ಸಿದ್ದಾಪುರ ಏತ ನೀರಾವರಿ ಯೋಜನಾ ಕಾಮಗಾರಿಗೆ ಹಠಾತ್ ತಡೆ: ಜಿಲ್ಲಾ ರೈತ ಸಂಘ, ಗ್ರಾಮಸ್ಥರಿಂದ ಪ್ರತಿಭಟನೆ

ಸಿದ್ಧಾಪುರ(ಕುಂದಾಪುರ), ಜ.21: ಸಿದ್ದಾಪುರ ಏತ ನೀರಾವರಿ ಯೋಜನೆ ಫಲಾನುಭವಿ ಗಳಾದ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರ ಅಭಿಪ್ರಾಯಕ್ಕೆ ಹಾಗೂ ಗ್ರಾಮಸಭೆ ನಿರ್ಣಯಕ್ಕೂ ಬೆಲೆ ಕೊಡದೆ ಯೋಜನೆಯ ಕಾಮಗಾರಿಯನ್ನು ಹಠಾತ್ತನೆ ನಿಲ್ಲಿಸುವ ಮೂಲಕ ವ್ಯವಸ್ಥೆಯು ರೈತವಿರೋಧಿ ಧೋರಣೆ ತಳೆದಿದ್ದು, ಈ ಬಗ್ಗೆ ಉಡುಪಿ ಜಿಲ್ಲಾ ರೈತ ಸಂಘವು ಈ ಭಾಗದ ರೈತರ ಪರವಾಗಿ ನಿಲ್ಲಲಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ, ವಿಧಾನಪರಿಷತ್ನ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಹೇಳಿದ್ದಾರೆ.
ಸಿದ್ದಾಪುರ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ತಡೆದಿರುವ ಹುನ್ನಾರದ ವಿರುದ್ಧ ಜ.21 ಬುಧವಾರ ಸಿದ್ದಾಪುರ ಸರ್ಕಲ್ ಬಳಿ ಸಿದ್ದಾಪುರ ಏತ ನೀರಾವರಿ ವ್ಯಾಪ್ತಿಯ ರೈತರು, ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ‘ಬೃಹತ್ ಜನಾಗ್ರಹ ಸಭೆ’ಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಯಾರೋ ಹೇಳುತ್ತಾರೆಂದು ಮಾಜಿ ಶಾಸಕರೊಬ್ಬರು ಕಾಮಗಾರಿ ವಿಚಾರ ದಲ್ಲಿ ಸರಕಾರಕ್ಕೆ ಪತ್ರ ಬರೆದಿದ್ದು ಸತತವಾಗಿ ಆರಿಸಿ ಕಳಿಸಿದ್ದ ಜನರು, ರೈತರ ವಿರೋಧಿಯಾಗಿ ಪತ್ರ ಕೊಟ್ಟಿದ್ದು ರಾಜಕೀಯ ದುರಂತ. ಇದು ಒಪ್ಪುವ ವಿಚಾರವಲ್ಲ. ಇಲ್ಲಿನ ಕಾಮಗಾರಿ ನಿಲ್ಲಿಸುವಂತೆ ಮಾಡಿದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನಪ್ರತಿನಿಧಿಯಾದವರು ಜನರ ಪರವಾಗಿರಬೇಕು. ಜನರ ಭಾವನೆಗಳಿಗೆ, ಅನಿಸಿಕೆಗಳಿಗೆ ಸ್ಪಂದಿಸಬೇಕು ಎಂದರು.
ವಾರಾಹಿ ವಿಚಾರದಲ್ಲಿ ಗುತ್ತಿಗೆ ಕಂಪೆನಿಗಳ ನಡುವೆ ಮೊದಲಿನಿಂದಲೂ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ. ಆದರೆ ನಿರ್ದಿಷ್ಟ ಸಮಾಜ (ಸಮುದಾಯ) ವನ್ನು ಮುಂದಿಟ್ಟುಕೊಂಡು ಕರಾವಳಿ ಜಿಲ್ಲೆಗಳಲ್ಲಿ ಗುತ್ತಿಗೆ ಮಾಡಲಾಗುತಿದ್ದು ಇದು ದುರಂತ ಹಾಗೂ ಖಂಡನೀಯ ಎಂದು ಪ್ರತಾಪ್ಚಂದ್ರ ಶೆಟ್ಟಿ ಹೇಳಿದರು.
