ಉಡುಪಿ ಜಿಲ್ಲೆಯಲ್ಲಿ ಪೂರ್ಣಗೊಂಡ 75,909 (ಶೇ.21.33) ಮನೆಗಳ ಸಮೀಕ್ಷೆ

ಉಡುಪಿ, ಸೆ.30: ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ನಡೆಯು ತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಒಂಭತ್ತನೆ ದಿನವಾದ ಇಂದು ಉಡುಪಿ ಜಿಲ್ಲೆಯಲ್ಲಿ ಒಟ್ಟು 23,587 ಮನೆಗಳ ಸಮೀಕ್ಷೆಯನ್ನು ಗಣತಿದಾರರು ಪೂರ್ಣಗೊಳಿಸಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಗಣತಿಗೆ ಲಭ್ಯವಿರುವ 3,55,771 ಮನೆಗಳ ಪೈಕಿ ಒಟ್ಟು 75,909 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಈ ಮೂಲಕ ಶೇ.21.33ರಷ್ಟು ಗಣತಿ ಪೂರ್ಣಗೊಂಡಂತಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ತಿಳಿಸಿದ್ದಾರೆ.
2025-26ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ವಿದ್ಯುತ್ ಸಂಪರ್ಕ ಪಡೆದ ಒಟ್ಟು 3.55 ಲಕ್ಷ ಮನೆಗಳಿಗೂ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸುವ ಸಂಬಂಧ ಈಗಾಗಲೇ ಮೆಸ್ಕಾಂ ಇಲಾಖೆ ಮೂಲಕ ಆರ್.ಆರ್.ನಂಬರ್ ಹೊಂದಿರುವ ಎಲ್ಲಾ ಮನೆಗಳಿಗೆ ಜಿಯೋಟ್ಯಾಗ್ ಸ್ಟಿಕರ್ ಅಳವಡಿಸಲಾಗಿದೆ.
ಸೆ.22ರಿಂದ ಅಕ್ಟೋಬರ್ 7ರವರೆಗೆ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷಾ ಕಾರ್ಯವನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ನಿಯೋಜಿತ ಗಣತಿದಾರರು ಜಿಲ್ಲೆಯ ನಾಗರಿಕರ ಮನೆ ಗಳಿಗೆ ಭೇಟಿ ನೀಡಿದ ಸಮಯದಲ್ಲಿ ಕುಟುಂಬದ ಪಡಿತರ ಚೀಟಿ, ಆಧಾರ್ ಸಂಖ್ಯೆ, ವಿಶೇಷ ಚೇತನರು ಕುಟುಂಬದಲ್ಲಿದ್ದರೆ ಯು.ಡಿ.ಐ.ಡಿ ಸಂಖ್ಯೆಯನ್ನು ಗಣತಿದಾರರಿಗೆ ನೀಡಬೇಕಾಗಿದೆ.
ಪ್ರತಿ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ಗಳು ಮೊಬೈಲ್ಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಸಮೀಕ್ಷೆ ವೇಳೆ ಇ-ಕೆವೈಸಿ(ಆಧಾರ್) ಪ್ರಕ್ರಿಯೆಗಾಗಿ ಒಟಿಪಿ ಸಂಖ್ಯೆ ಆ ಸದಸ್ಯರ ಆಧಾರ್ ನಂಬರ್ಗೆ ಜೋಡಣೆ ಆಗಿರುವ ಮೊಬೈಲ್ ಸಂಖ್ಯೆಗೆ ಬರಲಿದ್ದು, ಒಂದು ವೇಳೆ ಆ ಸದಸ್ಯರು ಮನೆಯಲ್ಲಿಲ್ಲದಿದ್ದರೆ ಕುಟುಂಬದ ಪರವಾಗಿ ಉತ್ತರ ನೀಡುತ್ತಿರುವ ಸದಸ್ಯರ ಫೋನ್ ಮೂಲಕ ಒಟಿಪಿ ಸಂಖ್ಯೆಯನ್ನು ನೀಡಬಹುದಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧ ಜನತೆಗೆ ಪಂಚಾಯತ್ ಸಿಬ್ಬಂದಿಗಳ ಮೂಲಕ ಮಾದರಿ ನಮೂನೆಯೊಂದಿಗೆ ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ಅದರಂತೆ, ಸೆ.22ರಿಂದ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸಮೀಕ್ಷೆಗಾಗಿ ಒಟ್ಟು 3,158 ಗಣತಿದಾರರನ್ನು ನೇಮಿಸಲಾಗಿದೆ.
