ಎಸ್ಐಆರ್| ಉಡುಪಿ ಜಿಲ್ಲೆಯಲ್ಲಿ ಶೇ.66 ಡಿಜಿಟಲೀಕರಣ ಪೂರ್ಣ: ಡಿಸಿ ಸ್ವರೂಪ

ಉಡುಪಿ, ಜು.18: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ನಡೆದಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್ಐಆರ್-2026) ಪ್ರಕ್ರಿಯೆಯಲ್ಲಿ ಮತದಾರರು ಭರ್ತಿ ಮಾಡಿ ಹಿಂದಿರು ಗಿಸಿದ ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯ ಇಂದು ಸಹ ಮುಂದುವರಿದಿದ್ದು, ಜು.19ರ ಸಂಜೆಯವರೆಗೆ ಒಟ್ಟು ಮತದಾರರ ಗಣತಿ ನಮೂನೆಗಳ ಪೈಕಿ ಶೇ.66ರ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು 10,63,876 ಮಂದಿ ಮತದಾರರಿಗೆ ಬಿಎಲ್ಒಗಳು ಗಣತಿ ನಮೂನೆ (ಎನ್ಯೂಮರೇಶನ್ ಫಾರ್ಮ್)ಗಳನ್ನು ತಲುಪಿಸಿದ್ದು, ಇವರಲ್ಲಿ 7,02,194 ಮಂದಿಯ ಡಿಜಿಟಲೀಕರಣ ಇಂದು ಸಂಜೆಯವರೆಗೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.
ಜಿಲ್ಲೆಯಲ್ಲಿ ಈವರೆಗೆ 4864 ಮಂದಿ ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ಗೊತ್ತಾಗಿದೆ. ಬೈಂದೂರಿನಲ್ಲಿ 1739, ಕುಂದಾಪುರ ದಲ್ಲಿ 912, ಉಡುಪಿಯಲ್ಲಿ 559, ಕಾಪುವಲ್ಲಿ 843 ಹಾಗೂ ಕಾರ್ಕಳದಲ್ಲಿ 811 ಮಂದಿ ಮತದಾರರು ಮೃತರಾಗಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ 3203 ಮಂದಿ ಮತದಾರರು (ಬೈಂದೂರು 1212, ಕುಂದಾಪುರ 1018, ಉಡುಪಿ 367, ಕಾಪು 333, ಕಾರ್ಕಳ 273) ಖಾಯಂ ಆಗಿ ಬೇರೆ ಕಡೆಗೆ ವರ್ಗಾ ವಣೆ ಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1233 ಮಂದಿ ಮತದಾರರು ಆನ್ಲೈನ್ ಮೂಲಕ ಸ್ವದಾಖಲಾತಿಯನ್ನು ಮಾಡಿದ್ದಾರೆ. ಇದರಲ್ಲಿ ಅರ್ಧ ದಷ್ಟು ಮಂದಿ (606) ಬೈಂದೂರಿನವರು ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.
ಎನ್ಯೂಮರೇಷನ್ ನಮೂನೆಗಳನ್ನು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಆಗಸ್ಟ್ 8ರವರೆಗೆ ನಡೆಯಲಿದೆ. ಇದುವರೆಗೆ ನಮೂನೆಗಳನ್ನು ಭರ್ತಿ ಮಾಡದವರು ಕೂಡಲೇ ಭರ್ತಿ ಮಾಡಿ ಸಂಬಂಧಿಸಿದ ಬಿಎಲ್ಒಗೆ ನೀಡಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ. ನಮೂನೆಗಳನ್ನು ಭರ್ತಿ ಮಾಡುವಲ್ಲಿ ಯಾವುದೇ ತೊಂದರೆ ಅಥವಾ ಗೊಂದಲ ಉಂಟಾದರೆ ನಿಮ್ಮ ಹತ್ತಿರದ ಬಿಎಲ್ಒ ಫೆಸಿಲಿಟೇಷನ್ ಕೇಂದ್ರ ಅಥವಾ ವೋಟರ್ ಫೆಸಿಲಿಟೇಷನ್ ಸೆಂಟರ್ಗೆ ಭೇಟಿ ನೀಡಿ ಅಲ್ಲಿರುವ ಸಿಬ್ಬಂದಿಗಳಿಂದ ನೆರವು, ಮಾರ್ಗದರ್ಶನ ಪಡೆಯಬಹುದು ಎಂದು ತಿಳಿಸಲಾಗಿದೆ.
ಉಡುಪಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಡಿಜಿಟಲೀಕರಣ ಕಾರ್ಯದ ಪ್ರಗತಿ ಪರಿಶೀಲನಾ ಸಭೆ ಇಂದು ನಡೆಯಿತು. ಸಭೆಯಲ್ಲಿ ಎಲ್ಲಾ ಸೆಕ್ಟರ್ ಅಧಿಕಾರಿಗಳು, ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಬಿಎಲ್ಒ ಮೇಲ್ವಿಚಾರಕರು ಉಪಸ್ಥಿತರಿದ್ದರು.
ಇದೇ ವೇಳೆ ಕಡಿಮೆ ಪ್ರಗತಿ ಸಾಧಿಸಿರುವ ಬಿಎಲ್ಒಗಳ ಮೇಲೆ ವಿಶೇಷ ಗಮನ ಹರಿಸುವಂತೆ ಸೆಕ್ಟರ್ ಅಧಿಕಾರಿ ಗಳು ಬಿಎಲ್ಒ ಮೇಲ್ವಿಚಾರಕರಿಗೆ ಸೂಚನೆಗಳನ್ನು ನೀಡಲಾಯಿತು. ಡಿಜಿಟಲೀಕರಣಕ್ಕೆ ಹೆಚ್ಚುವರಿ ಸಿಬ್ಬಂದಿಗಳ ಅಗತ್ಯವಿದ್ದಲ್ಲಿ ನೇಮಕ ಮಾಡಿಕೊಂಡು ಸಾಧ್ಯವಿದ್ದಷ್ಟು ಬೇಗ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.






