ಕಸತ್ಯಾಜ್ಯ ಮರುಪೂರಣಗೊಳಿಸುವ ಕಾರ್ಖಾನೆ ನಿರ್ಮಾಣಕ್ಕೆ ವಿರೋಧ

ಉಡುಪಿ: ನಗರದ ಬೀಡಿನಗುಡ್ಡೆ ವೃತ್ತದಿಂದ ಅಲೆವೂರು ಸಂಪರ್ಕಿಸುವ ಮುಖ್ಯ ರಸ್ತೆ ಸಮೀಪ ಕಸ ತ್ಯಾಜ್ಯಗಳನ್ನು ಮರುಪೂರಣ ಗೊಳಿಸುವ ಕಾರ್ಖಾನೆ ನಿರ್ಮಾಣದ ಹಂತದಲ್ಲಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಬರುವ 35 ವಾರ್ಡುಗಳಲ್ಲಿ ಸಂಗ್ರಹಗೊಂಡ ಕಸಗಳನ್ನು ಇಲ್ಲಿ ದಾಸ್ತಾನು ಇಟ್ಟು, ಹಂತ ಹಂತವಾಗಿ ನಿರ್ಮಾಣವಾಗುವ ಕಾರ್ಖಾನೆಯಲ್ಲಿ ಮರುಬಳಕೆಗೆ ಯೋಗ್ಯವಾದ ಕಚ್ಚಾವಸ್ತು, ಗೊಬ್ಬರ ಸಿದ್ಧಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಯೋಜನೆ ಸಮಾಜಕ್ಕೆ ಪೂರಕವಾಗಿದ್ದರೂ, ನಗರ ಭಾಗದಲ್ಲಿ ಕಾರ್ಖಾನೆ ರೂಪಿಸುತ್ತಿರುವ ಅವೈಜ್ಞಾನಿಕವಾಗಿದೆ. ನಗರದಿಂದ ಹೊರ ವಲಯದಲ್ಲಿರುವ ಜನವಸತಿ ರಹಿತ ಪ್ರದೇಶದಲ್ಲಿ ಈ ಕಾರ್ಖಾನೆ ಸ್ಥಾಪಿಸುವುದು ವೈಜ್ಞಾನಿಕ ಕ್ರಮವಾಗಿದೆ. ಈ ಕಾರ್ಖಾನೆಯಿಂದ ಪರಿಸರ ಮಾಲಿನ್ಯ ಉಂಟಾಗುವುದು ಖಂಡಿತ ಎಂದು ಸಮಾಜ ಸೇವಕ, ನಗರಸಭೆಯ ಮಾಜಿ ಸದಸ್ಯ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.
ಯಂತ್ರೋಪಕರಣಗಳ ಕರ್ಕಶ ಸದ್ದಿನಿಂದ ಶಬ್ಧ ಮಾಲಿನ್ಯವಾಗುದಲ್ಲದೆ, ಸಂಗ್ರಹಿಸಿಡುವ ಕಸ ತಾಜ್ಯಗಳಿಂದ ಗಬ್ಬು ವಾಸನೆ ಪರಿಸರದಲ್ಲಿ ಪಸರಿಸಿ ವ್ಯಾಧಿಗಳ ಹುಟ್ಟಿಗೆ ಕಾರಣವಾಗಬಹುದು. ಇಂಧನದಿಂದ ಕರ್ತವ್ಯ ನಿರ್ವಹಿಸುವ ಘನ ಯಂತ್ರಗಳು, ಹೊರಸೂಸುವ ಧೂಮದಿಂದ ವಾಯು ಮಾಲಿನ್ಯ ಉಂಟಾಗಿ ನಗರದ ಜನತೆಯು ಉಸಿರಾಡಲು ವಿಷಗಾಳಿಯನ್ನು ಸೇವಿಸಬೇಕಾದ ಎದುರಾಗುತ್ತದೆ.
ಈ ಪ್ರದೇಶದಲ್ಲಿ ವಸತಿ ಸಮುಚ್ಚಯಗಳು, ವಸತಿಗಳು, ವಾಣಿಜ್ಯ ಕಟ್ಟಡಗಳು, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಶೃದ್ಧಾ ಕೇಂದ್ರಗಳು, ವಲಸೆ ಕಾರ್ಮಿಕರ ಸಾವಿರಾರು ಜೋಪಡಿಗಳು ಇಲ್ಲಿವೆ. ನಗರ ಪ್ರದೇಶದಲ್ಲಿ ಮಾರಕ ಎನಿಸಿರುವ ಈ ಯೋಜನೆ ರದ್ದುಗೊಳಿಸಬೇಕು. ಆಯಾಕಟ್ಟಿನ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಪರಿಸರವಾಗಳು, ಸಂಘ ಸಂಸ್ಥೆಗಳ, ಹಾಗೂ ನಾಗರಿಕ ಸಮಾಜದ ಬೆಂಬಲ ಪಡೆದು ಪ್ರತಿಭಟಿನೆ ನಡೆಸಲಾಗು ವುದು ಎಂದು ನಿತ್ಯಾನಂದ ಒಳಕಾಡು ಎಚ್ಚರಿಕೆ ನೀಡಿದ್ದಾರೆ.