ಆನ್ಲೈನ್ನಲ್ಲಿ ಸಮೀಕ್ಷೆ: ಆಯೋಗದ ಸಮೀಕ್ಷೆ ಕಾರ್ಯವನ್ನು ನಾಗರಿಕರು ತಾವೇ ನೇರವಾಗಿ ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಏರ್ಪಡಿಸುವ ಶಿಬಿರದಲ್ಲಿ ಭಾಗಹಿಸುವ ಮೂಲಕವೂ ಮಾಡಬಹುದು. ಇದಕ್ಕೆ - https://kscbcselfdeclaration.karnataka.gov.inನಲ್ಲಿ ಲಾಗಿನ್ ಆಗಿ ಸಮೀಕ್ಷಾ ಕಾರ್ಯದಲ್ಲಿ ದಾಖಲು ಮಾಡಿಕೊಳ್ಳಬಹುದಾಗಿದೆ. ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದ್ದಾರೆ.
ಮೂರೇ ದಿನದಲ್ಲಿ ಸಮೀಕ್ಷೆ ಮುಗಿಸಿದ ಗಣತಿದಾರ
ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ಮೊದಲ ನಾಲ್ಕೈದು ದಿನ ಸಮೀಕ್ಷಾ ಕಾರ್ಯ ತೀರಾ ನಿಧಾನವಾಗಿ ನಡೆದಿದ್ದರೂ ಬೈಂದೂರು ತಾಲೂಕು ಯಡಮೊಗೆ ಗ್ರಾಮದ ಗಣತಿದಾರರೊಬ್ಬರು ತಮಗೆ ನಿಗದಿ ಪಡಿಸಿದ ಮನೆಗಳ ಸಮೀಕ್ಷೆ ಯನ್ನು ಕೇವಲ ಮೂರೇ ದಿನಗಳಲ್ಲಿ ಪೂರ್ಣಗೊಳಿಸಿ ವಿಶೇಷ ಸಾಧನೆ ಮಾಡಿದ್ದಾರೆ.
ಯಡಮೊಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿದ್ದ ಮಲ್ಲೇಶ್ ಸೆ.22ರಿಂದಲೇ ತಮಗೆ ವಹಿಸಿದ್ದ ಸಮೀಕ್ಷಾ ಕರ್ತವ್ಯವನ್ನು ಪ್ರಾರಂಭಿಸಿ ಕೇವಲ ಮೂರು ದಿನಗಳ ಒಳಗೆ ಪೂರ್ಣಗೊಳಿಸಿದ್ದಾರೆ. ಈ ವಿಶೇಷ ಸಾಧನೆ ಗಾಗಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಮಲ್ಲೇಶ್ರನ್ನು ಅಭಿನಂದಿಸಿದ್ದಾರೆ.
ತಾಲೂಕುವಾರು ಸಮೀಕ್ಷಾ ವಿವರ
ಮಂಗಳವಾರ ಸಂಜೆಯವರೆಗೆ ಉಡುಪಿ ಜಿಲ್ಲೆಯ ಏಳು ತಾಲೂಕುಗಳಲ್ಲಿ ಪೂರ್ಣಗೊಂಡಿರುವ ಸಮೀಕ್ಷೆಯ ವಿವರ ಹೀಗಿದೆ.
(ತಾಲೂಕು - ಒಟ್ಟು ಕುಟುಂಬಗಳು - ಬ್ಲಾಕ್ಗಳು - ಸಮೀಕ್ಷೆ ಪೂರ್ಣಗೊಂಡ ಮನೆಗಳ ವಿವರ)
ಉಡುಪಿ - 97,918 - 844 - 7,497
ಕುಂದಾಪುರ - 65,791 - 621 - 15,341
ಕಾರ್ಕಳ - 57,740 - 531 - 12,612
ಕಾಪು - 43,834 - 403 - 6,519
ಹೆಬ್ರಿ - 12,939 - 121 - 4,703
ಬ್ರಹ್ಮಾವರ - 51,139 - 465 - 15,513
ಬೈಂದೂರು - 26,410 - 246 - 8,786







