ಉಡುಪಿ: ಸಂಜೀವಿನಿ ಮಹಿಳೆಯರೇ ತಯಾರಿಸಿದ ‘ದೀಪಾವಳಿ ಗಿಫ್ಟ್ ಪ್ಯಾಕ್’
ಸಾವಯವ ‘ಸಂಜೀವಿನಿ ಕಜೆಅಕ್ಕಿ’, ‘ದೀಪ ಸಂಜೀವಿನಿ’ ಹಣತೆ ಮಾರುಕಟ್ಟೆಗೆ

ಉಡುಪಿ, ನ.8: ಜಿಲ್ಲೆಯ ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ವಿವಿಧ ಉತ್ಪನ್ನಗಳನ್ನು ಒಟ್ಟುಗೂಡಿಸಿ ತಯಾರಿಸಲಾದ ‘ದೀಪಾವಳಿ ಗಿಫ್ಟ್ ಪ್ಯಾಕ್’ ಮತ್ತು ಹಡಿಲು ಭೂಮಿಯಲ್ಲಿ ಸಂಜೀವಿನಿ ಮಹಿಳೆಯರೇ ಸೇರಿ ಮಾಡಿರುವ ಭತ್ತದ ಕೃಷಿಯ ‘ಸಂಜೀವಿನಿ ಕಜೆ ಅಕ್ಕಿ’ ಹಾಗೂ ಮಣ್ಣಿನ ಹಣತೆ ‘ದೀಪ ಸಂಜೀವಿನಿ’ಯನ್ನು ಇಂದು ಮಾರುಕಟ್ಟೆಗೆ ಬಿಡುಗಡೆ ಗೊಳಿಸಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ, ಉಡುಪಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್, ಚೇರ್ಕಾಡಿ ಸಂಜೀವಿನಿ ಸ್ವಸಹಾಯ ಗುಂಪು ಇವುಗಳ ಸಹಯೋಗದೊಂದಿಗೆ ಉಡುಪಿ ತಾಪಂ ಕಟ್ಟಡದಲ್ಲಿರುವ ಸಂಜೀವಿನಿ ಮಾರಾಟ ಮಳಿಗೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಈ ಉತ್ಪನ್ನಗಳನ್ನು ಅನಾರವಣಗೊಳಿಸಿದರು.
‘ಕಳೆದ ಮುಂಗಾರು ಆರಂಭದಲ್ಲಿ ಜಿಪಂ, ತಾಪಂ, ಗ್ರಾಪಂಗಳು, ಸಂಜೀವಿನಿ ಒಕ್ಕೂಟಗಳ ನಿರಂತರ ಸಭೆ ನಡೆಸಿ ಜಿಲ್ಲೆಯಲ್ಲಿ 1,034 ಎಕರೆ ಹಡಿಲು ಭೂಮಿಯನ್ನು ಗುರುತಿಸಲಾಗಿತ್ತು. ಪ್ರತೀ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 10 ಎಕರೆಯಂತೆ ಒಟ್ಟು 412 ಸ್ವಸಹಾಯ ಗುಂಪುಗಳು 1,000 ಎಕರೆ ಕೃಷಿ ಭೂಮಿಯಲ್ಲಿ ಭತ್ತದ ಕೃಷಿ ಮಾಡಿದರು. ಸುಮಾರು 136 ಎಕರೆಯಷ್ಟು ಭೂಮಿಯಲ್ಲಿ ಬೆಳೆದ ಭತ್ತವನ್ನು ಸಂಜೀವಿನಿ ಕಜೆ ಅಕ್ಕಿ ಹೆಸರಿನ ಬ್ರಾಂಡಿನಲ್ಲಿ ಬಿಡುಗಡೆ ಮಾಡಲಾಗಿದೆ. ಕೆ.ಜಿ.ಗೆ 55 ರೂ.ನಂತೆ ಬೆಲೆ ನಿಗದಿಪಡಿಸಲಾಗಿದ್ದು, ಆರಂಭಿಕವಾಗಿ ಶೇ.10ರಷ್ಟು ರಿಯಾಯಿತಿ ಕೂಡ ನೀಡಲಾಗುತ್ತಿದೆ’ ಎಂದು ಜಿಪಂ ಸಿಇಒ ಪ್ರಸನ್ನ ಎಚ್. ತಿಳಿಸಿದರು.
‘ಸ್ವಸಹಾಯ ಗುಂಪಿನ ಮಹಿಳೆಯರು ತಮ್ಮ ಕೈಚಳಕದಿಂದ ವಿವಿಧ ವಿನ್ಯಾಸದ ಮಣ್ಣಿನ ಹಣತೆಗಳನ್ನು ತಯಾರಿಸಿದ್ದು, ದೀಪ ಸಂಜೀವಿನಿ ಎಂಬ ಹೆಸರಿನಲ್ಲಿ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇವುಗಳನ್ನು ತಾಲೂಕು ಕೇಂದ್ರಗಳಲ್ಲಿ ಹಾಗೂ ಹೋಬಳಿ ಮಟ್ಟದಲ್ಲೂ ಪ್ರಾರಂಭಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.
ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಉಡುಪಿ ಜಿಪಂ ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಯೋಜನಾ ನಿರ್ದೇಶಕ ಪ್ರಶಾಂತ್ ರಾವ್, ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ನಾಯ್ಕಾ, ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯ ಮುಖ್ಯ ಅತಿಥಿಗಳಾಗಿದ್ದರು.
ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ಉಡುಪಿ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವ, ಚೇರ್ಕಾಡಿ, ವಾರಂಬಳ್ಳಿ, ಉದ್ಯಾವರ, ಅಮಾಸೆಬೈಲು, ಹೇರೂರು ಸಂಜೀವಿನಿ ಒಕ್ಕೂಟದವರು ಉಪಸ್ಥಿತರಿದ್ದರು.
ಅಭಿಯಾನದ ಕಾರ್ಯಕ್ರಮ ವ್ಯವಸ್ಥಾಪಕಿ ನವ್ಯಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
‘ಜಿಲ್ಲೆಯ ಜನತೆ ದೀಪಾವಳಿ ಖರೀದಿ ಸಂದರ್ಭದಲ್ಲಿ ಸಂಜೀವಿನಿ ಮಹಿಳೆಯರು ತಯಾರಿಸಿದ ಗಿಫ್ಟ್ ಪ್ಯಾಕ್ ಖರೀದಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು. ಯಾವುದೇ ರಾಸಾಯನಿಕ ಬಳಕೆ ಮಾಡಿರುವ ಸಾವಯವ ಕಜೆ ಅಕ್ಕಿ ಬಳಬೇಕು. ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯಲ್ಲೂ ಹಾನಿ ಇಲ್ಲ. ಅದೇರೀತಿ ಇವರ ಜೇನುತುಪ್ಪದಲ್ಲೂ ಯಾವುದೇ ಕಳಬೆರಕೆ ಇಲ್ಲ. ನಮ್ಮ ಜಿಲ್ಲೆಯ ಸಂಜೀವಿನಿ ಮಹಿಳೆಗೆ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ’
-ಡಾ.ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ
‘ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಡುಗೊರೆ ಕೊಡುವ ಸಂಪ್ರದಾಯ ಇದೆ. ಆದುದರಿಂದ ಜಿಲ್ಲೆಯ ಜನತೆ ಸಂಜೀವಿ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನೇ ಖರೀದಿಸುವ ಮೂಲಕ ಪ್ರೋತ್ಸಾಹ ನೀಡಬೇಕು. ಇಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೇ ತಾವು ನೀಡಿದ ಹಣ ನೇರವಾಗಿ ಸಂಜೀವಿನಿ ಸದ್ಯಸರಿಗೆ ತಲುಪಿ ಲಾಭವಾಗುತ್ತದೆ’
-ಪ್ರಸನ್ನ ಎಚ್., ಸಿಇಓ, ಜಿಪಂ
ಉಡುಗೊರೆಯಲ್ಲಿ ಏನಿದೆ?
ಕೊರಗ ಸಮುದಾಯದವರು ತಯಾರಿಸಿದ ಕಲಾ ಕೌಶಲ್ಯದ ಬುಟ್ಟಿಯಲ್ಲಿ ಈ ಗಿಫ್ಟ್ ಪ್ಯಾಕ್ ಮಾಡಲಾಗಿದ್ದು, 500 ರೂ.ನಿಂದ 2,500 ರೂ.ವರೆಗೆ ವಿವಿಧ ಮಾದರಿಯ ಗಿಫ್ಟ್ ಪ್ಯಾಕ್ಗಳನ್ನು ಸಿದ್ಧಪಡಿಸಲಾಗಿದೆ. ಹೆಬ್ರಿಯ ಕಲ್ಪವೃಕ್ಷ ಸಂಜೀವಿನಿ ಗುಂಪಿನವರು ತಯಾರಿಸಿದ ಶುದ್ಧ ಜೇನು ‘ಹೆಬ್ರಿ ಹನಿ’, ಚೇರ್ಕಾಡಿಯ ಸಮೃದ್ಧಿ ಸಂಜೀವಿನಿ ಗುಂಪಿನಿಂದ ಮನೆಯಲ್ಲಿ ತಯಾರಾದ ಅಪ್ಪೆ ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಮತ್ತು ಮಸಾಲ ಗೇರುಬೀಜ, ಉಡುಪಿಯ ಕಲ್ಪರಸ ತಂಡ ತಯಾರಿಸಿದ ಕಲ್ಪರಸ ಬೆಲ್ಲ, ವಾರಂಬಳ್ಳಿ ಓಂಕಾರ ಸಂಜೀವಿನಿಯವರು ಬೆಲ್ಲ, ಶುಂಠಿ, ತುಪ್ಪ, ಕಾಳುಮೆಣಸಿನ ಪುಡಿಗಳಿಂದ ತಯಾರಿಸಿದ ಅಕ್ರೂಟ್, ಬಡಗ ಬೆಟ್ಟುವಿನ ಶ್ರೀದೇವಿ ಸಂಜೀವಿನಿ ಚಿಕ್ಕಿ ಘಟಕದಿಂದ ತಯಾರಿಸಿದ ಚಿಕ್ಕಿ, ಸಿದ್ಧಾಪುರ ಶ್ರೀದೇವಿ ಸಂಜೀವಿನಿ ಗುಂಪಿನಿಂದ ತಯಾರಿಸಲಾದ ಹೋಮ್ ಮೇಡ್ ಡ್ರೈಫ್ರುಟ್ಸ್ ಚಾಕಲೇಟ್ಗಳು ಈ ಗಿಫ್ಟ್ ಪ್ಯಾಕ್ನಲ್ಲಿವೆ ಎಂದು ಸಿಇಓ ಪ್ರಸನ್ನ ಎಚ್. ಮಾಹಿತಿ ನೀಡಿದರು.







