ಸಂವಿಧಾನ, ಮಾನವ ಹಕ್ಕುಗಳ ರಕ್ಷಣೆ ಇಂದಿನ ಅಗತ್ಯ: ಡಾ.ಎಕ್ಕಾರು
ಛತ್ತೀಸ್ಗಢದಲ್ಲಿ ಕ್ರೈಸ್ತ ಧರ್ಮಭಗಿನಿಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಉಡುಪಿ: ಭಾರತೀಯ ಸಂವಿಧಾನದ ಮೂಲತತ್ವಗಳನ್ನು ರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅದಕ್ಕೆ ಚ್ಯುತಿ ಬಂದರೆ ಈ ದೇಶದಲ್ಲಿ ಸರ್ವಾಧಿಕಾರ ಮತ್ತೆ ತಲೆ ಎತ್ತಬಹುದು. ಇದೀಗ ಛತ್ತೀಸ್ ಗಢದಲ್ಲಿ ಕ್ರೈಸ್ತ ಧರ್ಮಭಗಿನಿಯರ ಮೇಲೆ ದೌರ್ಜನ್ಯ ಎಸಗುವ ಮೂಲಕ ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗಿದೆ. ಆದುದರಿಂದ ಸಂವಿಧಾನ, ಜಾತ್ಯತೀತ ಮೌಲ್ಯ ಹಾಗೂ ಮಾನವ ಹಕ್ಕುಗಳನ್ನು ನಾವೆಲ್ಲ ರಕ್ಷಿಸಬೇಕಾಗಿದೆ ಎಂದು ಹಿರಿಯ ಚಿಂತಕ ಡಾ.ಗಣನಾಥ್ ಎಕ್ಕಾರ್ ಹೇಳಿದ್ದಾರೆ.
ಛತ್ತೀಸ್ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರನ್ನು ಸುಳ್ಳು ಆರೋಪ ಹೊರಿಸಿ ಬಂಧಿಸಿರುವ ಹಾಗೂ ದೌರ್ಜನ್ಯ ನಡೆಸಿರುವ ಕ್ರಮವನ್ನು ಖಂಡಿಸಿ ಕಥೊಲಿಕ್ ಸಭಾ ಉಡುಪಿ ಪ್ರದೇಶದ ನೇತೃತ್ವದಲ್ಲಿ ಇತರ ಸಹಭಾಗಿ ಸಂಘಟನೆಗಳ ಸಹಕಾರದೊಂದಿಗೆ ಸೋಮವಾರ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಈ ದೇಶದ ಎಲ್ಲ ಪ್ರಜೆಗಳು ಸಮಾನರು ಎಂಬ ಸಂವಿಧಾನದ ಮೂಲ ತತ್ವದಂತೆ ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಅನುಸರಿಸುವ ಹಕ್ಕನ್ನು ಹೊಂದಿದ್ದಾರೆ. ಸಂವಿಧಾನದ ಮೂಲತತ್ವ ಸಹೋದ ರತೆ ಮತ್ತು ಸಹಬಾಳ್ವೆಗೆ ಧಕ್ಕೆ ಬಂದರೆ ಈ ದೇಶ ಆರ್ಥಿಕ, ಸಾಮಾಜಿಕ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣಲು ಸಾಧ್ಯವಿಲ್ಲ. ಮಾನವ ಹಕ್ಕುಗಳನ್ನು ರಕ್ಷಣೆ ಇಂದಿನ ಅತೀ ಅಗತ್ಯವಾಗಿದೆ ಎಂದರು.
