ಪಡುಬಿದ್ರೆ| ನಕಲಿ ಚಿನ್ನ ನೀಡಿ ವಂಚನೆ ಪ್ರಕರಣ: ಸೊತ್ತು ಸಹಿತ ಇಬ್ಬರ ಬಂಧನ

ಉಡುಪಿ, ಮಾ.23: ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ಚಿನ್ನ ನೀಡಿ ಮಹಿಳೆಯನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಮಾ.23ರಂದು ವಶಕ್ಕೆ ಪಡೆದುಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿ ಬಲ್ಲಾಪುರ ಬುಡುಗನಹಳ್ಳಿ ನಿವಾಸಿ ಕಾವ್ಯ(32) ಹಾಗೂ ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ತಾಲೂಕಿನ ವೆಂಕಟೇಶ್(42) ಎಂಬವರನ್ನು ವಶಕ್ಕೆ ಪಡೆದ ಆರೋಪಿಗಳು. ಇವರಿಂದ 7.610 ಗ್ರಾಂ ಚಿನ್ನಾಭರಣ ಮತ್ತು 6000ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಜ.13ರಂದು ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ಬಸ್ಸಮ್ಮ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿ ಮತ್ತು ಮಹಿಳೆ ಲಕ್ಷ್ಮೀ ಪೆಂಡೆಂಟ್ ಇರುವ ಚಿನ್ನದಂತೆ ತೋರುವ ನಕಲಿ ಸರವನ್ನು ತೋರಿಸಿದರು. ಈ ಚಿನ್ನದ ಸರದಲ್ಲಿ 6 ಪವನ್ ಇದ್ದು, ಹಣದ ತುರ್ತು ಅವಶ್ಯಕತೆ ಇದೆ ಎಂದು ನಂಬಿಸಿ ಬಸ್ಸಮ್ಮ ಅವರಿಗೆ ನೀಡಿದರು.
ಬಸ್ಸಮ್ಮ ಅವರಲ್ಲಿದ್ದ ಸುಮಾರು 2 ಪವನು ತೂಕದ 1.50ಲಕ್ಷ ರೂ. ಮೌಲ್ಯದ ಚಿನ್ನದ ಒಡವೆಗಳನ್ನು ಹಾಗೂ ನಗದು 6000ರೂ.ವನ್ನು ನೀಡಿದರು. ಬಳಿಕ ಬಸ್ಸಮ್ಮ ಆರೋಪಿಗಳಿಂದ ಪಡೆದ ಸರವನ್ನು ಪರಿಶೀಲಿಸಲು ಹತ್ತಿರದ ಚಿನ್ನದ ಅಂಗಡಿಗೆ ಹೋದಾಗ ಅದು ನಕಲಿ ಎಂದು ತಿಳಿಯಿತು. ನಂತರ ವಾಪಾಸ್ಸು ಬಂದು ನೋಡಿದಾಗ ಅವರಿಬ್ಬರು ಅಲ್ಲಿಂದ ಪರಾರಿಯಾಗಿದ್ದರು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ಎಸ್ಪಿ ಹರಿರಾಮ್ ಶಂಕರ್ ಆದೇಶದಂತೆ ಹೆಚ್ಚುವರಿ ಎಸ್ಪಿ ಸುಧಾಕರ ಎಸ್.ನಾಯ್ಕ್, ಕಾರ್ಕಳ ಡಿವೈಎಸ್ಪಿ ವಿಜಯಪ್ರಸಾದ್, ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಮಾರ್ಗದರ್ಶನದಂತೆ ಪಡುಬಿದ್ರಿ ಪೊಲೀಸ್ ಠಾಣಾ ಎಸ್ಸೈಗಳಾದ ಸಕ್ತಿವೇಲು ಮತ್ತು ಅನಿಲ್ ಕುಮಾರ್ ನಾಯಕ್, ಎಎಸ್ಸೈಗಳಾದ ರಾಜೇಶ್ ಪಿ., ಗಿರೀಶ್ ಯು.ಆರ್. ಸಿಬಂದಿ ಕೃಷ್ಣಪ್ರಸಾದ್, ಸಂದೇಶ್ ಭಂಡಾರಿ, ರುಕ್ಮಿಣಿ ಮತ್ತು ಶಿರ್ವ ಮಹಿಳಾ ಸಿಬ್ಬಂದಿ ಜ್ಯೋತಿ ಕಾರ್ಯಾಚರಣೆ ನಡೆಸಿದ್ದಾರೆ.






