ಸಾರ್ವಜನಿಕರು ಗುರುತಿಸಿದರೆ ಅಧಿಕಾರಿಗಳು ಜನಪರವಾಗಿರಲು ಪ್ರೇರಣೆ: ಅಝ್ಮತ್ ಅಲಿ

ಕಾಪು, ಜು.9: ಸರಕಾರಿ ಅಧಿಕಾರಿಗಳು ನಿಭಾಯಿಸಿದ ಜನಸ್ನೇಹಿ ಸೇವೆ, ಕರ್ತವ್ಯ ನಿಷ್ಠೆಯನ್ನು ಸಂಘಸಂಸ್ಥೆಗಳು ಸಾರ್ವಜನಿಕರು ಗುರುತಿಸಿ ಗೌರವಿಸುವುದು ಸಾರ್ವಜನಿಕ ಸೇವೆಯಲ್ಲಿರುವವರಿಗೆ ಜನಪರವಾಗಿ ಕಾರ್ಯ ನಿರ್ವಹಿಸಲು ಪ್ರೇರೆಣೆ ನೀಡುತ್ತದೆ. ಇಂತಹ ಮಾದರಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಅಧಿಕಾರಿಗಳ ಹೆಚ್ಚು ಕಾರ್ಯ ನಿಷ್ಠೆಯಿಂದ ತೊಡಗಿಸಿಕೊಳ್ಳುವಂತಾಗುತ್ತದೆ ಎಂದು ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಝ್ಮತ್ ಅಲಿ ಹೇಳಿದ್ದಾರೆ.
ಕಟಪಾಡಿ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಊರಿನ ವಿವಿಧ ಸಂಘಸಂಸ್ಥೆಗಳು ಮತ್ತು ಸಮಸ್ತ ನಾಗರಿಕರ ಪರವಾಗಿ ಕಟಪಾಡಿ ಹೊರ ಠಾಣೆಯ ನಿವೃತ್ತ ಠಾಣಾಧಿಕಾರಿ ದಯಾನಂದ ಅವರಿಗೆ ಗ್ರಾಪಂ ಸಭಾ ಭವನದಲ್ಲಿ ಬುಧವಾರ ಜರಗಿದ ಬೀಳ್ಕೊಡುಗೆ, ನಾಗರಿಕ ಸನ್ಮಾನ ಹಾಗೂ ಕಟಪಾಡಿ ಜಂಕ್ಷನ್ನಲ್ಲಿ ದೀರ್ಘ ಕಾಲ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸಿದ್ದ ಪೋಲಿಸ್ ಹಾಗೂ ಗಹರಕ್ಷಕದಳದ ಸಿಬ್ಬಂದಿಗೆ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಕಟಪಾಡಿ ಗ್ರಾಪಂ ಮಾಜಿ ಅಧ್ಯಕ್ಷೆ ಪ್ರಭಾ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಪು ಪೊಲೀಸ್ ಠಾಣೆಯ ಪಿಎಸ್ಸೈ ತೇಜಸ್ವಿ, ಕಟಪಾಡಿ ಎಸ್ವಿಎಸ್ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ.ಸತ್ಯೇಂದ್ರ ಪೈ, ಗ್ರಾಮಾಡಳಿತಾಧಿ ಕಾರಿ ಡೇನಿಯಲ್ ಡೊಮ್ನಿಕ್ ಡಿಸೋಜ, ಸ್ಥಳೀಯ ವೈದ್ಯರುಗಳಾದ ಡಾ. ಎ.ರವೀಂದ್ರನಾಥ್ ಶೆಟ್ಟಿ ಡಾ.ಯು.ಕೆ.ಶೆಟ್ಟಿ ಶುಭ ಹಾರೈಸಿದರು.
ಕಾಪು ಪೊಲೀಸ್ ಠಾಣೆಯ ಪ್ರೊಬೆಶನರಿ ಪಿಎಸ್ಸೈ ಮುಹಮ್ಮದ್ ಶಿಫಾಜ್, ಊರಿನ ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಕಾಮ್ರಾಜ್ ಸುವರ್ಣ, ದುಗ್ಗಪ್ಪ ಜಿ.ಬಂಗೇರ, ಪ್ರಭಾಕರ ಶೇರಿಗಾರ್, ಪ್ರಭಾಕರ ಪಾಲನ್, ಜಾನ್ ಅಮ್ಮಣ್ಣ, ಅಶೋಕ್ ರಾವ್, ಹನೀಫ್ ಎಂ., ರಮೇಶ್ ಕೋಟ್ಯಾನ್, ಆಶಾ ಅಂಚನ್, ಕಾರ್ತಿಕ್, ದಯಾನಂದ ಶೆಟ್ಟಿ ಕಲ್ಮಂಜೆ, ನ್ಯಾಯವಾದಿ ಗಣೇಶ್ ಕುಮಾರ್ ಮಟ್ಟು, ಗ್ರಾಪಂ ಆಡಳಿತಾಧಿಕಾರಿ ಗುರುಪ್ರಸಾದ್ ಉಪಸ್ಥಿತರಿದ್ದರು.
ಪಿಡಿಒ ತಿಲಕ್ ರಾಜ್ ಸ್ವಾಗತಿಸಿದರು. ಎಸ್ವಿಎಸ್ ಹಳೆ ವಿದ್ಯಾರ್ಥಿ ಸಂಘದ ಮಾಜಿ ಗ್ರಾಪಂ ಅಧ್ಯಕ್ಷ ಪ್ರೇಮ್ ಕುಮಾರ್ ಪ್ರಸಾತಿವನೆಗೈದರು. ಗ್ರಾಪಂ ಮಾಜಿ ಸದಸ್ಯ ಸುಭಾಸ್ ಬಲ್ಲಾಳ್ ಸನ್ಮಾನ ಪತ್ರ ವಾಚಿಸಿದರು. ಉದ್ಯಮಿ ಸುಮೀರ್ ಡಿ.ಬಂಗೇರ ವಂದಿಸಿದರು. ಪತ್ರಕರ್ತ ಪ್ರಕಾಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.






