ಗ್ಯಾಸ್ ಬೆಲೆ ಏರಿಕೆ ನೆಪದಲ್ಲಿ ಆನ್ಲೈನ್ ವಂಚನೆ ಹೆಚ್ಚಳ: ಉಡುಪಿ ಎಸ್ಪಿ ಹರಿರಾಂ ಶಂಕರ್

ಉಡುಪಿ, ಮಾ.18: ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಎಲ್ಪಿಜಿ ಗ್ಯಾಸ್ ಬೆಲೆ ಏರಿಕೆಯಾಗುತ್ತಿರುವುದನ್ನೇ ನೆಪವಾಗಿಟ್ಟುಕೊಂಡು ಸೈಬರ್ ಅಪರಾಧಿಗಳು ಆನ್ಲೈನ್ ವಂಚನೆ ಎಸಗುತ್ತಿರುವುದು ವರದಿಯಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಮಾ.11ರಂದು ಸಂತೆಕಟ್ಟೆ ಮೂಲದ ಹಿರಿಯ ನಾಗರಿಕರಾದ ಲೀಲಿ ಪ್ರೋರಿನ್ ಡಿಸಿಲ್ವಾ ಎಂಬವರಿಗೆ ಮುಂಬೈ ಯಿಂದ ಮಹಾನಗರ ಗ್ಯಾಸ್ ಹೇಳಿಕೊಂಡು ಕರೆ ಮಾಡಿ, ವಾಟ್ಸಾಪ್ನಲ್ಲಿ ಎಪಿಕೆ ಆ್ಯಪ್ ಕಳುಹಿಸಿ 1,45,022ರೂ. ಹಣ ಆನ್ಲೈನ್ ವಂಚನೆ ಎಸಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಂಚಿಸಲಾದ ಹಣದಲ್ಲಿ 50ಸಾವಿರ ರೂ. ಹಣವನ್ನು ಫ್ರೀಝ್ ಮಾಡಿ ಉಳಿಸಿಕೊಳ್ಳಲಾಗಿದೆಂದು ಅವರು ಮಾಹಿತಿ ನೀಡಿದರು.
ಇಂತಹ ಮತ್ತೊಂದು ಪ್ರಕರಣ ಉಡುಪಿಯಲ್ಲಿ ದಾಖಲಾಗಿದ್ದು, ಇದರಲ್ಲಿಯೂ ಎಪಿಕೆ ಆ್ಯಪ್ ಕಳುಹಿಸಿ 6.5ಲಕ್ಷ ರೂ. ಹಣವನ್ನು ಆನ್ಲೈನ್ ನಲ್ಲಿ ವಂಚಿಸಲಾಗಿದೆ. ಡಾಟ್ ಎಪಿಕೆ ಫೈಲ್ ವಾಟ್ಸಾಪ್ನಲ್ಲಿ ಕಳುಹಿಸಿ ಡೌನ್ ಲೋಡ್ ಮಾಡಲು ಹೇಳುವುದು ಸೈಬರ್ ಅಪರಾಧಕ್ಕಾಗಿ ಮಾತ್ರ. ಬೇರೆ ಯಾರು ಕೂಡ ಇಂತಹ ಫೈಲ್ ಕಳುಹಿಸಿ ಡೌನ್ಲೌಡ್ ಮಾಡಲು ಹೇಳುವುದಿಲ್ಲ. ಹಾಗಾಗಿ ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಅವರು ತಿಳಿಸಿದರು.
ಕೆಲವು ಆನ್ಲೈನ್ ವಂಚಕರು ಕರೆ ಮಾಡಿ ನಮ್ಮ ಆ್ಯಪ್ನಲ್ಲಿ ಗ್ಯಾಸ್ ಬುಕ್ ಮಾಡಿದರೆ ಕೂಡಲೇ ಗ್ಯಾಸ್ ಡಿಲಿವರಿಯಾಗುತ್ತದೆ, ಹಳೆಯ ಸ್ಟಾಕ್ ಗ್ಯಾಸ್ ಸಿಲಿಂಡರ್ನ್ನು ಹಳೆಯ ದರದಲ್ಲಿಯೇ ನೀಡುತ್ತೇವೆ, ಈಗಾಲೇ ಬುಕ್ ಮಾಡಿ ಗ್ಯಾಸ್ ಪಡೆದುಕೊಳ್ಳಿ ಎಂದು ಹೇಳಿಕೊಂಡು ಲಿಂಕ್, ವೆಬ್ಸೈಟ್, ಆ್ಯಪ್ಗಳನ್ನು ಕಳುಹಿಸಿ ವಂಚನೆ ಮಾಡುತ್ತಿದ್ದಾರೆ. ಇದನ್ನು ನಂಬಿ ಯಾರು ಕೂಡ ಮೋಸ ಹೋಗಬಾರದು. ಈ ಹಿಂದೆ ಹೇಗೆ ಗ್ಯಾಸ್ ಬುಕ್ ಮಾಡಿ ಪಡೆಯುತ್ತಿದ್ದಿರೋ ಅದೇ ರೀತಿ ಗ್ಯಾಸ್ ಪಡೆದುಕೊಳ್ಳಿ ಎಂದರು.
ಗೃಹ ಬಳಕೆ ಅನಿಲದಲ್ಲಿ ಯಾವುದೇ ಕೊರತೆ ಇಲ್ಲ ಎಂದು ಈಗಾಗಲೇ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಆದುದರಿಂದ ಫಾಸ್ಟ್ ಗ್ಯಾಸ್ ಬುಕಿಂಗ್, ಕಡಿಮೆ ದರದಲ್ಲಿ ಗ್ಯಾಸ್, ಕೆವೈಎಸಿ ಅಪ್ಡೇಟ್ ಮಾಡಲು ಹೇಳಿ ಯಾರಾದರೂ ಕರೆ ಮಾಡಿದರೆ ಯಾವುದೇ ಕಾರಣಕ್ಕೂ ನಂಬಬಾರದು. ಅದರಲ್ಲಿ ಯಾವುದೇ ಸಂಶಯ ಇದ್ದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ. ಒಂದು ವೇಳೆ ವಂಚನೆಗೆ ಒಳಗಾದರೆ ಕೂಡಲೇ ಠಾಣೆಗೆ ಬಂದು ದೂರು ಕೊಡಿ. ಇದರಿಂದ ಕಳೆದುಕೊಂಡ ಹಣದಲ್ಲಿ ಬಹುತೇಕ ಹಣ ವಾಪಾಸ್ಸು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.







