ಡಾ.ಎಚ್.ವಿ.ನಾಗರಾಜ ರಾವ್ಗೆ ಸೇಡಿಯಾಪು ಪ್ರಶಸ್ತಿ

ಉಡುಪಿ, ಜು.26: ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವುದಕ್ಕಾಗಿ ಡಾ.ಎಚ್. ವಿ.ನಾಗರಾಜ್ ರಾವ್ ಅವರು 2025ನೇ ಸಾಲಿನ ಪ್ರತಿಷ್ಠಿತ ಸೇಡಿಯಾಪು ಕೃಷ್ಣ ಬಟ್ಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ ಶೆಟ್ಟಿ ತಿಳಿಸಿದ್ದಾರೆ.
ಡಾ.ಎಚ್.ವಿ.ನಾಗರಾಜ್ ರಾವ್ ಅವರಿಗೆ ಭಾಷಾ ವಿದ್ವಾಂಸ ಸೇಡಿಯಾಪು ಕೃಷ್ಣ ಭಟ್ಟರ ನೆನಪಿನ ಪ್ರಶಸ್ತಿಯೊಂದಿಗೆ 10,000ರೂ. ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 16ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ ದಲ್ಲಿ ನಡೆಯಲಿದೆ ಎಂದು ಡಾ.ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡಾ.ಎಚ್.ವಿ.ನಾಗರಾಜ ರಾವ್ ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣ, ಭಾಷಾಶಾಸ್ತ್ರ, ಕಥನ ಕಾವ್ಯ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಡಾ.ನಾಗರಾಜ ರಾವ್ 1942ರ ಸೆ.10ರಂದು ಕೋಲಾರ ಜಿಲ್ಲೆಯ ಸೋಮೇನಹಳ್ಳಿ ಗ್ರಾಮದಲ್ಲಿ ಜನಿಸಿದ್ದು, ಆರಂಭಿಕ ಶಿಕ್ಷಣವನ್ನು ಗುಡಿಬಂಡೆಯಲ್ಲಿ ಪಡೆದು ಮೈಸೂರಿನ ಮಹಾರಾಜಾ ಸಂಸ್ಕತ ಕಾಲೇಜಿನಲ್ಲಿ ವ್ಯಾಕರಣಶಾಸ್ತ್ರ ಮತ್ತು ಅಲಂಕಾರ ಶಾಸ್ತ್ರದಲ್ಲಿ ಶಿಕ್ಷಣ ಪಡೆದರು. ನಂತರ ಅಮೇರಿಕದ ವಾಷಿಂಗ್ಟನ್ ವಿವಿಯಿಂದ ಭಾಷಾ ವಿಷಯದಲ್ಲಿ ಎಂ.ಎ. ಪದವಿ, ಮೈಸೂರು ವಿವಿಯಿಂದ ಸಂಸ್ಕೃತದಲ್ಲಿ ಎಂ.ಎ. ಪದವಿಯನ್ನು ನಾಲ್ಕು ಚಿನ್ನದ ಪದಕಗಳೊಂದಿಗೆ ಪಡೆದರು.
ಡಾ.ನಾಗರಾಜ್ ಅವರು ಹಲವು ಅಪರೂಪದ ಹಾಗೂ ಉಪೇಕ್ಷಿಸಲ್ಪಟ್ಟ ವಿಷಯಗಳಲ್ಲಿ ಬರವಣಿಗೆಗೆ ಮುಂದಾಗಿದ್ದು, ಸಾಹಿತ್ಯ ಪ್ರಕಾರಗಳಲ್ಲೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನೇಕ ಸಾಹಿತ್ಯಿಕ ಕೃತಿಗಳನ್ನು ರಚಿಸಿರುವ ಇವರು ನಾಟಕ, ಕಾದಂಬರಿ, ಪ್ರಬಂಧಗಳನ್ನು ಅನುವಾದಿಸಿದ್ದಾರೆ. ಸಂಸ್ಕೃತದಲ್ಲಿ ನಾಟಕಗಳನ್ನು ರಚಿಸಿದ್ದಾರೆ.
ಡಾ.ಹಾ.ಮಾ. ನಾಯಕ್ ಹಾಗೂ ಎಸ್.ಎಲ್ ಭೈರಪ್ಪ ಮೊದಲಾದ ಹಿರಿಯ ಲೇಖಕರ ಕನ್ನಡ ಕೃತಿ ಗಳನ್ನು ಸಂಸ್ಕೃತಕ್ಕೆ ಅನುವಾದಿಸಿದ್ದಾರೆ. ಹಲವಾರು ಗ್ರಂಥಗಳನ್ನು ಕನ್ನಡದಿಂದ ಸಂಸ್ಕೃತಕ್ಕೂ, ಸಂಸ್ಕೃತದಿಂದ ಕನ್ನಡಕ್ಕೂ, ಸಂಸ್ಕೃತದಿಂದ ಇಂಗ್ಲಿಷಿಗೂ ಅನುವಾದಿಸಿದ್ದಾರೆ.
ಮೈಸೂರಿನ ಪ್ರಾಚ್ಯ ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದ ಇವರು, ಯುನಿವರ್ಸಿಟಿ ಅಫ್ ಚಿಕಾಗೊ, ಯುನಿವರ್ಸಿಟಿ ಆಫ್ ಸ್ಕಾನ್ಸಿನ್ ಮತ್ತು ಬ್ರೂಯು ಯುನಿವರ್ಸಿಟಿ ಆಫ್ ಜೆರುಸಲೆಂಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸಾಧನೆಗಾಗಿ ಮಹರ್ಷಿ ವೇದವ್ಯಾಸ ಪ್ರಶಸ್ತಿ, ಕಾವ್ಯಶಾಸ್ತ್ರ ಶಾರದ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿ ಸಿವೆ. ಪ್ರಸ್ತುತ ಇವರು ಮೈಸೂರಿನಿಂದ ಪ್ರಕಟವಾಗುವ ದಿನಪತ್ರಿಕೆ ‘ಸುಧರ್ಮಾ’ದ ಗೌರವ ಸಂಪಾದಕರಾಗಿದ್ದಾರೆ.







