ಶೀರೂರು ಪರ್ಯಾಯ: ಹೊರೆಕಾಣಿಕೆ ಸಮರ್ಪಣೆಗೆ ಚಾಲನೆ

ಉಡುಪಿ: ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಪರ್ಯಾಯ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಪ್ರಥಮ ದಿನದ ಹೊರೆಕಾಣಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮತ್ತು ಒಕ್ಕೂಟ ಉಡುಪಿ ಜಿಲ್ಲೆ ವತಿಯಿಂದ ಸಮರ್ಪಿಸಲಾಯಿತು.
ಉಡುಪಿಯ ಜೋಡುಕಟ್ಟೆ ಬಳಿ ಇರುವ ಪೂರ್ಣಪ್ರಜ್ಞ ಮಂಟಪದ ಬಳಿ ಹೊರೆಕಾಣಿಕೆ ಸಮರ್ಪಣೆಯ ಮೆರವಣಿಗೆಗೆ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಯಶ್ಪಾಲ್ ಸುವರ್ಣ ಚಾಲನೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾತನಾಡಿ, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಶೀರೂರು ಪರ್ಯಾಯಕ್ಕಾಗಿ ಬೃಹತ್ ಪ್ರಮಾಣದಲ್ಲಿ ಇಂದು ಹೊರಕಾಣಿಕೆ ಸಮರ್ಪಿಸಿದ್ದೇವೆ. 150ಕ್ಕೂ ಅಧಿಕ ವಾಹನಗಳಲ್ಲಿ ಸುವಸ್ತುಗಳನ್ನು ಶ್ರದ್ಧಾ ಭಕ್ತಿಯ ಮೆರವಣಿಗೆಯ ಮೂಲಕ ಉಗ್ರಾಣಕ್ಕೆ ಸಾಗಿಸಲಾಗುತ್ತಿದೆ. ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಜನಜಾಗೃತಿ ವೇದಿಕೆ, ಶೌರ್ಯ ವಿಪತ್ತು ವಿಭಾಗ, ನವ ಜೀವನ ಸಮಿತಿ, ಭಜನಾ ಪರಿಷತ್ ಸದಸ್ಯರ ಸಹಕಾರದಲ್ಲಿ ಸಂಗ್ರಹಿಸಿರುವ ಹೊರೆಕಾಣಿಕೆಯನ್ನು ಅತ್ಯಂತ ಸಂಭ್ರಮ, ಸಡಗರದೊಂದಿಗೆ ಸಮರ್ಪಿಸಿದ್ದೇವೆ ಎಂದರು.
ತೆಂಗಿನಕಾಯಿ 40 ಸಾವಿರ, ಅಕ್ಕಿ 205 ಕ್ವಿಂಟಲ್, ಬೆಲ್ಲ 105 ಕ್ವಿಂಟಲ್, ಸಕ್ಕರೆ 10 ಕ್ವಿಂಟಲ್, ಬೇಳೆ 2.5 ಕ್ವಿಂಟಲ್, ಅವಲಕ್ಕಿ 10 ಕ್ವಿಂಟಲ್, ತರಕಾರಿ 15 ಕ್ವಿಂಟಲ್, ಎಣ್ಣೆ/ತುಪ್ಪ 700 ಲೀಟರ್ ವಸ್ತುಗಳನ್ನು ಸಮರ್ಪಿಸಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ಶೀರೂರು ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುಪ್ರಸಾದ್ ಶೆಟ್ಟಿ ಬೈಕಾಡಿ, ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ್ ಹೆಗ್ಡೆ, ಕಾರ್ಯದರ್ಶಿ ಮೋಹನ್ ಭಟ್, ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ, ಶ್ರೀವಿದ್ಯಾ ಸರಳತ್ತಾಯ, ಜನಜಾಗ್ರತಿ ಸಮಿತಿಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ದೇವದಾಸ್ ಹೆಬ್ಬಾರ್, ಕಾಪು ಮಾರಿಗುಡಿ ಮೊಕ್ತೇಸರ ರತ್ನಾಕರ್ ಶೆಟ್ಟಿ, ಬ್ರಾಹ್ಮಣ ಪರಿಷತ್ ಜಿಲ್ಲಾಧ್ಯಕ್ಷ ಸಂದೀಪ್ ಮಂಜ, ಶ್ರೀನಿವಾಸ್ ಉಪಾಧ್ಯ, ಶ್ರೀಕಾಂತ ನಾಯಕ, ಸತ್ಯಾನಂದ ನಾಯಕ, ಉದಯ ಶೆಟ್ಟಿ ಇನ್ನಾ, ಮಧುಕರ್ ಮುದ್ರಾಡಿ, ವಿಜಯ್ ಕೊಡವೂರು, ವೀಣಾ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.







