19ರ ಕೆಳಹರೆಯದ ತಂಡಕ್ಕೆ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಇಸ್ಮಾಯಿಲ್ ಮತ್ತು ವಾಜಿದ ತಬಸ್ಸುಮ್ ದಂಪತಿ ಮಗ ಪ್ರಸ್ತುತ ಮೊದಲ ವರ್ಷದ ಇಂಜನಿಯರಿಂಗ್ ವಿದ್ಯಾರ್ಥಿ ಮೊಹಮ್ಮದ್ ಫಾಹಿಮ್ ಆಯ್ಕೆಯಾಗಿದ್ದಾರೆ.
ಕೆಲವು ವರ್ಷಗಳಿಂದ ತಾನು ಓದುತ್ತಿರುವ ಕಾಲೇಜು ಪರವಾಗಿ ಆಡುತ್ತಿದ್ದ ಮೊಹಮ್ಮದ್ ಫಾಹಿಮ್ ಕಳೆದ ಒಂದೂವರೆ ವರ್ಷದಿಂದ ಈ ಪ್ರತಿಷ್ಠಿತ ಕರ್ನಾಟಕ ಇನ್ಸ್ಟಿಟ್ಯುಟ್ ಆಫ್ ಕ್ರಿಕೆಟ್ನಲ್ಲಿ ತರಬೇತಿ ಪಡೆಯುವು ತ್ತಿದ್ದು ಇಲ್ಲಿಯ ಮುಖ್ಯ ತರಬೇತುದಾರ ಇರ್ಫಾನ್ ಸೇಠ್ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ಮಟ್ಟದ 1, 2 ಮತ್ತು 3 ಕೋಚಿಂಗ್ನಲ್ಲಿ ಪ್ರತಿಷ್ಠಿತ ಪ್ರಮಾಣಪತ್ರಗಳನ್ನು ಪಡೆದುಕೊಂಡವರಾಗಿದ್ದಾರೆ.
ಮೊಹಮ್ಮದ್ ಫಾಹಿಮ್ ಈ ಹಿಂದೆ ತಾನು ಪ್ರತಿನಿಧಿಸುತ್ತಿದ್ದ ಶಾಲಾ ಹಾಗೂ ಕಾಲೇಜು ಮಟ್ಟದ ಟೂರ್ನಿ ಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತ ಬಂದಿದ್ದ ಕಾರಣ ಕೆಐಒಸಿಯಲ್ಲಿ ಅತ್ಯಂತ ಬೇಗನೆ ಅಲ್ಲಿನ ತರಬೇತುದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೌಲಿಂಗ್ ನಲ್ಲಿ ವಿಶೇಷವಾಗಿ ಮಧ್ಯಮ ವೇಗದ ಜೊತೆಗೆ ಔಟ್ ಸ್ವಿಂಗ್ ಮತ್ತು ಯಾರ್ಕರ್ ಎಸೆತಗಳ ಮೂಲಕ ಬ್ಯಾಟ್ಸ್ಮೆನ್ಗಳನ್ನು ದಿಗ್ಭ್ರಮೆಗೊಳಿಸುವ ಕಾರಣಕ್ಕೆ ಇದೀಗ ಶ್ರೀಲಂಕಾ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾನ್ಯತೆ ಪಡೆದಿರುವ ಬಿಯಾಗಮ ಕ್ರಿಕೆಟ್ ಕ್ಲಬ್ ವಿರುದ್ಧ ಕೊಲಂಬೊ ಸೇರಿದಂತೆ ಶ್ರೀಲಂಕಾದ ವಿವಿಧ ನಗರಗಳಲ್ಲಿ ಜು.21ರಿಂದ 29ರವರಗೆ ನಡೆಯುವ ಟೂರ್ನಿಯಲ್ಲಿ ಭಾಗವಹಿಸುವ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.







