ಶತಮಾನದ ಶ್ರೇಷ್ಠಕಲಾವಿದ ಕೆ.ಬಾಬು ರೈ: ಶ್ರೀ ಸಚ್ಚಿದಾನಂದಭಾರತಿ

ಕೆ.ಬಾಬು ರೈ
ಉಡುಪಿ, ಆ.16: ಉಡುಪಿಯ ಯಕ್ಷಗಾನ ಕಲಾರಂಗವು ಪ್ರತೀ ವರ್ಷ ಕಲಾ ವಿದ್ವಾಂಸರಿಗೆ ನೀಡುವ 40,000 ರೂ. ನಿಧಿಯನ್ನೊಳಗೊಂಡ ‘ತಲ್ಲೂರು ಕನಕಾ- ಅಣ್ಣಯ್ಯ ಶೆಟ್ಟಿ ಸಂಸ್ಮರಣ’ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಹಿರಿಯ ಮೃದಂಗ ವಾದಕ ವಿದ್ವಾನ್ ಕೆ.ಬಾಬು ರೈ ಅವರಿಗೆ ಆ.15ರಂದು ಎಡನೀರು ಮಠದಲ್ಲಿ ಕೆ.ಬಾಬು ರೈ ಅವರ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿ ತಮ್ಮ ಅನುಗ್ರಹ ಸಂದೇಶದಲ್ಲಿ ಬಾಬು ರೈಗಳು ಶತಾಯುಷಿ ಕಲಾವಿದರಷ್ಟೇ ಅಲ್ಲ, ಶತಮಾನದ ಶ್ರೇಷ್ಠ ಕಲಾವಿದರು. ಅವರ ವಿನಯ ಗುಣ, ಸರಳತೆ, ಜೀವನೋತ್ಸಾಹ ಕಿರಿಯರಿಗೆ ಮಾದರಿಯಾಗಿದೆ ಎಂದರು.
ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಗಿರಿಜಾ ಶಿವರಾಮ ಶೆಟ್ಟಿ, ಪ್ರದೀಪ ಕುಮಾರ್ ಕಲ್ಕೂರ, ಕೆ.ಬಾಬು ರೈ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ರಾಮಪ್ರಸಾದ ಕಾಸರಗೋಡು, ಕಾರ್ಯದರ್ಶಿ ಶಿವರಾಮ ಕಾಸರಗೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಮೀಜೀ ಅವರಿಗೆ ಫಲವಸ್ತು ಸಮರ್ಪಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದನೆಯ ಮಾತುಗಳನ್ನಾಡಿದರು.
ಸಂಸ್ಥೆಯ ದಾನಿಗಳಾದ ಡಾ.ಜೆ. ಎನ್.ಭಟ್, ಯು.ಎಸ್.ರಾಜಗೋಪಾಲ ಆಚಾರ್ಯ ಹಾಗೂ ಉಪಾಧ್ಯಕ್ಷ ಎಸ್.ವಿ.ಭಟ್, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ ಮತ್ತು ಸದಸ್ಯರಾದ ಎಂ. ಎಲ್. ಸಾಮಗ, ಪ್ರತಿಭಾ ಎಂ.ಎಲ್. ಸಾಮಗ, ವಿದ್ಯಾಪ್ರಸಾದ್, ರಾಜೀವಿ, ಸುದರ್ಶನ್ ಬಾಯರಿ ಉಪಸ್ಥಿತರಿದ್ದರು.