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರಯ್ಯ ಅಂಜುಮ್ ಮಾತನಾಡಿ, ಶಾಂತಿಯಿಂದ ಯಾವುದೇ ಹೋರಾಟವನ್ನು ಗೆಲ್ಲಲು ಸಾಧ್ಯವಿದೆ ಎಂದು ತೋರಿಸಿಕೊಟ್ಟವರು ಗಾಂಧಿಜಿ. ಅದೇ ಮಾರ್ಗದಲ್ಲಿ ನಡೆಯುವವರು ಕ್ರೈಸ್ತ ಸಮುದಾಯದವರಾಗಿದ್ದಾರೆ. ರೋಗಿಗಳ ಸೇವೆಗೆ, ಶಿಕ್ಷಣವನ್ನು ಎತ್ತಿ ಹಿಡಿದು ಭಾರತ ವಿಶ್ವದಲ್ಲಿ ತಲೆ ಎತ್ತಿ ನಿಲ್ಲಲು ದಾರಿ ತೋರಿಸಿರುವುದು ಕ್ರೈಸ್ತ ಸಮುದಾಯ ಎಂದರು.
ಬೇಟಿ ಪಡಾವೋ ಬೇಟಿ ಬಚಾವೊ ಎನ್ನುವವರು ಇಂದು ಕ್ರೈಸ್ತ ಧರ್ಮ ಭಗಿನಿಯರ ನೋವಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕಾಗಿದೆ. ಶಾಂತಿ ಯನ್ನು ಜಪಿಸಿದ ಕ್ರೈಸ್ತ ಸಮುದಾಯಕ್ಕೆ ಮಾಡಿದ ಹಿಂಸೆ ಖಂಡನೀಯ. ಅಲ್ಪಸಂಖ್ಯಾತರ ವಿರುದ್ದ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ಭಾರತದ ಸಂವಿಧಾನದ ಅಡಿಯಲ್ಲೇ ಪ್ರತಿಭಟಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಕಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ರೊನಾಲ್ಡ್ ಆಲ್ಮೇಡಾ ಮಾತನಾಡಿ, ಬಂಧಿತ ಧರ್ಮಭಗಿನಿ ಯರನ್ನು ಷರತ್ತುಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಗೊಳಿಸಿದೆ. ಆದರೆ ಅವರ ಮೇಲೆ ಹಾಕಲಾಗಿರುವ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆದಿಲ್ಲ. ಅಲ್ಲದೆ ಧರ್ಮಭಗಿನಿಯರನ್ನು ಛತ್ತೀಸ್ ಘಡದ ದುರ್ಗ ರೈಲು ನಿಲ್ದಾಣದಲ್ಲಿ ಬಲಪಂಥೀಯ ಸಂಘಟನೆಗಳು ಅಮಾನವೀಯವಾಗಿ ನಡೆಸಿಕೊಂಡಿದ್ದು ಆ ಸಂಘಟನೆಗಳ ವಿರುದ್ದ ಕೂಡ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ಇದೊಂದು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು ಕ್ರೈಸ್ತ ಸಮುದಾಯದ ಬೇಡಿಕೆಗಳಿಗೆ ಛತ್ತೀಸ್ಘಡದ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಸೂಕ್ತವಾಗಿ ಸ್ಪಂದಿಸಬೇಕು ಎಂದರು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಕುಲಪತಿ ವಂ.ಸ್ಟೀಫನ್ ಡಿಸೋಜ, ಸಾರ್ವಜನಿಕ ಸಂಪರ್ಕಾಧಿ ಕಾರಿ ವಂ.ಡೆನಿಸ್ ಡೆಸಾ, ಧಾರ್ಮಿಕ ಗುರುಗಳ ಎಪಿಸ್ಕೋಪಲ್ ವಿಕಾರ್ ವಂ.ಜ್ಯೋ ತಾವ್ರೊ, ಸಹಬಾಳ್ವೆಯ ಅಧ್ಯಕ್ಷ ಪ್ರೊ.