12 ಗಂಟೆಯೊಳಗೆ ಧರಣಿಗೆ ಮಣಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ: ರಘುಪತಿ ಭಟ್ಗೆ ಸಿಂಗಲ್ ಲೇಔಟ್ ಅನುಮತಿ ಪತ್ರ ಹಸ್ತಾಂತರ

ಉಡುಪಿ, ಮಾ.24: ಬಡಾನಿಡಿಯೂರು ಗ್ರಾಮದ 90 ಸೆನ್ಸ್ ಜಾಗದಲ್ಲಿ ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ ಜಾಗಕ್ಕೆ ಏಕ ವಿನ್ಯಾಸ ಲೇಔಟ್ ನಕ್ಷೆ ಅನುಮೋದನೆಗೆ ವಿಳಂಬ ನೀತಿ ಅನುಸರಿಸುತಿದ್ದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕ್ರಮವನ್ನು ವಿರೋಧಿಸಿ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಸೋಮವಾರದಿಂದ ಪ್ರಾರಂಭಿಸಿದ ಅನಿರ್ದಿಷ್ಟಾವಧಿ ಧರಣಿ 12 ಗಂಟೆಯೊಳಗೆ ಯಶಸ್ಸು ಕಂಡಿದ್ದು, ಪ್ರತಿಭಟನೆಗೆ ಮಣಿದ ನಗರಾಭಿವೃದ್ಧಿ ಪ್ರಾಧಿಕಾರವು ಸಿಂಗಲ್ ಲೇಔಟ್ ಇಂದು ಅಪರಾಹ್ನದ ವೇಳೆ ಅನುಮತಿ ಪತ್ರವನ್ನು ನೀಡಿದೆ.
ಈ ಸಂಬಂಧದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪರಿಶೀಲಿಸಿದ ಬಳಿಕ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಹೇಶ್ ಅವರು ತಾತ್ಕಾಲಿಕ ಅನುಮತಿ ಪತ್ರವನ್ನು ರಘುಪತಿ ಭಟ್ ಅವರಿಗೆ ಹಸ್ತಾಂತರಿಸಿದರು.
ಉಡುಪಿಯ ಬಡಾನಿಡಿಯೂರು ಸಮೀಪ ರೆಸಾರ್ಟ್ ನಿರ್ಮಿಸಲು ರಘುಪತಿ ಭಟ್ ಅವರಿಗೆ ಕಳೆದ ಎರಡು ವರ್ಷ ಗಳಿಂದ ಸಿಂಗಲ್ ಲೇಔಟ್ಗಾಗಿ ಅನುಮತಿ ಪತ್ರ ನೀಡದೇ ಸತಾಯಿಸುತ್ತಿತ್ತು. ಇದರಿಂದ ಹತಾಶರಾದ ಮೂರು ಸಲದ ಮಾಜಿ ಶಾಸಕರು ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಸೋಮವಾರದಿಂದ ಏಕಾಂಗಿಯಾಗಿ ಧರಣಿ ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು.
ಪ್ರವಾಸೋದ್ಯಮವನ್ನು ದೃಷ್ಟಿಯಲ್ಲಿಟ್ಟುಕೊಂಡು ರಘುಪತಿ ಭಟ್ ಅವರು ಕಡಲ ತೀರದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದ್ದರು. ಇದಕ್ಕಾಗಿ 2024ರ ಮಾ.20ರಂದು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಮೂರು ತಿಂಗಳಲ್ಲಿ ನೀಡಬೇಕಾದ ಅನುಮತಿಯನ್ನು, ವಿವಿಧ ಕಾರಣಗಳ ನೆಪದಲ್ಲಿ 24 ತಿಂಗಳು ಕಳೆದರೂ ನೀಡಿರಲಿಲ್ಲ. ಹಾಲಿ ಶಾಸಕ ಯಶ್ ಪಾಲ್ ಸುವರ್ಣ ಅವರ ಕುಮ್ಮಕ್ಕಿನಿಂದಲೇ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಅನುಮತಿ ಪತ್ರ ನೀಡುತ್ತಿಲ್ಲ ಎಂದು ಭಟ್ ಆರೋಪಿಸಿದ್ದರು.
ಇಂದು ಅಪರಾಹ್ನ 1:30ರ ಸುಮಾರಿಗೆ ಅನುಮತಿ ಪತ್ರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಘುಪತಿ ಭಟ್, 3 ತಿಂಗಳಲ್ಲಿ ಕೊಡಬೇಕಾದ ಅನುಮತಿ ಪತ್ರ 24 ತಿಂಗಳ ಬಳಿಕ ನನ್ನ ಕೈಸೇರಿದೆ. ಇದು ತಾತ್ಕಾಲಿಕ ಅನುಮತಿ ಪತ್ರವಾಗಿದ್ದು, ರಸ್ತೆಗೆ ನಿಗದಿತ ಜಾಗ ಬಿಟ್ಟುಕೊಟ್ಟ ಬಳಿಕ ಶಾಶ್ವತ ಅನುಮತಿ ಪತ್ರ ಸಿಗಲಿದೆ. ಧರಣಿ ಕುಳಿತ ಬಳಿಕವಾದರೂ ನ್ಯಾಯ ಸಿಕ್ಕಿರುವುದಕ್ಕೆ ಸಂತೋಷವಾಗಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳೆಲ್ಲವೂ ನಿವಾರಣೆಯಾಗಬೇಕಿದೆ. ಅಂಬಾಗಿಲು- ಮಣಿಪಾಲ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಟಿಡಿಆರ್ ಕೊಡುವುದಾಗಿ ಹೇಳಿ 3 ವರ್ಷ ಆದರೂ ಭೂಮಿ ಕೊಟ್ಟ ಜನತೆಗೆ ಅದು ಸಿಕ್ಕಿಲ್ಲ. ಇದಕ್ಕೆ ಹೋರಾಟ ಮಾಡಬೇಕು. ಇನ್ನೂ ಅನೇಕ ಸಮಸ್ಯೆಗಳಿದ್ದು, ಜನತೆಯ ಪರವಾಗಿ ಅವುಗಳ ವಿರುದ್ಧ ಹೋರಾಟ ನಡೆಸುವುದಾಗಿ ರಘುಪತಿ ಭಟ್ ತಿಳಿಸಿದರು.
ಮುಂದಿನ ಎ.11ರಂದು ಇದೇ ರೀತಿಯ ಕಾರಣಗಳಿಗಾಗಿ ಬಾಕಿ ಉಳಿದ ಕಡತಗಳ ವಿಲೇವಾರಿಯಾಗದಿದ್ದರೆ ಧರಣಿ ನಡೆಸುವುದಾಗಿ ಅವರು ತಿಳಿಸಿದರು. ಇದು ರಾಜಕೀಯ ಕಾರಣಗಳಿಗಾಗಿ ಹೋರಾಟವಲ್ಲ, ನನ್ನ ವೈಯಕ್ತಿಕ ವಿಷಯಕ್ಕಾಗಿ ನಡೆದ ಧರಣಿ. ನನ್ನ ವೈಯಕ್ತಿಕ ಸಮಸ್ಯೆಗಳಿಗೆ ಶಾಸಕರು ಅಡ್ಡಿಪಡಿಸಿದ್ದರಿಂದ ಅವರ ಹೆಸರು ಹೇಳಬೇಕಾಯಿತು ಎಂದರು.






