ಉಡುಪಿ | ನಾಗರಿಕ ಸಮಾಜದ ಸಂಪರ್ಕವಿಲ್ಲದೆ ಬದುಕುತ್ತಿದ್ದ ಒಂದೇ ಮನೆಯ ಮೂವರ ರಕ್ಷಣೆ

ಉಡುಪಿ, ಡಿ.9: ನಾಗರಿಕ ಸಮಾಜದ ಸಂಪರ್ಕವಿಲ್ಲದೆ, ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ ಮೂವರನ್ನು ರಕ್ಷಿಸಿರುವ ಘಟನೆ ಶಿರ್ವ ಪೋಲಿಸ್ ಠಾಣೆಯ ವ್ಯಾಪ್ತಿಯ ಮೂಡುಬೆಳ್ಳೆ ಎಂಬಲ್ಲಿ ನಡೆದಿದೆ.
ಅಂದಾಜು ಎಪ್ಪತ್ತು ವರ್ಷ ಆಸುಪಾಸಿನ ಎಡ್ವಿನ್ ಅಮ್ಮನ್ನ, ಅವರ ಪತ್ನಿ ಜ್ಯೋತಿ ಅಮ್ಮನ್ನ ಹಾಗೂ ಮಗಳು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇವರು ಕಳೆದ ಹಲವು ವರ್ಷಗಳಿಂದ ನಾಗರಿಕ ಸಮಾಜದ ಸಂಪರ್ಕ ಇಲ್ಲದೆ ಮನೆಯೊಳಗೆ ಬದುಕು ನಡೆಸುತ್ತಿದ್ದರು.
ಈ ಬಗ್ಗೆ ಬಂದ ಮಾಹಿತಿಯಂತೆ ಜಿಲ್ಲಾ ನಾಗರೀಕ ಸಮಿತಿಯ ನೇತೃತ್ವದಲ್ಲಿ ಈ ಮೂವರನ್ನು ರಕ್ಷಿಸಿ ಕಾರ್ಕಳದ ಹೊಸಬೆಳಕು ಆಶ್ರಮಕ್ಕೆ ದಾಖಲಿಸಲಾಗಿದೆ. ಆಪ್ತ ಸಮಾಲೋಚನೆ ನಡೆಸಿದಾಗ ವೃದ್ಧರು ಮನೆಯಲ್ಲಿ ಚಿನ್ನಾಭರಣಗಳು ಇರುವುದಾಗಿ ಹೇಳಿಕೊಂಡಿದ್ದರು. ಇಲಾಖೆಯ ಸಮಕ್ಷಮದಲ್ಲಿ ಹುಡುಕಾಟ ನಡೆಸಿ ಚಿನ್ನಾಭರಣಗಳನ್ನು ಅವರ ವಶಕ್ಕೆ ನೀಡಲಾಗಿದೆ.
ಈ ಕಾರ್ಯಚರಣೆಯಲ್ಲಿ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಗ್ರಾಪಂ ಅಧ್ಯಕ್ಷೆ ದಿವ್ಯ ವಿ.ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಮೂಡುಬೆಳ್ಳೆ, ವಿನ್ಸೆಂಟ್ ಫೆರ್ನಾಂಡಿಸ್, ಎಸ್ಸೈ ಮಂಜುನಾಥ್, 112 ಸಹಾಯವಾಣಿ ಕೇಂದ್ರದ ಎಎಸ್ಸೈ ಗಂಗಾಧರ, ಹೊಸಬೆಳಕು ಆಶ್ರಮದ ಮೆಲ್ವೀಚಾರಕ ಗೌರೀಶ್, ರವಿರಾಜ್ ಆಚಾರ್ಯ, ಮೂಡುಬೆಳ್ಳೆ, ಸುಧಾಕರ್ ಪೂಜಾರಿ, ಧನಲಕ್ಷ್ಮಿ ಪೂಜಾರಿ ಮೂಡುಬೆಳ್ಳೆ, ವಿಜಯಪ್ರಕಾಶ್ ಮೂಡುಬೆಳ್ಳೆ, ಪ್ರಕಾಶ್ ಮೂಡುಬೆಳ್ಳೆ ಭಾಗವಹಿಸಿದ್ದರು.





