ಉಪ್ಪೂರು ಬೀದಿನಾಯಿ ಶೆಲ್ಟರ್ ನಿರ್ಮಾಣಕ್ಕೆ ವಿರೋಧ: ಗ್ರಾಮಸ್ಥರಿಂದ ಪ್ರತಿಭಟನೆ

ಉಡುಪಿ, ಫೆ.6: ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಬೀದಿ ನಾಯಿ ಶೆಲ್ಟರ್ಗೆ ವಿರೋಧ ವ್ಯಕ್ತಪಡಿಸಿ ಉಪ್ಪೂರು, ಹಾವಂಜೆ ಹಾಗೂ ಆರೂರು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತವು ಉಪ್ಪೂರು ಗ್ರಾಮದ 9.9 ಎಕರೆ ಪ್ರದೇಶದಲ್ಲಿ ಬೀದಿನಾಯಿಗಳ ಶೆಲ್ಟರ್ ನಿರ್ಮಾಣ ಮಾಡಲು ಮುಂದಾಗಿದ್ದು, ಇದಕ್ಕೆ ಮೂರು ಗ್ರಾಮಗಳ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ, ಕೂಡಲೇ ಈ ಶೆಲ್ಟರ್ನ್ನು ಕೈಬಿಟ್ಟು ಬೇರೆ ನಿರ್ಜನ ಪ್ರದೇಶಕ್ಕೆ ವರ್ಗಾಯಿಸಬೇಕೆಂದು ಆಗ್ರಹಿಸಿದರು.
‘ಉಡುಪಿ ಜಿಲ್ಲೆಯ ಸುಮಾರು 18ಸಾವಿರ ಬೀದಿ ನಾಯಿಗಳನ್ನು ಉಪ್ಪೂರಿನ ಚುಕ್ಕುಲಿಕಟ್ಟೆ ಹತ್ತಿರ 9.9 ಎಕರೆ ಜಾಗದಲ್ಲಿ ಆಶ್ರಯ ತಾಣ ನಿರ್ಮಿಸಲು ಸರ್ವೆ ಕಾರ್ಯ ನಡೆದಿದ್ದು, ಮುಂದಿನ ದಿನಗಳಲ್ಲಿ ಈ ಬೀದಿ ನಾಯಿಗಳ ಶೆಲ್ಟರ್ ನಿರ್ಮಾಣವಾದರೆ ಸುತ್ತಮುತ್ತಲಿನ ಗ್ರಾಮದ ಜನರಿಗೆ ಸಾಕಷ್ಟು ಸಮಸ್ಯೆ ತಲೆದೋರಲಿದೆ ಎಂದು ಸ್ಥಳೀಯರಾದ ಅಜಿತ್ ಶೆಟ್ಟಿ ಆರೋಪಿಸಿದರು.
‘ಬೀದಿ ನಾಯಿ ಶೆಲ್ಟರ್ ನಿರ್ಮಿಸಲು ಗುರುತಿಸಿರುವ ಜಾಗದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಯನ್ನು ತರಬಹು ದಾಗಿದೆ. ಈ ಜಾಗದ ಸುತ್ತಮುತ್ತ ಸುಮಾರು 200 ಮನೆಗಳಿವೆ. ನಾಯಿಗಳ ಮಲಮೂತ್ರ ವಿಸರ್ಜನೆಯ ನೀರು ಸಮೀಪದ ಬೆಳ್ಮಾರಿನ ತೋಡಿನಲ್ಲಿ ಹರಿದು ಹೊಳೆಗೆ ಸೇರುತ್ತದೆ. ಇದರಿಂದ ಬೆಳ್ಮಾರಿನ ಜನರಿಗೆ ಅನಾರೋಗ್ಯ ಕಾಡಲಿದೆ. ಅಲ್ಲದೆ ಬಾವಿಯ ನೀರು ಕೂಡ ಕಲುಷಿತವಾಗಲಿದೆ. ಚರ್ಮರೋಗದ ಭೀತಿ ಕೂಡ ಇಲ್ಲಿನ ಜನರಿಗೆ ಎದುರಾಗಲಿದೆ. ಅದೇ ರೀತಿ ಕಾಡು ಪ್ರಾಣಿಗಳ ಹಾವಳಿ ಕೂಡ ಹೆಚ್ಚಾಗಲಿದೆ’ ಎಂದು ಪ್ರತಿಭಟನಕಾರರು ದೂರಿದರು.
