ನಿರ್ಮಲಾ ಸೀತಾರಾಮನ್ಗೆ ‘ಭಾರತ ಲಕ್ಷ್ಮೀ’ ಪ್ರಶಸ್ತಿ ಪ್ರದಾನ

ಉಡುಪಿ: ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಡೆದಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಸಂದರ್ಭದಲ್ಲಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಹಾಗೂ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರ ತೀರ್ಥರ ನೇತೃತ್ವದಲ್ಲಿ ಇಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ‘ಭಾರತ ಲಕ್ಷ್ಮೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು, ಕೇಂದ್ರ ಹಣಕಾಸು ಸಚಿವೆಯಾಗಿ, ದೇಶದ ಆರ್ಥಿಕ ಶಿಸ್ತು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ವೈಯಕ್ತಿಕವಾಗಿ ಶುದ್ಧವಾದ ಪ್ರಭಾವ ಹೊಂದಿರುವ ಅವರು, ತಮ್ಮ ಹೆಸರಿನಂತೆ ನಿರ್ಮಲರಾಗಿದ್ದಾರೆ ಎಂದು ಪುತ್ತಿಗೆ ಶ್ರೀಗಳು ಸಚಿವೆಯನ್ನು ಅಭಿನಂದಿ ಸುತ್ತಾ ನುಡಿದರು.
ಇದಕ್ಕೆ ಮುನ್ನ ಸ್ವಾಮೀಜಿಗಳೊಂದಿಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಮಠದಲ್ಲಿ ವಿವಿಧ ಸೇವೆಗಳನ್ನು ನೆರವೇರಿಸಿದರು. ಶ್ರೀಕೃಷ್ಣ ದೇವಸ್ಥಾನದ ಬಾಗಿಲು ಲಕ್ಷ್ಮಿಪೂಜೆಯನ್ನು ಅವರು ನೆರವೇರಿಸಿದರು. ಅವರೊಂದಿಗೆ ಇನ್ಫೋಸೀಸ್ನ ಸುಧಾ ಮೂರ್ತಿ ಅವರು ಸಹ ಹೊಸ್ತಿಲು ಪೂಜೆ ನೆರವೇರಿಸಿದರು.







