ಪಡುಬಿದ್ರಿ: ಆದಿವಾಸಿಗಳ ಹಕ್ಕುಗಳ ಪಡುಬಿದ್ರಿ ವಲಯದ ಸಮ್ಮೇಳನ

ಪಡುಬಿದ್ರಿ: ಕರಾವಳಿ ಕರ್ನಾಟಕದ ಮೂಲ ನಿವಾಸಿಗಳಾಗಿರುವ ಕೊರಗ ಸಮುದಾಯದ ವಂಶವಾಹಿ ಕೇವಲ ಕೊರಗರಲ್ಲಿ ಮಾತ್ರವಲ್ಲದೆ ಎಲ್ಲರಲ್ಲಿಯೂ ಇದೆ ಎಂದು ನಿವೃತ್ತ ಪ್ರಾಧ್ಯಾಪಕ ಕೆ. ರಾಜೇಂದ್ರ ಉಡುಪ ಅಭಿಪ್ರಾಯಪಟ್ಟರು.
ಅಡ್ವೆ ಆನಂದಿ ಸಭಾಭವನದಲ್ಲಿ ರವಿವಾರ ನಡೆದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಪಡುಬಿದ್ರಿ ವಲಯದ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ನಮ್ಮೆಲ್ಲರ ನಾಗರಿಕ ಬದುಕಿನ ಕಾರಣಕರ್ತರಾಗಿರುವ ಕೊರಗ ಸಮುದಾಯಕ್ಕೆ ಚಾರಿತ್ರಿಕ ಅನ್ಯಾಯವೆಸಗಲಾಗಿದೆ. ಪೆರಿಯಾರ್ ಅವರ ಸೆಲ್ಫ್ ರೆಸ್ಪೆಕ್ಟ್ ಚಳವಳಿಯಿಂದ ಸ್ಫೂರ್ತಿ ಪಡೆಯಬೇಕಾಗಿದೆ ಎಂದರು.
ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತನಾಡಿ, ಮುಹಮ್ಮದ್ ಪೀರ್ ವರದಿಯ ಸಮಗ್ರ ಅನುಷ್ಟಾನ ಮತ್ತು ಒಳಮೀಸಲಾತಿ ಕೇವಲ ಕೊರಗ ಸಮುದಾಯ ಮಾತ್ರವಲ್ಲದೆ ನಾಗರಿಕ ಸಮುದಾಯ ಹೋರಾಟಕ್ಕೆ ಇಳಿಯುವ ಅವಶ್ಯಕತೆ ಇದೆ ಎಂದು ಹೇಳಿದರು.
ಸಮಾವೇಶದಲ್ಲಿ ಹಲವಾರು ಜನಪರ, ಸಮುದಾಯದ ಅಭ್ಯುದಯಕ್ಕಾಗಿ ವಿಚಾರ ಸಂಕಿರಣಗಳು ನಡೆಯಿತು. ಕರಿಯ ಕೆ., ಮಹಿಳಾ ಪರ ಹೋರಾಟಗಾರ್ತಿ ಕೀರ್ತಿ ಸಾಲ್ಯಾನ್, ದೀಪಕ್ ಕಾಮತ್ ಮಾತನಾಡಿದರು. ಸಂಘಟನೆ ನಾಯಕ ಶಶಿಧರ ಕೆರೆಕಾಡು ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಪದಾಧಿಕಾರಿಗಳಾದ ಟಿ. ಪ್ರಾನಿಸ್ ಸಲ್ದಾನ, ಟಿ. ಉಮರಬ್ಬ, ಉಮ್ಮರ್ ಕಾಸಿಂ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಐ. ಲಕ್ಷ್ಮೀಕಾಂತ ರಾವ್ ಇನ್ನಾ ಸ್ವಾಗತಿಸಿದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಇನ್ನಾ ಹಾಗೂ ಪ್ರಮೀಳ ಕೆ. ಕಾರ್ಯಕ್ರಮ ನಿರೂಪಿಸಿದರು.