10 ವರ್ಷಗಳ ಹಿಂದೆ ವಾರಾಹಿ ನೀರಿನ ವಿಚಾರದಲ್ಲಿ ರೈತರ ಪರ ಹೋರಾಟ ಮಾಡಿದಾಗಲೂ ನನ್ನ ವಿರುದ್ಧ ಆರೋಪಗಳನ್ನು ಮಾಡಲಾಗಿತ್ತು. ಪಕ್ಷದಿಂದ ಉಚ್ಛಾಟನೆ ಬಗ್ಗೆ ಸ್ವಪಕ್ಷದಲ್ಲೇ ಕೆಲವರು ಕಾದಿದ್ದರು. ಈಗ ರೈತಸಂಘ ಬಿಜೆಪಿ ಹಿಂದೆ ಹೋಗುತ್ತಿದೆ ಎಂದು ಕೆಲವರು ಟೀಕಿಸ ತೊಡಗಿದ್ದಾರೆ. ರೈತ ಸಂಘ ರೈತರ ಪರವಾಗಿದೆ ಹೊರತು ಬಿಜೆಪಿ, ಕಾಂಗ್ರೆಸ್ ಹಿಂದೆ ಹೋಗಿಲ್ಲ. ರೈತರ ಋಣ ಸಂದಾಯ ಮಾಡುವ ಕೆಲಸವನ್ನು ಕರ್ತವ್ಯವೆಂದು ನಂಬಿ ಸಂಘ ಮಾಡುತ್ತಿದೆ ಎಂದು ಅವರು ಹೇಳಿದರು.
ಜನರ ನೋವು-ನಲಿವಿಗೆ ಜನಪ್ರತಿನಿಧಿಗಳು ಸ್ಪಂದನೆ ನೀಡಬೇಕು. ಆದರೆ ವಾರಾಹಿ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಬಹಳಷ್ಟು ಮಂದಿ ಮಾತನಾಡದಿದ್ದಾಗ ರೈತ ಸಂಘ ಬೀದಿಗಿಳಿದು ಹೋರಾಟ ಮಾಡಿತ್ತು. ವೈಯಕ್ತಿಕವಾಗಿ ಅಥವಾ ರೈತ ಸಂಘಕ್ಕಾಗಲಿ ಯಾರೊಂದಿಗೂ ವಿರೋಧವಿಲ್ಲ. ಆದರೆ ರೈತರ ಹಿತಾಸಕ್ತಿ ಕಾಪಾಡಲು ರೈತ ಸಂಘ ಸಿದ್ಧವಿದೆ. ಬಲದಂಡೆ, ಎಡದಂಡೆ ಹಾಗೂ ಏತ ನೀರಾವರಿ ಯೋಜನೆಗಳ ಮೂಲಕ ನೀರೂಣಿಸುವ ಯೋಜನೆಗಳಾಗುತ್ತಿದ್ದರೂ, ಯೋಜನಾ ಪ್ರದೇಶದ ನೆರೆಯ ಗ್ರಾಮವಾಗಿರುವ ಸಿದ್ದಾಪುರಕ್ಕೆ ನೀರು ಕೊಡುವ ಬಗ್ಗೆ ಯಾರೂ ಸಹ ಮಾತನಾಡುತ್ತಿಲ್ಲ ಎಂದವರು ದೂರಿದರು.
ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿರುವ ವಾರಾಹಿ ಯೋಜನೆಯ ಕಾಮಗಾರಿಗಳಲ್ಲಿ ಲೋಪ, ನ್ಯೂನತೆ ಹಾಗೂ ಕಳಪೆತನ ಇದೆ. ಇದೇ ಪರಿಸ್ಥಿತಿ ಸಿದ್ಧಾಪುರ ಏತ ನೀರಾವರಿ ಯೋಜನೆಯ ಕಾಮಗಾರಿ ಹಂತದಲ್ಲಿ ಉದ್ಭವವಾದಲ್ಲಿ ಗುತ್ತಿಗೆದಾರರ ವಿರುದ್ಧ ಹೋರಾಟ ಮಾಡಬೇಕಾದ ಪರಿಸ್ಥಿತಿ ಬರುವ ಮೊದಲೇ ಎಚ್ಚೆತ್ತು ಕೊಳ್ಳಬೇಕಾದ ಜವಾಬ್ದಾರಿ ಸ್ಥಳೀಯರದ್ದಾಗಿದೆ ಎಂದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಸಮಸ್ಯೆಗಳು ಜಟಿಲ ಗೊಂಡಾಗ ಹೋರಾಟದ ಅಗತ್ಯವಿರುತ್ತದೆ. ದೊಡ್ಡವರು ಸಮಸ್ಯೆ ಸೃಷ್ಟಿಸಿದಾಗಲೇ ಅದರ ತೀವ್ರತೆ ಜಾಸ್ತಿ. ಆ ಸಮಸ್ಯೆ ಪರಿಹರಿಸುವಲ್ಲಿ ಜನರು, ಮುಖಂಡರು, ಅಧಿಕಾರಿಗಳು, ತಂತ್ರಜ್ಞರ ಬೆಂಬಲ ಅಗತ್ಯವಾಗಿದ್ದು ಈ ಸಮಸ್ಯೆಯನ್ನು ಪರಿಹಾರದ ಹೋರಾಟ ಎಂದು ಪರಿಗಣಿಸಬೇಕಿದೆ ಎಂದು ನುಡಿದರು.
