ಮುಸ್ಲಿಮರು ಸವಾಲನ್ನು ಅವಕಾಶಗಳಾಗಿ ಬದಲಾಯಿಸಿದರೆ ಪರಿಹಾರ ಸಾಧ್ಯ : ಸಯ್ಯದ್ ಸಾದತುಲ್ಲಾ ಹುಸೈನಿ

ಉಡುಪಿ : ಪ್ರಸ್ತುತ ಸಮಾಜದಲ್ಲಿ ಮುಸ್ಲಿಂ ಸಮುದಾಯವು ಬಹಳಷ್ಟು ಸವಾಲುಗಳ ನಡುವೆ ಬದುಕುತ್ತಿದೆ. ಇಂದಿನ ಪರಿಸ್ಥಿತಿಯ ಕುರಿತು ಮುಸ್ಲಿಮರು ಹತಾಶರಾಗುವ ಅಗತ್ಯವಿಲ್ಲ. ಈ ಸಮುದಾಯವು ಸಂಕಷ್ಟಗಳನ್ನು ಎದುರಿಸುತ್ತಲೇ ಶಕ್ತಿಯುತವಾಗಿ ಬೆಳೆದಿದೆ. ಮುಸ್ಲಿಮರು ತಮ್ಮ ಮುಂದಿರುವ ಸವಾಲನ್ನು ಅವಕಾಶಗಳಾಗಿ ಬದಲಾಯಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ನ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಸಾದತುಲ್ಲಾ ಹುಸೈನಿ ಹೇಳಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲೆ ಮತ್ತು ಎಸ್ಐಓ ಇಂಡಿಯಾ ಉಡುಪಿ ಜಿಲ್ಲೆಯ ವತಿಯಿಂದ ಹೂಡೆಯ ಸಾಲಿಹಾತ್ ಮೈದಾನದಲ್ಲಿ ಶನಿವಾರ ಸಂಜೆ ʼಉಜ್ವಲ ಭವಿಷ್ಯಕ್ಕಾಗಿʼ ಶೀರ್ಷಿಕೆಯಡಿ ನಡೆದ ಸಾಮುದಾಯಿಕ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
ದೇಶದ ವಿಷಮ ಪರಿಸ್ಥಿತಿಯನ್ನು ಕೇವಲ ಸವಾಲಾಗಿ ನೋಡದೆ ಸಮುದಾಯದ ಮಹೋನ್ನತ ಭವಿಷ್ಯದ ದಾರಿ ಹುಡುಕುವ ಅವಕಾಶವಾಗಿ ಬದಲಾಯಿಸುವ ಕುರಿತು ಚಿಂತಿಸಬೇಕಾಗಿದೆ. ನಮ್ಮ ಸಾಮೂಹಿಕ ವರ್ತನೆ, ಮಾನಸಿಕತೆ, ಚಿಂತನೆ, ಜಗತ್ತನ್ನು ನೋಡುವ ನಮ್ಮ ದೃಷ್ಟಿಕೋನವನ್ನು ಧನಾತ್ಮಕವಾಗಿ ಬದಲಾಯಿಸಿದರೆ ನಮ್ಮ ನಾಳೆಗಳು ಸಂತೋಷದಾಯಕವಾಗಿರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಇಸ್ಲಾಮಿ ಅಂದೋಲನವು ವಿದ್ಯಾರ್ಥಿ- ಯುವ ಜನತೆಯ ಮನಸ್ಸಿನಲ್ಲಿ ಮಹೋನ್ನತ ಕನಸುಗಳನ್ನು ಸೃಷ್ಟಿಸುತ್ತಿದೆ. ಪ್ರಗತಿಯ, ಮಹೋನ್ನತಿಯ ಪಯಣವು ಉನ್ನತ ಕನಸುಗಳಿಂದ ಆರಂಭ ವಾಗುತ್ತದೆ. ಮುಸ್ಲಿಂ ಸಮುದಾಯ ಪ್ರತಿಯೊಂದು ವಿಭಾಗದಲ್ಲೂ ದೇಶಕ್ಕೆ ಕೊಡುಗೆ ನೀಡುವವರಾಗಬೇಕು ಎಂದರು.
ಅಂಧಕಾರ ಅಳಿದು ಬೆಳಕು ಹರಿಯಬೇಕೆಂದು ನಾವು ಭಾವಿಸುವುದದಾರೆ ನಮ್ಮ ವರ್ತನೆಗಳಲ್ಲಿನ ಬದಲಾವಣೆ ಅತೀ ಅಗತ್ಯ. ನಮ್ಮ ಕನಸುಗಳು ಕೇವಲ ಭದ್ರತೆ, ಸರಕಾರದ ಕೆಲವೊಂದು ಯೋಜನೆಗಳಿಗೆ ಸಿಮೀತವಾಗದೆ ಅದಕ್ಕಿಂತ ದೊಡ್ಡದಾದ ಆಲೋಚನೆಗಳನ್ನು ಸೃಷ್ಟಿಸುವ ಅಗತ್ಯವಿದೆ. ಎಲ್ಲರಿಗೂ ನ್ಯಾಯಯುತ ಸಮಾಜ, ಅತ್ಯುತ್ತಮ ಬದುಕು ಕಲ್ಪಿಸಿಕೊಡಲು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.
