ಹೆಬ್ರಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಬೆಂಕಿ ಬಗ್ಗೆ ಅನುಮಾನ: ಸಮಗ್ರ ತನಿಖೆಗೆ ಗ್ರಾಮಸ್ಥರ ಆಗ್ರಹ

ಉಡುಪಿ, ಫೆ.21: ಹೆಬ್ರಿಯಲ್ಲಿರುವ, ಆಸುಪಾಸಿನ 16 ಗ್ರಾಪಂಗಳ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕಳೆದ ಜ.14ರಂದು ಕಂಡುಬಂದ ಬೆಂಕಿ ಅಕಸ್ಮಿಕದ ಕುರಿತಂತೆ ಹೆಬ್ರಿಯ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಈ ಕುರಿತಂತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಜ.14ರಂದು ಹೆಬ್ರಿ ತಾಲೂಕು ಪಂಚಾಯತ್ ಅಧೀನದಲ್ಲಿರುವ ಹೆಬ್ರಿಯ ಎಂಆರ್ಎಫ್ ಘಟಕಕ್ಕೆ ಅಕಸ್ಮಿಕವಾಗಿ ಬೆಂಕಿ ಬಿದ್ದು ಕೋಟ್ಯಾಂತರ ರೂ. ಮೌಲ್ಯದ ಸೊತ್ತುಗಳು, ಯಂತ್ರೋಪಕರಣಗಳು ನಾಶವಾಗಿರುವ ಬಗ್ಗೆ ಹೆಬ್ರಿ ತಾಪಂ ಕಾರ್ಯನಿರ್ವಹಣಾಧಿಕಾರಿಯವರು ಮಾಹಿತಿ ನೀಡಿದ್ದರು. ಬೆಂಕಿ ಅಕಸ್ಮಿಕಕ್ಕೆ ವಿದ್ಯುತ್ ಶಾರ್ಟ್ಸರ್ಕ್ಯೂಟ್ ಕಾರಣ ಎಂಬ ಸಂಶಯವಿದೆ ಎಂದವರು ತಿಳಿಸಿದ್ದರು.
ಆದರೆ ಕಳೆದ ಆರೇಳು ತಿಂಗಳುಗಳಿಂದ ಈ ಘಟಕ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇಲ್ಲಿ ಯಾವುದೇ ಕಸಗಳ ವಿಲೇವಾರಿ ನಡೆಯುತ್ತಿ ರಲಿಲ್ಲ. ಇದರ ವಿದ್ಯುತ್ ಸಂಪರ್ಕವೂ ಕಡಿತಗೊಂಡಿತ್ತು ಎಂದು ಹೆಬ್ರಯ ಪ್ರಗತಿಪರ ಸೇವಾ ಸಮಿತಿಯ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಹಾಗೂ ಶ್ರೀಕಾಂತ್ ಹೆಬ್ರಿ ಹೇಳುತ್ತಾರೆ.
ಒಂದು ವಾರದಲ್ಲಿ ಮೂರನೇ ಘಟಕಕ್ಕೆ ಹೀಗೆ ಬೆಂಕಿ ಬೀಳುತ್ತಿದೆ. ಇದು ಖಂಡಿತ ಅಕಸ್ಮಿಕವಲ್ಲ. ಉದ್ದೇಶಪೂರ್ವಕ. ಯಾರೋ ಉದ್ದೇಶಪೂರ್ವಕವಾಗಿ ಬೆಂಕಿ ಹಾಕಿರಬಹುದು. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯ ಬಹಿರಂಗ ಪಡಿಸುವಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದೇವೆ ಎಂದವರು ತಿಳಿಸಿದರು.
ಆಸುಪಾಸಿನಹೆಬ್ರಿ, ಚಾರ, ಬೆಳಂಜೆ, ಮಡಾಮಕ್ಕಿ ಸೇರಿದಂತೆ 16 ಗ್ರಾಪಂ ಗಳ ತ್ಯಾಜ್ಯಗಳ ನಿರ್ವಹಣೆಗಾಗಿ ಸುಮಾರು 3ರಿಂದ 4 ಕೋಟಿ ರೂ.ವೆಚ್ಚದಲ್ಲಿ ಈ ಘಟಕವನ್ನು ನಿರ್ಮಿಸಲಾಗಿದೆ. ಕೆಲವು ದಿನಗಳ ಹಿಂದೆ ಬೆಳ್ವೆಯ ಎಂಆರ್ಎಫ್ ಘಟಕಕ್ಕೆ ಬೆಂಕಿ ಬಿದ್ದಿತ್ತು ಎಂದು ಶ್ರೀಕಾಂತ್ ಹೆಬ್ರಿ ತಿಳಿಸಿದರು.
ಕೆಲವು ತಿಂಗಳ ಹಿಂದೆಯೇ ಘಟಕಕ್ಕೆ ಬೀಗ ಹಾಕಲಾಗಿದ್ದು, ಕೀಯನ್ನು ತಾಲೂಕು ಪಂಚಾಯತ್ಗೆ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಅಲ್ಲಿನ ವಿದ್ಯುತ್ ಸಂಪರ್ಕವೂ ಕಡಿತಗೊಂಡಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಬೆಂಕಿ ಬಿದ್ದಿರುವ ಘಟನೆ ಅನುಮಾನಕ್ಕೆ ಕಾರಣವಾಗಿದೆ ಎಂದು ಹಿರಿಯ ಹೋರಾಟಗಾರರಾದ ಸಂಜೀವ ಶೆಟ್ಟಿ ತಿಳಿಸಿದರು.
ದುಬಾರಿ ಯಂತ್ರೋಪಕರಣಗಳು, ತಾಂತ್ರಿಕ ಸೌಲಭ್ಯಗಳು ಮತ್ತು ಮೂಲ ಸೌಕರ್ಯಗಳು ಬೆಂಕಿಗೆ ಆಹುತಿಯಾಗಿ ರುವುದರಿಂದ ಸಾರ್ವಜನಿಕ ಹಣದ ದುರುಪಯೋಗವಾಗುತ್ತಿದೆ ಎಂಬ ಗಂಭೀರ ಆರೋವನ್ನು ಅವರು ಮಾಡಿದ್ದಾರೆ. ಇದೀಗ ಗುತ್ತಿಗೆದಾರರು ಇನ್ಸೂರೆನ್ಸ್ ಹಣ ಪಡೆಯಲು ಪ್ರಯತ್ನ ನಡೆಸುತ್ತಿರುವ ಬಗ್ಗೆಯೂ ನಮಗೆ ಮಾಹಿತಿ ಇದೆ ಎಂದು ಶ್ರೀಕಾಂತ್ ಹೆಬ್ರಿ ತಿಳಿಸಿದರು.
ಆದ್ದರಿಂದ ಬೆಂಕಿ ಅಕಸ್ಮಿಕದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ಎಲ್ಲವನ್ನೂ ಬಹಿರಂಗ ಪಡಿಸುವಂತೆ ಅವರು ಒತ್ತಾಯಿಸಿದ್ದಾರೆ.






