ಸೊರ್ಕಳಂಗಡಿ: ಗಡಿಕಲ್ಲುಗಳು ಪತ್ತೆ

ಉಡುಪಿ, ಅ.22: ಶಿರ್ವ ಗ್ರಾಪಂ ವ್ಯಾಪ್ತಿಯ ಸೊರ್ಕಳಂಗಡಿಯ ಪಾಂಡುರಂಗ ಪ್ರಭು ಅವರ ಜಾಗದಲ್ಲಿ ಎರಡು ಗಡಿಕಲ್ಲು ಗಳು ಪತ್ತೆಯಾಗಿದ್ದು, ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ವಿದ್ಯಾರ್ಥಿನಿ ದಿವ್ಯ ಅದನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ.
ಪತ್ತೆಯಾದ ಎರಡು ಗಡಿಕಲ್ಲುಗಳನ್ನು ಕಣ (ಗ್ರಾನೈಟ್) ಶಿಲೆಯಲ್ಲಿ ನಿರ್ಮಾಣ ಮಾಡಿದ್ದು, ಶಿವಲಿಂಗ ಮತ್ತು ಮೇಲ್ಭಾಗದ ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯನ್ನು ನೋಡಬಹುದು. ಇದೇ ಮಾದರಿಯ ಇನ್ನೂ ಎರಡು ಗಡಿಕಲ್ಲುಗಳು ಈ ಪ್ರದೇಶದಲ್ಲಿವೆ ಎಂದು ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ.
ಇಂತಹ ಕೆತ್ತನೆಯಿರುವ ಗಡಿ ಕಲ್ಲುಗಳನ್ನು ಲಿಂಗಮುದ್ರೆ ಕಲ್ಲು ಎಂದು ಕರೆಯಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಭೂಮಿಯನ್ನು ದಾನವಾಗಿ ಕೊಟ್ಟ ಸಂದರ್ಭದಲ್ಲಿ ದಾನ ಭೂಮಿಯ ಚತುಸ್ಸೀಮೆಯನ್ನು ಗುರುತಿಸಲು ಈ ಲಿಂಗಮುದ್ರೆ ಕಲ್ಲುಗಳನ್ನು ಹಾಕಲಾಗುತ್ತಿತ್ತು. ಕಾಲಮಾನದ ದೃಷ್ಟಿಯಿಂದ ಈ ಲಿಂಗಮುದ್ರೆ ಕಲ್ಲುಗಳು ಸುಮಾರು 15-16ನೇ ಶತಮಾನಕ್ಕೆ ಸೇರುತ್ತದೆ ಎಂದು ಸಂಶೋಧನಾರ್ಥಿಯು ಅಭಿಪ್ರಾಯ ಪಟ್ಟಿದ್ದಾರೆ.
ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಸೋಮನಾಥ ಕುತ್ಯಾರು ಸಹಕಾರ ನೀಡಿದ್ದರು.







