ರಾಮ ಮಂದಿರದಲ್ಲಿ ಘೋರ ಅಪಚಾರ ನಡೆಯಬಾರದಿತ್ತು: ಪೇಜಾವರ ಶ್ರೀ

ಉಡುಪಿ, ಜೂ.27: ದೇಶ ವಿದೇಶದ ಸಮಸ್ತ ಶ್ರದ್ದಾಳುಗಳ ಕೇಂದ್ರವಾಗಿ ರುವ ರಾಮ ಮಂದಿರದಲ್ಲಿ ಅವ್ಯವಹಾರ ದಂತಹ ಘೋರ ಅಪಚಾರ ನಡೆಯಬಾರದಿತ್ತು. ನಡೆದದ್ದು ಸತ್ಯವಾದರೆ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ರಾಜ್ಯ ಸರಕಾರದ ಮೇಲೆ ವಿಶ್ವಾಸ ಇದೆ. ಸರಿಯಾಗಿ ತನಿಖೆ ನಡೆಯುವ ವಿಶ್ವಾಸ ಇದೆ. ಆ ಮೂಲಕ ಸತ್ಯಾಸತ್ಯತೆ ಶೀಘ್ರವಾಗಿ ಹೊರಬರಬೇಕು ಎಂದು ರಾಮಮಂದಿರ ವಿಶ್ವಸ್ಥಮಂಡಳಿ ಟ್ರಸ್ಟ್ ಸದಸ್ಯರಾದ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್ಐಟಿ ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ನಾನು ಹೋದಾಗಲೆಲ್ಲ ಕೆಲವು ಸಲಹೆ ನೀಡುತ್ತಿದ್ದೇನೆ. ಸಭೆಗಳಲ್ಲೂ ಕೂಡ ಪ್ರಸ್ತಾಪ ಮಾಡುತ್ತಿರುತ್ತೇನೆ. ಎಲ್ಲವನ್ನು ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದರು. ನಾನು ಅಲ್ಲೇ ನಿಲ್ಲಲು ಸಾಧ್ಯವಿಲ್ಲ ಹೋದಾಗ ಪರಿಶೀಲಿಸಿ ಸಲಹೆ ನೀಡಿ ಬರುತ್ತಿದ್ದೇನೆ. ನಾನು ವಿಶ್ವಸ್ಥ ಮಂಡಳಿ ಸದಸ್ಯನಾಗಿ ಅವರ ಮೇಲೆ ವಿಶ್ವಾಸ ಇಟ್ಟು ಸಲಹೆ ಕೊಡುತ್ತ ಬರುತ್ತಿದ್ದೇನೆ. ವಿಶ್ವಸ್ಥ ಮಂಡಳಿ ಆಗಿರುವುದರಿಂದ ಸಂಬಂಧಪಟ್ಟವರು ವಿಶ್ವಾಸಾರ್ಹ ವ್ಯಕ್ತಿಗಳಾಗಿರಬೇಕಿತ್ತು ಎಂದು ಅವರು ತಿಳಿಸಿದರು.
200 ಕೆ.ಜಿ ಬೆಳ್ಳಿ ನೀಡಿದರೂ ರಶೀದಿ ನೀಡಿಲ್ಲ ಎಂಬ ಸಿಂಧಿ ಸಮುದಾಯದ ಗಂಭೀರ ಆರೋಪಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ, ದೊಡ್ಡ ಮಟ್ಟದ ದೇಣಿಗೆ ನೀಡಿದವರು, ಅಲ್ಲಿಯೇ ರಶೀದಿ ತೆಗೆದುಕೊಳ್ಳಬೇಕು. ದೇಣಿಗೆ ನೀಡುವವರು ಮತ್ತು ಪಡೆದವರು ಇಬ್ಬರಿಗೂ ಆ ಬಗ್ಗೆ ಜವಾಬ್ದಾರಿ ಇದೆ. ದೇಣಿಗೆ ತೆಗೆದುಕೊಂಡವರಿಗೆ ದೊಡ್ಡ ಜವಾಬ್ದಾರಿ ಇದೆ. ರಶೀದಿ ಕೊಟ್ಟಿಲ್ಲವಾದರೆ ಅದು ದೊಡ್ಡ ತಪ್ಪು. ಕೇವಲ ಬಾಯಿ ಮಾತಿನ ಹೇಳಿಕೆಗಳಾಗಿ ಉಳಿಯಬಾರದು. ಅವರು ಆರೋಪ ಮಾಡಿದ್ದರೆ ವಾಸ್ತವ ಇರಬಹುದು. ಆದರೆ ರಶೀದಿ ಕೊಟ್ಟಿಲ್ಲ ಎಂಬ ಮಾತು ನಂಬಲು ಆಗಲ್ಲ ಎಂದು ತಿಳಿಸಿದರು.
