ಐಪಿಎಸ್ ಅಧಿಕಾರಿಗಳು ಮಾತ್ರವಲ್ಲ ಸಾಮಾನ್ಯ ಪೊಲೀಸರೂ ಹೀರೋಗಳು: ಎಸ್ಪಿ ಹರಿರಾಂ ಶಂಕರ್

ಕುಂದಾಪುರ, ನ.16: ಮುಂಜಾನೆಯಿಂದ ರಾತ್ರಿಯವರೆಗೆ ಕರ್ತವ್ಯ ನಿರ್ವಹಿಸುವ ಪೊಲೀಸರನ್ನು ಕೆಲವೊಮ್ಮೆ ವಾಸ್ತವಾಂಶ ತಿಳಿಯದೆ ಕೆಟ್ಟದಾಗಿ ಚಿತ್ರಿಸಲಾಗುತ್ತಿದೆ. ಐಪಿಎಸ್ ಅಧಿಕಾರಿಗಳು ಮಾತ್ರ ಹೀರೋಗಳಲ್ಲ, ಸಾಮಾನ್ಯ ಪೊಲೀಸರು ಕೂಡ ನಿಜವಾದ ಹೀರೋಗಳು. ಗೃಹ ಸಚಿವರ ಮಹತ್ವಾಕಾಂಕ್ಷೆಯ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ 3.10 ಲಕ್ಷ ಮನೆಗೆ ಪೊಲೀಸರು ಭೇಟಿ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದ್ದಾರೆ.
ಕುಂದಾಪುರ ಬೋರ್ಡ್ ಹೈಸ್ಕೂಲಿನ ರೋಟರಿ ಕಲಾಮಂದಿರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಹಭಾಗಿತ್ವದೊಂದಿಗೆ ಹಮ್ಮಿಕೊಳ್ಳಲಾಗಿರುವ ‘ಖಾಕಿ ಕಾರ್ಟೂನ್ ಹಬ್ಬ’ದ ಅಂಗವಾಗಿ ರವಿವಾರ ನಡೆದ ಸಾಧಕರ ಸನ್ಮಾನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಮೊದಲ ಬಾರಿ ಪೊಲೀಸರೊಂದಿಗೆ ಈ ರೀತಿಯ ಕಾರ್ಯಕ್ರಮ ಆಯೋಜನೆಯಾಗಿದೆ. ಪೊಲೀಸ್ ಅಧಿಕಾರಿಗಳ ಕ್ಯಾರಿಕೇಚರ್ ನೀಡುತ್ತಿರುವುದು ಸ್ವಾಗತಾರ್ಹ. ಸಾರ್ವಜನಿಕ ಕಾರ್ಯಕ್ರಮವೊಂದು ಪೊಲೀಸರಿಗೆ ಅರ್ಪಣೆ ಮಾಡಿರುವುದು ಅಭಿನಂದನಾರ್ಹ ಎಂದು ಅವರು ತಿಳಿಸಿದರು.
ಉಡುಪಿ ಬಾಳಿಗ ಆಸ್ಪತ್ರೆಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಸಮಾಜದ ಆಗುಹೋಗುಗಳ ನಡುವೆ, ಪೊಲೀಸರ ಒತ್ತಡದ ಕರ್ತವ್ಯ ಕಾಣಿಸುತ್ತಿದೆ. ಖಾಕಿ ಕಾರ್ಟೂನು ಹೆಸರಿನಲ್ಲಿ ಪೊಲೀಸ್ ಸೇವೆಯನ್ನು ವಿಶಿಷ್ಠ ರೀತಿಯಲ್ಲಿ ಗುರುತಿಸಿ ಅವರಿಗೆ ಖಾಕಿ ಸೆಲ್ಯೂಟ್ ನೀಡಿ ಗೌರವಿಸಲಾಗುತ್ತಿರುವುದು ಅಭಿನಂದನಾರ್ಹ. ಯುವ ವ್ಯಂಗ್ಯ ಚಿತ್ರಕಾರರನ್ನು ಬೆಳೆಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕುಂದಾಪುರದಲ್ಲಿ 12ನೇ ವರ್ಷಗಳಿಂದ ನಡೆಯುತ್ತಿರುವ ಕಾರ್ಟೂನು ಹಬ್ಬ ಭಾರತ ದೇಶದಲ್ಲಿಯೇ ಉತ್ತಮ ಪ್ರಯೋಗ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಪತ್ರಕರ್ತ ಜಯಶೇಖರ ಮಡಪ್ಪಾಡಿ, ಶಂಕರನಾರಾಯಣ ಮದರ್ ತೆರೆಸಾ ಶಾಲೆಯ ಶಮಿತಾ ರಾವ್ ಮಾತನಾಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಆರ್ಮಡ್ ರಿಸರ್ವ್ ಎಸ್ಸೈ ಶಂಕರ್, ಆರ್ಮಡ್ ಹೆಡ್ ಕಾನ್ಸ್ಟೆಬಲ್ ಗಳಾದ ರಾಜೇಶ್, ಅಶೋಕ್ ಪಾಟ್ಕರ್, ಆರ್ಮಡ್ ಕಾನ್ಸ್ಟೇಬಲ್ ಸಂತೋಷ್ ಕುಮಾರ್, ವ್ಯಂಗ್ಯ ಚಿತ್ರಕಾರ ಚಂದ್ರ ಕೋಡಿ, ಮಿಸ್ ಇಂಡಿಯಾ ಫ್ರೈಡ್ ಆಫ್ ಇಂಡಿಯಾ ವಿಜೇತೆ ನಿಶಾಲಿಯು ಕುಂದರ್, ಬಸ್ ಪಾರ್ಸೆಲ್ ನಿರ್ವಾಹಕ ಸಿರಾದಿಲ್ ಸಾಹೇಬ್ ಅವರನ್ನು ಸನ್ಮಾನಿಸಲಾಯಿತು.
ರೋಹಿತ್ ನಾಯ್ಕ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ನಡೆದ ಕಾರ್ಟೂನ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕಿ ರೋಹಿಣಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಟೂನ್ ಹಬ್ಬದ ಸಂಘಟಕ, ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ವಂದಿಸಿದರು.







