ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

ಕುಂದಾಪುರ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಭವಿಷ್ಯದಲ್ಲಿ ಸತ್ಪ್ರಜೆಗಳಾಗಬೇಕು. ಜೀವನದಲ್ಲಿ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ಉದ್ಯೋಗ ಸಿಕ್ಕ ಬಳಿಕ ತಾವು ಕೂಡ ಅಗತ್ಯವುಳ್ಳ ಮಕ್ಕಳ ವಿದ್ಯೆಗೆ ಸಹಕಾರ ನೀಡಬೇಕು ಎಂದು ಕುಂದಾಪುರ ಎಲ್.ಜಿ ಫೌಂಡೇಶನ್ನ ಮ್ಯಾನೇಜಿಂಗ್ ಟ್ರಸ್ಟಿ ನಾಗರಾಜ ಡಿ.ಪಡುಕೋಣೆ ಹೇಳಿದ್ದಾರೆ.
ಜನಶಕ್ತಿ ಸೇವಾ ಟ್ರಸ್ಟ್ ನಾಡ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್, ಪಡುಕೋಣೆ ಘಟಕ ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನಾಡ ವಲಯದ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಾಡ ಗ್ರಾಪಂ ಸಭಾಭವನದಲ್ಲಿ ನಡೆದ 2025ನೇ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಅಧಿಕ ಅಂಕ ಪಡೆದ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಫಿಲಿಪ್ ಡಿಸಿಲ್ವಾ ಮಾತನಾಡಿ, ಪ್ರತಿಭೆ ಎನ್ನುವುದು ಅದ್ಭುತವಾಗಿದ್ದು ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಗಳನ್ನು ಹೊರೆತೆಗೆಯಲು ಸೂಕ್ತ ವೇದಿಕೆ, ಪ್ರೊತ್ಸಾಹ ಅಗತ್ಯ. ನಗರ ಪ್ರದೇಶಗಳಲ್ಲಿ ಪ್ರತಿಭೆ ಅರಳಲು ಸಾಕಷ್ಟು ಅವಕಾಶಗಳಿವೆ. ಆದರೆ ಗ್ರಾಮೀಣ ಭಾಗದಲ್ಲಿ ಬೆಳೆಯುವ ಚೇತನಗಳಿಗೆ ಗುರುತಿಸುವ ಕಾರ್ಯವಾಗಬೇಕು ಎಂದರು.
ಇದೇ ಸಂದರ್ಭ ನಾಗಾರಾಜ್ ಡಿ.ಪಡುಕೋಣೆ ಅವರನ್ನು ಸನ್ಮಾನಿಸ ಲಾಯಿತು. ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90 ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನಾಡ ವಲಯಾಧ್ಯಕ್ಷೆ ಮನೋರಮ ಭಂಡಾರಿ, ಕಾರ್ಯದರ್ಶಿ ಶೋಭಾ ಕೆರೆಮನೆ, ರಾಜ್ಯ ಮುಖಂಡರಾದ ಶೀಲಾವತಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಪಡುಕೋಣೆ ಘಟಕಾಧ್ಯಕ್ಷ ನಾಗರಾಜ ಕುರು, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗಾರಾಜ ರಾಯಪ್ಪನಮಠ ಮೊದಲಾದವರು ಉಪಸ್ಥಿತರಿದ್ದರು.
ಜನಶಕ್ತಿ ಸೇವಾ ಟ್ರಸ್ಟ್ ನಾಡದ ಕಾರ್ಯದರ್ಶಿ ರಾಜೀವ ಪಡುಕೋಣೆ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಡಿವೈಎಫ್ಐ ಪಡುಕೋಣೆಯ ಕಾರ್ಯದರ್ಶಿ ರಾಜೇಶ್ ಪಡುಕೋಣೆ ಸ್ವಾಗತಿಸಿದರು. ಪತ್ರಕರ್ತ ಸುಬ್ರಮಣ್ಯ ಪಡುಕೋಣೆ ನಿರೂಪಿಸಿ, ನಾಗರಾಜ ಕುರು ವಂದಿಸಿದರು.







