ನೇಜಾರು ತಾಯಿ, ಮೂವರು ಮಕ್ಕಳ ಹತ್ಯೆಗೆ ಎರಡು ವರ್ಷ; ನ್ಯಾಯದ ನಿರೀಕ್ಷೆಯಲ್ಲಿ ಕುಟುಂಬ

ಉಡುಪಿ, ನ.11: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ಎಂಬಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆ ಪ್ರಕರಣ ನಡೆದು ಇಂದಿಗೆ(ನ.12) ಎರಡು ವರ್ಷ ತುಂಬಿದೆ. ಈ ಪ್ರಕರಣ ಇದೀಗ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಮೃತರ ಕುಟುಂಬ ನ್ಯಾಯದ ನಿರೀಕ್ಷೆಯಲ್ಲಿ ದಿನ ದೂಡುತ್ತಿದೆ.
2023ರ ನ.12ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನ ತೃಪ್ತಿ ಲೇಔಟ್ನಲ್ಲಿ ನಡೆದ ಹಾಡುಹಗಲೇ ನಡೆದ ಆ ಬೀಭತ್ಸ ದುಷ್ಕೃತ್ಯ ಇನ್ನೂ ಜನರ ಮನಸ್ಸಿಂದ ಮಾಸಿಲ್ಲ. ಈ ಪ್ರಕರಣ ಇಡೀ ರಾಜ್ಯವೇ ಬೆಚ್ಚಿ ಬೀಳಿಸಿತ್ತು. ಕೊಲೆಗಡುಕನ ವಿಕೃತ ಮನಸ್ಸಿಗೆ ಅಂದು ಒಂದೇ ಕುಟುಂಬ ನಾಲ್ವರು ಹೆಣವಾಗಿದ್ದರು.
ಪ್ರಸ್ತುತ ಈ ಪ್ರಕರಣ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಪ್ರಕರಣದ ವಿಚಾರಣೆ ಶೀಘ್ರವೇ ಪೂರ್ಣಗೊಂಡು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಕೊಲೆ ಪ್ರಕರಣದ ಹಿನ್ನೆಲೆ :
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಏಕ್ಸ್ಪ್ರೆಸ್ ಸಂಸ್ಥೆಯಲ್ಲಿ ಗಗನಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೇಜಾರಿನ ನೂರ್ ಮುಹಮ್ಮದ್ ಅವರ ಪುತ್ರಿ ಐನಾಝ್(21)ಳ ಮೇಲಿನ ಅತೀಯಾದ ವ್ಯಾಮೋಹದಿಂದ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರ ಸಾಂಗ್ಲಿ ಮೂಲದ ಪ್ರವೀಣ್ ಪ್ರದೀಪ್ ಚೌಗುಲೆ(40) ನ.12ರಂದು ಕೊಲೆಗೆ ಯೋಜನೆ ರೂಪಿಸಿದ್ದನು.
ಅದೇ ರೀತಿ ಯಾವುದೇ ಸುಳಿವು ಲಭಿಸದಂತೆ ತನ್ನ ಕಾರನ್ನು ಹೆಜಮಾಡಿ ಟೋಲ್ಗೆ ಮೊದಲೇ ನಿಲ್ಲಿಸಿ, ಅಟೋ, ಬಸ್, ಬೈಕ್ಗಳ ಮೂಲಕ ನೇಜಾರು ತಲುಪಿದ್ದನು. ಅಲ್ಲಿ ಬೆಳಗ್ಗೆ 9ಗಂಟೆ ಸುಮಾರಿಗೆ ಐನಾಝ್ ಮನೆಯೊಳಗೆ ಹೋದ ಪ್ರವೀಣ್, ಐನಾಝ್ ಮತ್ತು ತಡೆಯಲು ಬಂದ ಆಕೆಯ ತಾಯಿ ಹಸೀನಾ(48), ಅಕ್ಕ ಅಫ್ನಾನ್(23) ಹಾಗೂ ತಮ್ಮ ಆಸೀಮ್(13)ನನ್ನು ಬರ್ಬರವಾಗಿ ಚೂರಿಯಿಂದ ಕೊಲೆಗೈದು ಪರಾರಿಯಾಗಿದ್ದನು.
ಮನೆಯಲ್ಲಿದ್ದ ಹಸೀನಾರ ಅತ್ತೆ ಹಾಜಿರಾ(80) ಚೂರಿ ಇರಿತಕ್ಕೆ ಒಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ.14ರಂದು ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದರು.