‘9.9. ಎಕರೆ ಜಾಗದಲ್ಲಿ ಬೀದಿ ನಾಯಿ ಶೆಲ್ಟರ್ ನಿರ್ಮಿಸಿದರೆ ಸುತ್ತಮುತ್ತಲಿನ ಉಳಿದ 90 ಎಕರೆ ಜಾಗದಲ್ಲಿ ಯಾವುದೇ ಉತ್ತಮ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ. ಈ ಜಾಗವು 2016ನೇ ಇಸವಿಯಿಂದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಸೂಚನೆಯಂತೆ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ. ಮುಂದಿನ ದಿನಗಳಲ್ಲಿ ನಗರಸಭೆ ವ್ಯಾಪ್ತಿಗೂ ಈ ಜಾಗ ಬರಲಿದೆ. ಆದುದರಿಂದ ಇಲ್ಲಿ ಬೀದಿನಾಯಿ ಶೆಲ್ಟರ್ ನಿರ್ಮಿಸುವುದು ಸಮಂಜಸವಲ್ಲ’ ಎಂದು ಹೋರಾಟಗಾರ ಅಶ್ವಿನ್ರೋಚ್ ತಿಳಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್ ಮುಖಂಡ ಪ್ರಸಾದ್ರಾಜ್ ಕಾಂಚನ್, ಉಪ್ಪೂರು ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಆರೂರು ಗ್ರಾಪಂ ಅಧ್ಯಕ್ಷ ಗುರುರಾಜ್ ಭಟ್, ಹಾವಂಜೆ ಗ್ರಾಪಂ ಅಧ್ಯಕ್ಷೆ ಆಶಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ತಾಪಂ ಮಾಜಿ ಅಧ್ಯಕ್ಷರಾದ ನಳಿನಿ ಪ್ರದೀಪ್, ವರೋನಿಕಾ ಕರ್ನೆಲಿಯೋ, ಧರ್ಮಗುರು ಫಾ.ಲಾರೆನ್ಸ್ ಡಿಸೋಜ, ಪ್ರಮುಖರಾದ ಅಶ್ವಿನ್ರಾಜ್, ಭಾಸ್ಕರ ಶೆಟ್ಟಿ ಅಮ್ಮುಂಜೆ, ಸತೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
‘ಜಿಲ್ಲಾಡಳಿತ ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿಯಾಗಿ ಈ ಶೆಲ್ಟರ್ ನಿರ್ಮಿಸಲು ಮುಂದಾಗಿದೆ. ಈ ಜಾಗದಲ್ಲಿ ವಿಶ್ವವಿದ್ಯಾನಿಲಯ, ವಿಮಾನ ನಿಲ್ದಾಣದಂತಹ ಬೃಹತ್ ಯೋಜನೆಗಳನ್ನು ಅನುಷ್ಠಾನಗೊಳಿಸಲು ಈ ಹಿಂದೆ ಚರ್ಚೆಗಳು ನಡೆದಿತ್ತು. ಮುಂದೆ ಈ ಶೆಲ್ಟರ್ ನಿರ್ಮಾಣವಾಗು ವುದರಿಂದ ಈ ಎಲ್ಲ ಅಭಿವೃದ್ಧಿ ಯೋಜನೆಗಳು ಕೈತಪ್ಪಿ ಹೋಗುವ ಸಾಧ್ಯತೆ ಇದೆ. ಆದುದರಿಂದ ಇಲ್ಲಿಂದ ಈ ಯೋಜನೆಯನ್ನು ಬೇರೆ ಕಡೆ ವರ್ಗಾಯಿಸ ಬೇಕು’
-ಸತೀಶ್ ಪೂಜಾರಿ, ಸಾಮಾಜಿಕ ಕಾರ್ಯಕರ್ತರು
‘ಜನವಸತಿ ಪ್ರದೇಶದಲ್ಲಿ ಬೀದಿನಾಯಿಗಳ ಶೆಲ್ಟರ್ ನಿರ್ಮಿಸುವುದು ಸರಿಯಲ್ಲ. ನೀರು ಇಂಗುವ ಈ ಜಾಗದಲ್ಲಿ ನಾಯಿಗಳನ್ನು ಸಾಕಿದರೆ ಮುಂದೆ ಸುತ್ತಮುತ್ತಲಿನ ಬಾವಿ ನೀರು ಕೂಡ ಮಲೀನವಾಗಬಹುದು. ಜಿಲ್ಲಾಡಳಿತ ಈ ವಿಚಾರದಲ್ಲಿ ದೊಡ್ಡ ತಪ್ಪು ಮಾಡಿದೆ. ಜನರಿಗೆ ಸಮಸ್ಯೆಯಾಗುವ ಯೋಜನೆಗಳ ವಿರುದ್ಧ ಜನಪ್ರತಿನಿಧಿಗಳು ಧೈರ್ಯ ಹಾಗೂ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕು. ಆಗ ಮಾತ್ರ ಇದಕ್ಕೆ ನ್ಯಾಯ ಸಿಗಲು ಸಾಧ್ಯ’
-ವರೋನಿಕಾ ಕರ್ನೆಲಿಯೋ, ಮಾಜಿ ತಾಪಂ ಅಧ್ಯಕ್ಷರು






