ಪಡುಬಿದ್ರಿ | ಅದಾನಿ ಪವರ್: ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯಲ್ಲಿ 37 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಪಡುಬಿದ್ರಿ: ಇಲ್ಲಿಗೆ ಸಮೀಪದ ಎಲ್ಲೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಪವರ್ ಲಿಮಿಟೆಡ್ನ ಸಿಎಸ್ಆರ್ ನಿಧಿಯಲ್ಲಿ ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 37 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಅದಾನಿ ಸಂಸ್ಥೆಯು ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಬಡಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನಿರ್ಮಿಸಿದ 17 ಲಕ್ಷ ರೂ.ಗಳ ನೂತನ ಮಾರುಕಟ್ಟೆ ಸಂಕೀರ್ಣ ಹಾಗೂ 20 ಲಕ್ಷ ರೂ.ನಲ್ಲಿ ಮಾರುಕಟ್ಟೆ ವಿಸ್ತರಣೆ, ಸಾರ್ವಜನಿಕ ಶೌಚಾಲಯ ನಿರ್ಮಾಣದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಕಾಮಗಾರಿಗೆ ಚಾಲನೆ ನೀಡಿದ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಗ್ರಾಮೀಣ ಸಮುದಾಯಗಳನ್ನು ಸಬಲೀಕರಿಸುವುದು ಸಂಸ್ಥೆಯ ಪ್ರಮುಖ ಗುರಿಯಾಗಿದ್ದು, ಕೃಷಿ ಮೂಲಸೌಕರ್ಯವನ್ನು ಬಲಪಡಿಸುವುದು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಗೆ ಅವಶ್ಯಕ. ಹೊಸ ಮಾರುಕಟ್ಟೆ ರೈತರಿಗೆ ಹೆಚ್ಚು ಆದಾಯ ಮತ್ತು ಪಾರದರ್ಶಕ ಮಾರಾಟ ವ್ಯವಸ್ಥೆಯನ್ನು ಒದಗಿಸುವ ಮೂಲಕ ಮಹತ್ವದ ಪ್ರಯೋಜನ ನೀಡಲಿದೆ ಎಂದರು.
ಬಡಾಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದುವರೆಗೆ 1.51 ಕೋಟಿ ರೂ. ಮೌಲ್ಯದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಗ್ರಾಮಸ್ಥರ ಉಪಯೋಗಕ್ಕೆ ಸಮರ್ಪಿಸಲಾಗಿದೆ ಎಂದರು.
ಬಡಾಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್ ಮಾತನಾಡಿದರು.
ಪಂಚಾಯತ್ ಸದಸ್ಯರಾದ ಇಂದಿರಾ ಶೆಟ್ಟಿ, ಅಬ್ದುಲ್ ಮಜೀದ್, ಶಕುಂತಲಾ, ನಿರ್ಮಲಾ, ರಜಾಕ್, ಮೋಹಿನಿ ಸುವರ್ಣ, ಕಲಾವತಿ, ತಾಲೂಕು ಪಂಚಾಯತ್ ಮಾಜಿ ಸದ್ಯಸ್ಯ ಯು.ಸಿ. ಶೇಕಬ್ಬ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ, ಪಂಚಾಯತ್ ಸಿಬ್ಬಂಧಿ ಶಶಿಕಾಂತ್ ಕುಮಾರ್, ಸ್ಥಳೀಯರು ಹಾಗೂ ಅದಾನಿ ಪವರ್ ಲಿಮಿಟೆಡ್ನ ರವಿ ಆರ್. ಜೇರೆ ಮತ್ತು ಅದಾನಿ ಫೌಂಡೇಷನ್ನ ಅನುದೀಪ್ ಉಪಸ್ಥಿತರಿದ್ದರು.