ಎಸ್ಐಓ ರಾಜ್ಯಾಧ್ಯಕ್ಷ ಝೀಶಾನ್ ಅಖಿಲ್ ಸಿದ್ದೀಕಿ ಮಾತನಾಡಿ, ಕರ್ನಾಟಕ ಕುವೆಂಪು, ಗುರು ನಾರಾಯಣರ ನಾಡು. ಇದು ಸರ್ವ ಜನಾಂಗದ ಶಾಂತಿಯ ನಾಡು. ಇದನ್ನು ಕಾಪಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಕರ್ನಾಟಕದಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಿ ದಾರಿ ತಪ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅದಕ್ಕಾಗಿ ಕೆಲವೊಂದು ಹಿತಾಸಕ್ತಿಗಳು ಸಕ್ರಿಯವಾಗಿವೆ ಎಂದು ಆರೋಪಿಸಿದರು.
ಜಮಾಅತೆ ಇಸ್ಲಾಮ್ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಮಲಿಕ್ ಮೊಹ್ತಸೀಮ್ ಖಾನ್, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಬೆಳಗಾಮಿ ಮುಹಮ್ಮದ್ ಸಾದ್, ಎಸ್ಐಓ ರಾಷ್ಟ್ರೀಯ ಅಧ್ಯಕ್ಷ ರಮೀಝ್ ಇ.ಕೆ., ನೂತನ ಚುನಾಯಿತ ಎಸ್ಐಓ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಹಾಫೀಝ್ ಮಾತನಾಡಿದರು.
ಜಮಾಅತೆ ಇಸ್ಲಾಮಿ ಹಿಂದ್ ವಲಯ ಸಂಚಾಲಕ ಸಯ್ಯಿದ್ ಇಸ್ಮಾಯಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಸ್ವಾಗತಿಸಿದರು. ವೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ ಕಿರಾತ್ ಪಠಿಸಿದರು. ಎಸ್ಐಓ ಉಡುಪಿ ಜಿಲ್ಲಾಧ್ಯಕ್ಷ ಆಯಾನ್ ಮಲ್ಪೆ ವಂದಿಸಿದರು. ಸಿಐಓ ವಿದ್ಯಾರ್ಥಿನಿಯರು ತರಾನ ಹಾಡಿದರು. ಸಮೀರ್ ಪಾಶ ಮತ್ತು ಸಮೀರ್ ತೀರ್ಥಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್, ಉಪಾಧ್ಯಕ್ಷ ಇದ್ರಿಸ್ ಹೂಡೆ, ಮೌಲನ ಆದಂ ಸಾಹೇಬ್, ಕುಲ್ಸುಮ್ ಅಬೂಬಕ್ಕರ್, ನುಝ್ಲಾ ಫಾತಿಮಾ ಮೊದಲಾದವರು ಉಪಸ್ಥಿತರಿದ್ದರು.
‘ಅಭದ್ರತೆಯ ವಾತಾವರಣ ಸೃಷ್ಟಿ’ :
ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮೇಲೆ ಮಿತಿ ಮೀರಿದ ಮಾಹಿತಿಗಳನ್ನು ಹೇರಲಾಗುತ್ತಿದೆ. ಅದನ್ನು ಪರಿಶೀಲಿಸಿ ಉಪಯೋಗಿಸುವ ಅಗತ್ಯವಿದೆ. ಮಾಧ್ಯಮಗಳ ಮೂಲಕ ಯುವಕರಲ್ಲಿ ದ್ವೇಷ ಪಸರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾಡನ್ನು ಕಟ್ಟುವ, ನ್ಯಾಯವನ್ನು ಸ್ಥಾಪಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಈ ದೇಶದಲ್ಲಿ ಶಾಂತಿ ಸ್ಥಾಪನೆಗೆ, ನ್ಯಾಯಯುತ ಸಮಾಜದ ನಿರ್ಮಾಣಕ್ಕಾಗಿ ಯುವಕರು ಮುಂದಾಗಬೇಕೆಂದು ಎಸ್ಐಓ ರಾಜ್ಯಾಧ್ಯಕ್ಷ ಝೀಶಾನ್ ಅಖಿಲ್ ಸಿದ್ದೀಕಿ ತಿಳಿಸಿದರು.
ಇಂದು ಸಮಾನ ನಾಗರಿಕ ಸಂಹಿತೆ, ವಕ್ಫ್ ಹೆಸರಿನಲ್ಲಿ ಅನಗತ್ಯ ಚರ್ಚೆಗಳನ್ನು ಹುಟ್ಟು ಹಾಕಿ ಅಭದ್ರತೆಯ ವಾತಾವರಣ ಸೃಷ್ಟಿಸಲಾಗುತ್ತಿದೆ. ವಿದ್ಯಾರ್ಥಿಗಳು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪರಸ್ಪರ ಕೈ ಹಿಡಿದು ಮುಂದೆ ಸಾಗಬೇಕು. ಸಮುದಾಯ ಸಾಮಾಜಿಕವಾಗಿ ಒಳಗೊಳ್ಳುವ, ಸಂಬಂಧಗಳನ್ನು ಗಟ್ಟಿಯಾಗಿ ಬೇರೂರುವಂತೆ ಕಾಪಾಡಿಕೊಳ್ಳಬೇಕಾದ ಅಗತ್ಯದೊಂದಿಗೆ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಸಹಬಾಳ್ವೆಯ ಅಗತ್ಯವಿದೆ ಎಂದರು.