ನಿವೃತ್ತ ಆರೋಗ್ಯಾಧಿಕಾರಿ ಹಾಗೂ ಕೃಷಿಕ ಡಾ. ನಾಗಭೂಷಣ ಉಡುಪ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ, ಸಿದ್ಧಾಪುರ ಗ್ರಾಪಂ ಸದಸ್ಯ ಶೇಖರ್ ಕುಲಾಲ್, ಉಳ್ಳೂರು-74 ಗ್ರಾಪಂ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಕಟ್ಟಿನಬೈಲು, ಆಜ್ರಿ ಗ್ರಾಪಂ ಅಧ್ಯಕ್ಷೆ ಮುಕಾಂಬು, ಉಪಾಧ್ಯಕ್ಷೆ ಗಾಯತ್ರಿ ನಾಯ್ಕ್, ಹೊಸಂಗಡಿ ಗ್ರಾಪಂ ಅಧ್ಯಕ್ಷೆ ಶಾಂತಿ ನಾಯಕ್, ಉಪಾಧ್ಯಕ್ಷೆ ಶಾರದಾ, ಅಂಪಾರು ಗ್ರಾಪಂ ಅಧ್ಯಕ್ಷ ಗೋಪಾಲಕೃಷ್ಣ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ ವೇದಿಕೆಯಲ್ಲಿದ್ದರು.
ಇಲ್ಲಿನ ಕೃಷಿಕರ ಸಮಸ್ಯೆಗಳ ಕುರಿತಂತೆ ನ್ಯಾಯವಾದಿ ಉಮೇಶ್ ಶೆಟ್ಟಿ ಶಾನ್ಕಟ್ಟು, ನಿವೃತ್ತ ಅಬಕಾರಿ ಅಧಿಕಾರಿ ಶಿವರಾಮ ಶೆಟ್ಟಿ, ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ನವೀನ್ ಶೆಟ್ಟಿ ಶಾನ್ಕಟ್ಟು, ಸಿದ್ದಾಪುರ ಗ್ರಾಪಂ ಮಾಜಿ ಅಧ್ಯಕ್ಷ ಶೇಖರ ಕುಲಾಲ್, ರೈತಪರ ಹೋರಾಟಗಾರ ಹರ್ಷ ಮೇಲ್ಜಡ್ಡು, ಆಜ್ರಿ ಗ್ರಾಪಂ ಸದಸ್ಯ ಪ್ರವೀಣ್ ಶೆಟ್ಟಿ ಜನಾಗ್ರಹ ಸಭೆಯಲ್ಲಿ ಮಾತನಾಡಿದರು.
ಪ್ರಮುಖರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಉಮೇಶ್ ಶೆಟ್ಟಿ ಕಲ್ಗದ್ದೆ, ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಎಸ್. ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ಜಯರಾಂ ಭಂಡಾರಿ, ಗೋಪಾಲ ಕಾಮತ್, ಉದಯಕುಮಾರ ಶೆಟ್ಟಿ ವಂಡ್ಸೆ, ಶರತ್ ಶೆಟ್ಟಿ ಬಾಳಿಕೆರೆ, ವಾಸುದೇವ ಪೈ ಸಿದ್ದಾಪುರ, ಮಂಜುನಾಥ ಕುಲಾಲ್, ಕೃಷ್ಣ ಪೂಜಾರಿ ಮತ್ತಿಬೇರು, ಶಾನೋಜ್ ಸಿದ್ದಾಪುರ, ರಾಬಿನ್ ಆಜ್ರಿ, ಕೃಷ್ಣದೇವ ಕಾರಂತ ಕೋಣಿ, ವಿನೋದ್ ಕ್ರಾಸ್ತಾ , ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರು, ಸಾವಿರಾರು ರೈತರು ಉಪಸ್ಥಿತರಿದ್ದರು.
