ದುಬೈಯಲ್ಲಿದ್ದ ಕಾರ್ಕಳ ಮೂಲದ ವ್ಯಕ್ತಿಗೆ 12.25 ಲಕ್ಷ ರೂ. ಆನ್ಲೈನ್ ವಂಚನೆ

ಸಾಂದರ್ಭಿಕ ಚಿತ್ರ
ಉಡುಪಿ, ಡಿ.3: ದುಬೈಯಲ್ಲಿ ಉದ್ಯೋಗದಲ್ಲಿದ್ದ ಕಾರ್ಕಳ ಮೂಲದ ವ್ಯಕ್ತಿಯೊಬ್ಬರಿಗೆ ಹಣ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆರ್ಮುಂಡೆ ಬೀಜಪಾಡಿಯ ಲಿಯೊ ಜೆರೋಮ್ ಮೆಂಡೋನ್ಸಾ ಸುಮಾರು 15 ವರ್ಷಗಳಿಂದ ದುಬೈಯಲ್ಲಿ ಕೆಲಸ ಮಾಡಿಕೊಂಡಿದ್ದು, ಕಾರ್ಕಳ ಕಣಜಾರು ಹಾಗೂ ನಿಟ್ಟೆ ದೂಪದಕಟ್ಟೆಯ ಬ್ಯಾಂಕ್ಗಳಲ್ಲಿ ಖಾತೆಯನ್ನು ಹೊಂದಿದ್ದರು. ನ.12ರಂದು ಇವರು ದುಬೈಯಲ್ಲಿ ಇರುವಾಗ ಟೆಲಿಗ್ರಾಂ ಖಾತೆಯಲ್ಲಿ ಅಪರಿಚಿತರು ಸಂಪರ್ಕಿಸಿ ಹಣ ಹೂಡಿಕೆ ಮಾಡಲು ಪ್ರೇರೇಪಿಸಿದರು.
ಅದರಂತೆ ಲಿಯೊ ಹಣ ಹೂಡಿಕೆ ಮಾಡಿದ್ದು, ಅದಕ್ಕೆ ಅಪರಿಚಿತರು ಹೆಚ್ಚಿನ ಲಾಭಾಂಶ ನೀಡುತ್ತಿದ್ದರು. ಅದೇ ರೀತಿ ವಿವಿಧ ಟಾಸ್ಕ್ಗಳನ್ನು ನೀಡಿ, ವೆಬ್ ವಿಳಾಸ ನೀಡಿ ಅದರಲ್ಲಿ ಯೂಸರ್ ನೇಮ್ ಮತ್ತು ಐಡಿ ಹಾಕುವಂತೆ ತಿಳಿಸಿದರು. ಅದರಂತೆ ಮಾಡಿದ ಲಿಯೊ, ನ.15ರಿಂದ 17ರವರೆಗೆ ಹಂತ ಹಂತವಾಗಿ ಒಟ್ಟು 12,25,000 ರೂ. ಗಳನ್ನು ಹೂಡಿಕೆ ಮಾಡಿದರು. ಬಳಿಕ ಆರೋಪಿಗಳು ಲಿಯೊ ಅವರಿಗೆ ಹೂಡಿಕೆ ಮಾಡಿದ ಹಣವನ್ನಾಗಲೀ ಅದರ ಲಾಭಾಂಶವನ್ನಾಗಲಿ ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.





