ಎಸ್ಐಆರ್: ಉಡುಪಿ ಜಿಲ್ಲೆಯಲ್ಲಿ ಶೇ.99ರಷ್ಟು ಗಣತಿ ನಮೂನೆ ವಿತರಣೆ

ಉಡುಪಿ, ಜು.11: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ನಡೆದಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್ಐಆರ್-2026) ಪ್ರಕ್ರಿಯೆಯಲ್ಲಿ ಗಣತಿ ನಮೂನೆ (ಎನ್ಯೂಮರೇಶನ್ ಫಾರ್ಮ್)ಗಳನ್ನು ಮತದಾರರಿಗೆ ವಿತರಿಸುವ ಕಾರ್ಯ ಅಂತಿಮ ಹಂತವನ್ನು ತಲುಪಿದ್ದು, ಜು.11ರ ಸಂಜೆ 4 ಗಂಟೆಯವರೆಗೆ ಶೇ.98.9297ರಷ್ಟು ಪೂರ್ಣಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಇಂದು ಸಂಜೆಯವರೆಗೆ ಜಿಲ್ಲೆಯಲ್ಲಿ ವಿತರಿಸಲು ನಿಗದಿಯಾಗಿರುವ ಒಟ್ಟು 10,63,876 ಎನ್ಯೂಮರೇಶನ್ ಫಾರ್ಮ್ ಗಳಲ್ಲಿ 10,52,490 ಫಾರ್ಮ್ ಗಳನ್ನು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆ ಮನೆಗೆ ಭೇಟಿ ನೀಡಿ ವಿತರಿಸಿದ್ದಾರೆ. ಇವರಲ್ಲಿ ಫಾರಂ ಭರ್ತಿ ಮಾಡಿದವರ ಪೈಕಿ 1,21,527 ಮಂದಿಯ (ಶೇ.11.42) ಗಣತಿ ನಮೂನೆ ಯನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 807 ಮಂದಿ ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ಗೊತ್ತಾಗಿದೆ. ಬೈಂದೂರಿನಲ್ಲಿ 291, ಉಡುಪಿಯಲ್ಲಿ 163, ಕುಂದಾಪುರದಲ್ಲಿ 131, ಕಾಪುವಲ್ಲಿ 128 ಹಾಗೂ ಕಾರ್ಕಳದಲ್ಲಿ 94 ಮಂದಿ ಮತದಾರರು ಮೃತರಾಗಿದ್ದಾರೆ. ಅದೇ ರೀತಿ 531 ಮಂದಿ ಮತದಾರರು (ಬೈಂದೂರು 153, ಉಡುಪಿ 142, ಕುಂದಾಪುರ 115) ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆ ಗೊಂಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 179 ಮಂದಿ ಮತದಾರರು ಆನ್ಲೈನ್ ಮೂಲಕ ಸ್ವ ದಾಖಲಾತಿ ಯನ್ನು ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.
ಜಿಲ್ಲೆಯ ಮತದಾರರು ತಮಗೆ ತಲುಪಿಸಲಾಗಿರುವ ನಮೂನೆಗಳಲ್ಲಿರುವ ವಿವರಗಳನ್ನು ಪರಿಶೀಲಿಸಿ ಎಲ್ಲಾ ಮಾಹಿತಿ ಗಳನ್ನು ತಪ್ಪಿಲ್ಲದಂತೆ ಭರ್ತಿ ಮಾಡಿ, ಭರ್ತಿ ಮಾಡಿದ ನಮೂನೆಗಳನ್ನು ನಿಮ್ಮ ವ್ಯಾಪ್ತಿಯ ಬಿಎಲ್ಒಗಳಿಗೆ ಹಿಂದಿರುಗಿಸುವಂತೆ ಕೋರಲಾಗಿದೆ.
ನಮೂನೆಗಳನ್ನು ಭರ್ತಿ ಮಾಡುವಲ್ಲಿ ಯಾವುದೇ ತೊಂದರೆ ಅಥವಾ ಗೊಂದಲಗಳಿದ್ದರೆ ನಿಮ್ಮ ಮತಗಟ್ಟೆಗಳಲ್ಲಿ ತೆರೆಯಲಾಗಿರುವ ವೋಟರ್ ಫೆಸಿಲಿಟೇಷನ್ ಸೆಂಟರ್ ಅಥವಾ ಬಿಎಲ್ಒ ಫೆಸಿಲಿಟೇಷನ್ ಸೆಂಟರ್ಗಳಿಗೆ ಭೇಟಿ ನೀಡಿ ಅಲ್ಲಿರುವ ಸಿಬ್ಬಂದಿಗಳು ನಮೂನೆಗಳನ್ನು ಭರ್ತಿ ಮಾಡಲು ನಿಮಗೆ ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಜಿಲ್ಲೆಯಲ್ಲಿ ಜು.11ರವರೆಗೆ ನಡೆದ ಎಸ್ಐಆರ್ ಪ್ರಕ್ರಿಯೆ ಸಾಧನೆ:
ವಿಧಾನಸಭಾಕ್ಷೇತ್ರ ಒಟ್ಟು ಮತದಾರರು ವಿತರಿಸಿದ ನಮೂನೆ
118.ಬೈಂದೂರು 2,41,863 2,40,909
119.ಕುಂದಾಪುರ 2,12,473 2,11,923
120.ಉಡುಪಿ 2,21,680 2,11,997
121.ಕಾಪು 1,94,718 1,94,587
122.ಕಾರ್ಕಳ 1,93,142 1,93,074
ಒಟ್ಟು 10,63,876 10,52,490