ಮನವಿ ಸಲ್ಲಿಕೆ: ಪ್ರತಿಭಟನಾ ಸಭೆ ಬಳಿಕ ಸಿದ್ದಾಪುರದಲ್ಲಿರುವ ಕರ್ನಾಟಕ ನೀರಾವರಿ ನಿಗಮ (ವಾರಾಹಿ) ಕಚೇರಿಗೆ ಜಾಥಾದ ಮೂಲಕ ಸಾಗಿ ಕಾಮಗಾರಿ ತಡೆ ಆದೇಶವನ್ನು ಹಿಂಪಡೆಯುವಂತೆ ಹಾಗೂ ರೈತರಿಗೆ ಅನುಕೂಲ ವಾಗುವ ಪ್ರಸ್ತುತ ಸ್ಥಳದಲ್ಲೇ ಯೋಜನೆ ಮುಂದುವರೆಸಲು ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಜಿಪಂ ಸದಸ್ಯ ರೋಹಿತ್ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೋರಾಟಗಾರ ಶ್ರವಣ್ ಶೆಟ್ಟಿ ಸಂಪಿಗೇಡಿ ಸ್ವಾಗತಿಸಿದರು. ದಿನೇಶ್ ಪೂಜಾರಿ ಉಳ್ಳೂರು-74 ನಿರೂಪಿಸಿ, ಉದಯ್ ಶೆಟ್ಟಿ ರೈತಗೀತೆ ಹಾಡಿದರು, ಪ್ರಸಾದ್ ಶೆಟ್ಟಿ ವಂದಿಸಿದರು.
ಶಂಕರನಾರಾಯಣದ ಅಣೆಕಟ್ಟಿನ ಕೆಳಗೆ ಯಾವುದೇ ಯೋಜನೆ ಮಾಡಿದರೂ ಯಾವುದೇ ಆಕ್ಷೇಪ ಇಲ್ಲ. ಆದರೆ ಮೇಲ್ಭಾಗದಲ್ಲಿ ಆಗುವ ಎಲ್ಲ ಯೋಜನೆಗಳಿಗೂ ಆಕ್ಷೇಪಗಳು ಬರುತ್ತವೆ. ಯಾಕೆಂದು ರೈತರು ಅರ್ಥೈಸಿಕೊಳ್ಳಬೇಕು. ಸಿದ್ದಾಪುರ ಏತ ನೀರಾವರಿ ಯೋಜನೆ ವಿಚಾರದಲ್ಲಿ ಹೋರಾಟ ಸಮಿತಿಯನ್ನು ಪಕ್ಷಾತೀತವಾಗಿ ರಚಿಸಿ, ಎಲ್ಲರ ವಿಶ್ವಾಸ ಪಡೆದು ಕೊಂಡು ನಿರಂತರವಾಗಿ ಹೋರಾಟ ಮುಂದುವರೆಸುವುದು ಸೂಕ್ತ. ರೈತಸಂಘ ಜೊತೆಗಿರಲಿದೆ.
- ಕೆ. ಪ್ರತಾಪಚಂದ್ರ ಶೆಟ್ಟಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರು.
ರಾಜಕೀಯ ಪಕ್ಷಗಳು ಹೋರಾಟವನ್ನು ಸಂಘಟಿಸಿದಾಗ ಪಕ್ಷದ ತೀರ್ಮಾನದ ಬದ್ಧತೆಯಲ್ಲಿ ಪಾಲ್ಗೊಳ್ಳುತ್ತಾರೆ. ಪಕ್ಷಾತೀತವಾಗಿ ಹೋರಾಟ ಆಗುತ್ತದೆ ಎಂದಾಗ, ಸಬೂಬು ಹೇಳಿ, ಹೋರಾಟದಿಂದ ತಪ್ಪಿಸಿ ಕೊಳ್ಳುವವರಿದ್ದಾರೆ. ಆದರೆ ಬದುಕು, ಅಸ್ತಿತ್ವದ ಪ್ರಶ್ನೆ ಬಂದಾಗ ಹೋರಾಟ ಆಗಲೇಬೇಕು. ಸಿದ್ದಾಪುರ ಏತ ನೀರಾವರಿ ಯೋಜನೆ ವಿಚಾರ ರೈತರಿಗೆ ಅನುಕೂಲವಾಗುವಂತೆ ನಡೆಯಬೇಕಿದ್ದು ಇದರಲ್ಲಿ ಯಾವುದೇ ರಾಜಿಯಿಲ್ಲ. ಅನ್ಯಾಯಕ್ಕೊಳಗಾದವರ ಜೊತೆಗೂಡಿ ನಡೆಸುವ ಮುಂದಿನ ಹೋರಾಟಕ್ಕೆ ಚಾಲನೆ ಸಿಕ್ಕಿದೆ.
-ಗುರುರಾಜ್ ಗಂಟಿಹೊಳೆ, ಬೈಂದೂರು ಶಾಸಕ.