ಚಂಪತ್ ರಾಯ್ ರಾಜೀನಾಮೆ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ವಾಟ್ಸಾಪ್ ಗ್ರೂಪಿನಲ್ಲಿ ಅವರು ಯಾವುದೇ ಆ ರೀತಿಯ ಸಂದೇಶ ಕಳುಹಿಸಿಲ್ಲ. ಟ್ರಸ್ಟನ ವಾಟ್ಸಾಪ್ ಗ್ರೂಪಿನಲ್ಲಿ ಕೂಡ ಮಾಹಿತಿ ಬಂದಿಲ್ಲ. ಅವರ ನಂಬರ್ನಿಂದಲೂ ನನಗೆ ನೇರವಾಗಿ ಸಂದೇಶ ಬಂದಿಲ್ಲ. ಈ ರೀತಿಯ ವಿಷಯಗಳಿದ್ದಾಗ ಅವರು ಮೆಸೇಜ್ ಮಾಡುತ್ತಿದ್ದರು. ಅಲ್ಲಿ ಏನು ಬೆಳವಣಿಗೆ ಆಗಿದೆ ಎಂಬುದು ನನಗೆ ಗೊತ್ತಿಲ್ಲ ಎಂದರು.
ಆರೆಸೆಸ್ ನೊಂದಾಣಿ ಬಗ್ಗೆ ಸ್ವಾಮೀಜಿ ಪ್ರಕ್ರಿಯೆ
ಆರ್ಎಸ್ಎಸ್ ನೊಂದಣಿ ಪ್ರಿಯಾಂಕ ಖರ್ಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸಂಘಟನೆ ಯನ್ನು ನೋಂದಣಿ ಮಾಡಿದರೆ ಯಾರಿಗೂ ಆ ಬಗ್ಗೆ ಮಾತನಾಡಲು ಅವಕಾಶ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ನಾವು ಮಂದಿರಕ್ಕೆ ಹಣ ಹಾಕುವುದರ ಬದಲು ಬಡವರಿಗೆ ಮನೆ ಕಟ್ಟಿಸಿ ಕೊಡಿ ಎಂದು ಕರೆ ನೀಡಿದ್ದೆವು. ರಾಮ ದೇವರ ಸೇವೆಯನ್ನು ಬಡವರಿಗೆ ಮನೆ ಕಟ್ಟಿ ಮಾಡಿಕೊಡಬಹುದು. ಅವಕಾಶ ವಂಚಿತರಿಗೆ ದೀನ ದಲಿತರಿಗೆ ಮನೆ ಕಟ್ಟಿಸಿ ಕೊಡಬಹುದು. ನಮ್ಮ ಉದ್ಯೋಗದ ಜೊತೆ ಸಮಾಜ ಸೇವೆ ಮಾಡಲು ಅನೇಕ ಅವಕಾಶಗಳಿವೆ ಆ ಮೂಲಕ ರಾಮಸೇವೆ ಮಾಡಬಹುದು ಎಂದು ಅವರು ಹೇಳಿದರು.
ಒಳ್ಳೆಯ ಕೆಲಸ ಮಾಡಿ ದೇವರಿಗೆ ಸಮರ್ಪಿಸಬಹುದು. ದುಃಖಿತರಿಗೆ ಸಹಾಯ ಮಾಡುವುದೇ ನಿಜವಾದ ರಾಮ ಸೇವೆ. ಉಡುಪಿಯ ಪರಿಸರದಲ್ಲಿ ಈ ರಾಮ ಸೇವೆ ಆಗುತ್ತಿದೆ. ನೂರು ಕೆಜಿ ಬೆಳ್ಳಿ ಕೊಡುವುದರ ಬದಲು 1000 ಮನೆ ನಿರ್ಮಾಣ ಮಾಡುವ ಮೂಲಕ ರಾಮ ದೇವರ ಸೇವೆ ಮಾಡಬಹುದಿತ್ತು ಎಂದರು.