ಸಾಕ್ಷಿಗಳ ವಿಚಾರಣೆ ಆರಂಭ :
ಪ್ರಕರಣದ ತನಿಖೆ ನಡೆಸಿದ ಪೊಲೀಸರು 2024ರ ಫೆ.12ರಂದು ಪ್ರಕರಣ ಮೊದಲ ಹಂತ ಮತ್ತು ಮುಂದೆ ಎರಡನೇ ಹಂತದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಒಟ್ಟು 15 ಸಂಪುಟಗಳಲ್ಲಿ 2,202 ಪುಟಗಳ ದೋಷಾರೋಪಣಾಪಟ್ಟಿ ಸಲ್ಲಿಸಿದ್ದು, ಒಟ್ಟು 244 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು.
ಇದೀಗ ಎಲ್ಲ ಹಂತಗಳು ಮುಗಿದು, ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಪ್ರಕರಣದ ದೂರುದಾರೆ ಐಫಾ, ಆಕೆಯ ತಾಯಿ ಶಾಹಿನ್ ಬೀಬಿ ಮತ್ತು ಆಟೋ ರಿಕ್ಷಾ ಚಾಲಕ ಶ್ಯಾಮ್ ಅವರ ಮುಖ್ಯ ವಿಚಾರಣೆ ಹಾಗೂ ಪಾಟಿ ಸವಾಲು ಪೂರ್ಣಗೊಂಡಿದ್ದು. ಹೀಗೆ ಒಟ್ಟು ಐದು ಸಾಕ್ಷಿಗಳ ವಿಚಾರಣೆ ಮುಗಿದಿದೆ.
ನ.14 ಮತ್ತು ನ.15ರಂದು ಎರಡು ದಿನ ಒಟ್ಟು ಎಂಟು ಮಂದಿಯ ವಿಚಾರಣೆಗೆ ದಿನ ನಿಗದಿ ಪಡಿಸಲಾಗಿದ್ದು, ನ.15ರಂದು ಮೃತರ ಕುಟುಂಬದ ಯಜಮಾನ ನೂರ್ ಮುಹಮ್ಮದ್ ಹಾಗೂ ಅವರ ಮಗ ಸಾಕ್ಷ್ಯ ನುಡಿಯಲಿದ್ದಾರೆ. ಆರಂಭದಲ್ಲಿ ಆರೋಪಿ ಹೈಕೋರ್ಟ್ ತಡೆಯಾಜ್ಞೆ ತಂದಿರುವುದರಿಂದ ಮತ್ತು ವಕೀಲರ ಬದಲಾವಣೆಯಿಂದ ವಿಚಾರಣೆ ವಿಳಂಬವಾಗಿತ್ತು. ಇದೀಗ ಎಲ್ಲವೂ ಸರಾಗವಾಗಿ ನಡೆಯುತ್ತಿದೆ ಎಂದು ವಿಶೇಷ ಸರಕಾರಿ ಅಭಿಯೋಜಕರಾಗಿ ಶಿವಪ್ರಸಾದ್ ಆಳ್ವ ತಿಳಿಸಿದ್ದಾರೆ.
‘ನಮ್ಮ ಕುಟುಂಬ ಕಳೆದುಕೊಂಡ ಅಮಾಯಕ ನಾಲ್ಕು ಜೀವಗಳಿಗೆ ಬೆಲೆ ಬರಬೇಕಾದರೆ ಈ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ಮುಂದೆ ಎಲ್ಲೂ ಇಂತಹ ಕೃತ್ಯ ನಡೆಯಬಾರದು. ನ್ಯಾಯಾಲಯದ ಮೇಲೆ ನಾವು ವಿಶ್ವಾಸ ಇಟ್ಟಿದ್ದೇವೆ. ನ.15ರಂದು ನನಗೆ ಮತ್ತು ನನ್ನ ಮಗನಿಗೆ ಸಾಕ್ಷ್ಯ ನುಡಿಯಲು ಅವಕಾಶ ಕಲ್ಪಿಸಲಾಗಿದೆ’
-ನೂರ್ ಮುಹಮ್ಮದ್, ಸಂತ್ರಸ್ತ ಕುಟುಂಬದ ಯಜಮಾನ







