ಸಮಾಜದಲ್ಲಿ ಗಟ್ಟಿಧ್ವನಿಯಲ್ಲಿ ಅಪಪ್ರಚಾರ, ಸುಳ್ಳು ವ್ಯಾಪಕ: ಮುಹಮ್ಮದ್ ಕುಂಞಿ

ಉಡುಪಿ: ಹಗೆತನ ಮತ್ತು ದ್ವೇಷ ಇಂದು ಸಮಾಜವನ್ನು ದುರ್ಬಲಗೊಳಿಸುತ್ತಿರುವಾಗ ಪ್ರವಾದಿ ಮುಹಮ್ಮದ್(ಸ) ವಿಚಾರಗಳನ್ನು ಹೆಚ್ಚು ಅರಿಯಬೇಕಾದ ಅನಿವಾರ್ಯತೆಯಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಹೇಳಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ಹೂಡೆಯ ವತಿಯಿಂದ ಸಾಲಿಹಾತ್ ಆಡಿಟೋರಿಯಂನಲ್ಲಿ ರವಿವಾರ ನಡೆದ ’ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)’ ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
ಪೋಸ್ಟ್ ಟ್ರೂತ್ ಎಂಬ ಕಲ್ಪನೆಯ ಮೂಲಕ ಸುಳ್ಳನ್ನು ಸತ್ಯವಾಗಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಗಟ್ಟಿ ಧ್ವನಿಯಲ್ಲಿ ಅಪಪ್ರಚಾರ, ಸುಳ್ಳನ್ನು ವ್ಯಾಪಕಗೊಳಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಾಸ್ತವಿಕ ವಿಚಾರಗಳನ್ನು ಜನರಿಗೆ ತಿಳಿಯಪಡಿಸಲು ಧೈರ್ಯದಿಂದ ಸತ್ಯವನ್ನು ಮಾತನಾಡುವವರು ನಾವಾಗಬೇಕಾಗಿದೆ. ಸಮಾಜದಲ್ಲಿ ಮೌಲ್ಯಗಳ ಮರುಸ್ಥಾಪನೆಗೆ ಪ್ರವಾದಿ(ಸ) ಬೋಧನೆಯನ್ನು ಅರಿಯುವುದು ಅತೀ ಅಗತ್ಯವೆಂದರು.
ರಾಜಕೀಯ ಮುಂದಾಳು ಹಾಗೂ ಸಾಮಾಜಿಕ ಮುಖಂಡ ಶಂಕರ್ ಕುಂದರ್ ಮಾತನಾಡಿ, ಸಮಾಜದಲ್ಲಿ ಪ್ರವಾದಿ ಮುಹಮ್ಮದ್(ಸ) ಬೋಧನೆಗಳನ್ನು ಅರಿಯುವ ಅಗತ್ಯ ಹೆಚ್ಚಿದೆ. ಅವರು ಸಮಾಜಕ್ಕೆ ಮೌಲ್ಯಗಳನ್ನು ಬೋಧಿಸಿದರು. ಅವರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರೀತಿ, ಸೌಹಾರ್ದಯುತ ಜೀವನ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜೆರಾಲ್ಡ್ ಪಿಂಟೋ ಮತ್ತು ಸಾಲಿಹಾತ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸುನಂದಾ ಮಾತನಾಡಿದರು.
ಜಮಾಅತೆ ಇಸ್ಲಾಮಿ ಹಿಂದ್ ಹೂಡೆಯ ಅಧ್ಯಕ್ಷ ಹಸನ್ ಕೋಡಿಬೆಂಗ್ರೆ, ಎಸ್.ಐ.ಒ ಹೂಡೆಯ ಘಟಕಾಧ್ಯಕ್ಷ ಸಾಕೀಬ್ ಸುಲೈಮಾನ್, ಕಾರ್ಯಕ್ರಮದ ಸಂಚಾಲಕ ಅಫ್ಘಾನ್ ಬಿ.ಹೂಡೆ, ರಿಫಾ ಚೇಂಬರ್ ಆಫ್ ಕಾಮರ್ಸ್ನ ಶಕೀಲ್ ನೇಜಾರು, ಸಾಲಿಹಾತ್ ಶಿಕ್ಷಣ ಸಂಸ್ಥೆಯ ಖಜಾಂಚಿ ಅಬ್ದುಲ್ ಕಾದೀರ್ ಮೊಯ್ದಿನ್, ಸಾಲಿಹಾತ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ, ಅಬ್ದುಲ್ ರಝಾಕ್ ನಕ್ವಾ, ಸಾಲಿಡಾರಿಟಿಯ ನಿಹಾಲ್ ಕಿದಿಯೂರು ಉಪಸ್ಥಿತರಿದ್ದರು.
ಮಾಸ್ಟರ್ ಅಫಾಫ್ ಕಿರಾಅತ್ ಮಾಡಿದರು. ಜಮಾಅತೆ ಇಸ್ಲಾಮಿ ಹಿಂದ್ನ ಕಾರ್ಯಕರ್ತ ಇದ್ರಿಸ್ ಹೂಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






