ಶ್ರೀನಿವಾಸ ದೇವಾಡಿಗರಿಗೆ ಎಂ.ಎಂ. ಹೆಗ್ಡೆ ಪ್ರಶಸ್ತಿ

ಶ್ರೀನಿವಾಸ ದೇವಾಡಿಗ
ಉಡುಪಿ: ಕುಂದಾಪುರದ ಎಂ.ಎಂ. ಹೆಗ್ಡೆ ಪ್ರತಿಷ್ಠಾನ ಕೊಡ ಮಾಡುವ 2025ನೇ ಸಾಲಿನ ಎಂ.ಎಂ. ಹೆಗ್ಡೆ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಶ್ರೀನಿವಾಸ ದೇವಾಡಿಗ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 10,000ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಪ್ರಶಸ್ತಿಯನ್ನು ಫೆ.8ರಂದು ನಡೆಯುವ ಇಂದ್ರಾಳಿ ಯಕ್ಷಗಾನ ಕೇಂದ್ರದ ವಾರ್ಷಿಕೋತ್ಸವದಂದು ನೀಡಿ ಗೌರವಿಸಲಾಗುವುದು ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ ತಾಲೂಕಿನ ನಾಗೂರಿನ ಕಬ್ಬಾಗಿಲಲ್ಲಿ ತಮ್ಮ ದೇವಾಡಿಗ ಮತ್ತು ಕಾವೇರಿ ದೇವಾಡಿಗ ದಂಪತಿಗಳ ಪುತ್ರನಾಗಿ ಜನಿಸಿದ ಶ್ರೀನಿವಾಸ ದೇವಾಡಿಗ, ಬಾಲ್ಯದಲ್ಲೇ ವಿದ್ಯಾಭ್ಯಾಸ ಮೊಟಕುಗೊಳಿಸಿ ಚಂಡೆ ಮದ್ದಲೆಯ ನಾದಕ್ಕೆ ಮನಸೋತು ಅಲ್ಲಿಂದಲೇ ತಮ್ಮನ್ನು ಯಕ್ಷಗಾನದಲ್ಲಿ ತೊಡಗಿಸಿಕೊಂಡರು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ 1982ರಲ್ಲಿ ಕೋಟ ಶಿವರಾಮ ಕಾರಂತರ ನೇತೃತ್ವದಲ್ಲಿ ಹೆರಂಜಾಲು ವೆಂಕಟರಮಣ ಗಾಣಿಗರ ಮಾರ್ಗದರ್ಶನದಲ್ಲಿ ಯಕ್ಷಗಾನದ ಹೆಜ್ಜೆ ಅಭ್ಯಾಸ ಮಾಡಿ, ಯಶಸ್ಸನ್ನು ಸಾಧಿಸಿದರು.
ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ ದೇವಾಡಿಗ, ಪೌರಾಣಿಕ ಪ್ರಸಂಗಗಳಲ್ಲಿ ಶಲ್ಯ, ಕಮಲಭೂಪ, ಕೌಂಡ್ಲಿಕ, ಭೀಮ, ಕೌರವ, ಬಲರಾಮ ರಾವಣ, ಯಮ, ಬೊಬ್ಬರ್ಯ ಮುಂತಾದ ಮೇರು ಪಾತ್ರಗಳಲ್ಲಿ ಅಭಿನಯಿಸಿ ಪಾತ್ರಗಳಿಗೆ ಜೀವಂತಿಕೆಯನ್ನು ತುಂಬಿದವರು. ಇವರನ್ನು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.