ಫಣಿರಾಜ್, ಭಾರತೀಯ ಕಥೊಲಿಕ್ ಯುವ ಸಂಚಾಲನ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ನಿತಿನ್ ಬಾರೆಟ್ಟೊ, ಕಥೊಲಿಕ್ ಸಭಾ ಕಾರ್ಯದರ್ಶಿ ಜೊಯೆಲ್, ಬ್ರಹ್ಮಾವರ ಸಿರಿಯನ್ ಒರ್ಥೊಡಕ್ಸ್ ಸಭೆಯ ವಿಕಾರ್ ಜನರಲ್ ವಂ.ಎಂ.ಸಿ. ಮಥಾಯಿ, ಕರ್ನಾಟಕ ಸದರ್ನ್ ಡಯಾಸಿಸ್ ಉಡುಪಿ ಎರಿಯಾ ಚೇರಮೆನ್ ಪಾಸ್ಟರ್ ಕಿಶೋರ್, ವಿವಿಧ ಸಭೆಗಳ ಧರ್ಮಗುರುಗಳು, ಧರ್ಮಭಗಿನಿಯರು, ಸಾವಿರಾರು ಸಂಖ್ಯೆಯಲ್ಲಿ ಸೇರಿದ ಕ್ರೈಸ್ತ ಬಂಧುಗಳು ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಿಂದ ಸಂಗ್ರಹಿಸಿದ ಸಹಿಗಳ ಮೂಲಕ ದೇಶದ ರಾಷ್ಟ್ರಪತಿಗಳಿಗೆ, ಪ್ರಧಾನ ಮಂತ್ರಿಗಳಿಗೆ, ಛತ್ತೀಸ್ ಘಡದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸ ಲಾಯಿತು. ಮನವಿಯನ್ನು ನಿಯೋಜಿತ ಅಧ್ಯಕ್ಷರಾದ ಲೂಯಿಸ್ ಡಿಸೋಜ ವಾಚಿಸಿದರು. ಸುಗಮ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸಿಲ್ವಿಯಾ ಸುವಾರಿಸ್ ವಂದಿಸಿದರು, ಸಾಮಾಜಿಕ ಕಾರ್ಯಕರ್ತೆ ವೆರೋನಿಕಾ ಕರ್ನೆಲಿಯೋ ಕಾರ್ಯಕ್ರಮ ನಿರೂಪಿಸಿದರು.
ಪ್ರಮುಖ ಬೇಡಿಕೆಗಳು
ಧರ್ಮಭಗಿನಿಯರ ಮೇಲೆ ಹೇರಲಾದ ಎಲ್ಲಾ ಕೇಸುಗಳನ್ನು ರದ್ದುಗೊಳಿಸಬೇಕು. ಬಲಪಂಥೀಯ ಸಂಘಟನೆಗಳಿಂದ ನಡೆದ ದೌರ್ಜನ್ಯದ ಕುರಿತು ಸೂಕ್ತವಾದ ತನಿಖೆ ನಡೆಸಬೇಕು ಮತ್ತು ಘಟನೆಗೆ ಕಾರಣರಾದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕು. ಅಲ್ಪ ಸಂಖ್ಯಾತರ ಮಾನವ ಹಕ್ಕು ಹಾಗೂ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ನಿಲ್ಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
‘ದೇಶದಾದ್ಯಂತ 30,000ಕ್ಕೂ ಅಧಿಕ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಂದ್ದು 50ಲಕ್ಷ ಜನರು ಅವುಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಅದರಲ್ಲಿ ೪೮ಲಕ್ಷ ಮಂದಿ ಪ್ರಯೋಜನ ಪಡೆಯುವವರು ಇತರ ಧರ್ಮದವರಾಗಿದ್ದಾರೆ. ಕ್ರೈಸ್ತರು ದೇಶದ ಅಭಿವೃದ್ಧಿಗೆ ಸ್ವಾತಂತ್ರ್ಯ ಪೂರ್ವದಿಂದಲೇ ತಮ್ಮ ಕೊಡುಗೆ ಯನ್ನು ನೀಡಿಕೊಂಡು ಬಂದಿದ್ದಾರೆ. ಸಾಹಿತ್ಯಕ್ಕೆ ಮೊದಲ ಕೊಡುಗೆ ನೀಡಿರುವುದು ಕೂಡ ಕ್ರೈಸ್ತ ಮಿಷನರಿಗಳಾಗಿದ್ದಾರೆ’
-ಡಾ.ಗಣನಾಥ ಎಕ್ಕಾರು, ಹಿರಿಯ ಚಿಂತಕ







