ಜ.8ರಂದು ಪರ್ಯಾಯ ಪುತ್ತಿಗೆ ಮಠದಿಂದ ‘ಸುವರ್ಣ ಗೀತಾ’ ಸಮರ್ಪಣೆ

ಉಡುಪಿ, ಜ.7: ವಿಶ್ವ ಗೀತಾ ಪರ್ಯಾಯ ಖ್ಯಾತಿಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಅವರ ಚತುರ್ಥ ಪರ್ಯಾಯದ ಸದವಸರದಲ್ಲಿ ಸಿದ್ಧಪಡಿಸಲಾದ ಸುವರ್ಣ ಗೀತಾ ಬೃಹತ್ ಕೃತಿಯನ್ನು ಜ.8ರಂದು ಸಂಜೆ 5 ಗಂಟೆಗೆ ಶ್ರೀವ್ಯಾಸರಾಜ ಮಠ ಶ್ರೀ ವಿದ್ಯಾಶ್ರೀಶ ತೀರ್ಥರು ಲೋಕಾರ್ಪಣೆಗೊಳಿಸಲಿದ್ದಾರೆ.
ಹೊಸದಿಲ್ಲಿಯ ಕೇಂದ್ರ ಗೃಹಸಚಿವಾಲಯದ ನಿವೃತ್ತ ಕಾರ್ಯದರ್ಶಿ ಲಕ್ಷ್ಮೀನಾರಾಯಣನ್ ಅವರು ಸುಮಾರು 2ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿ ಕೋಟಿ ಗೀತಾ ಲೇಖನ ಯಜ್ಞದ ಸ್ಮರಣಿಕೆಯಾಗಿ ಶ್ರೀಸುಗುಣೇಂದ್ರತೀರ್ಥರಿಗೆ ಸಮರ್ಪಿಸಲಿದ್ದಾರೆ.
ಇದಕ್ಕೆ ಮುನ್ನ ಹೊತ್ತಗೆಯನ್ನು ಚಿನ್ನದ ರಥದಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆಯಲ್ಲಿ ತರಲಾಗುವುದು. ಬಳಿಕ ರಾಜಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರೊಂದಿಗೆ ಕಿರಿಯ ಯತಿ ಗಳಾದ ಶ್ರೀಸುಶ್ರೀಂದ್ರತೀರ್ಥರ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಪಂಢರಾಪುರ ದೇವಳ ಟ್ರಸ್ಟ್ ಅಧ್ಯಕ್ಷ ಗಹನೀನಾಥ ಜ್ಞಾನೇಶ್ವರ ಮಹಾರಾಜ್ ಔಶೇಕರ್, ಆಳಂದ ಜ್ಞಾನೇಶ್ವರ ಮಹಾರಾಜ್ ಪೀಠದ ಪ್ರಧಾನ ಅರ್ಚಕ ಗಿರೀಶ್ ತುಕ್ರಿ, ಇಸ್ರೋದ ಮಾಜಿ ನಿರ್ದೇಶಕ ಡಾ.ಎಸ್.ವಿ. ಶರ್ಮ ಹಾಗೂ ದಾನಿ ಲಕ್ಷ್ಮೀನಾರಾಯಣನ್ ಅತಿಥಿಗಳಾಗಿ ಭಾಗವಹಿಸುವರು.
ಈ ಹೊತ್ತಗೆಯಲ್ಲಿ ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಚಿನ್ನದ ಹಾಳೆ (ತಗಡು)ಯಲ್ಲಿ ಅಂದವಾಗಿ ಮುದ್ರಿಸಲಾಗಿದೆ. ಭಗವದ್ಗೀತಾ ಪ್ರಚಾರಾರ್ಥವಾಗಿ ಕೃತಿಯನ್ನು ಗೀತಾ ಮಂದಿರದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುವುದು ಎಂದು ಶ್ರೀಮಠದ ಪ್ರಕಟನೆ ತಿಳಿಸಿದೆ.







