Udupi | ಮಲ್ಪೆ ಬಂದರು ಭೂಮಿಯ ಅಕ್ರಮ ಗುತ್ತಿಗೆ ರದ್ದತಿಗೆ ಆಗ್ರಹ
ಉಡುಪಿ, ನ.16: ಮಲ್ಪೆ ಕಡಲತೀರದ ಸುಮಾರು ಎಂಟು ಎಕರೆ ಸರಕಾರಿ ಬಂದರು ವ್ಯಾಪ್ತಿಯ ಭೂಮಿಯನ್ನು ಪಾರದರ್ಶಕತೆ ಇಲ್ಲದೆ, ಸಾರ್ವಜನಿಕರ ಅನುಮತಿ ಪಡೆಯದೆ, ಹೊರಗುತ್ತಿಗೆ ನೀಡಲಾಗಿದೆ. ಸರಕಾರಿ ಭೂಮಿಯ ಅಕ್ರಮ ಗುತ್ತಿಗೆ ತಕ್ಷಣ ರದ್ದುಪಡಿಸಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಅರುಣ್ ಕುಂದರ್ ಕಲ್ಗದ್ದೆ ಆಗ್ರಹಿಸಿದ್ದಾರೆ.
ಮಲ್ಪೆ ಬಂದರು ಸರಕಾರಿ ಭೂಮಿಯ ಅಕ್ರಮ ಗುತ್ತಿಗೆ ಈ ಘಟನೆ ಉಡುಪಿ ಜಿಲ್ಲೆಯ ಜನತೆಗೆ ಆಘಾತ ಮತ್ತು ಅಸಮಾಧಾನ ಉಂಟು ಮಾಡಿದೆ. ಸರಕಾರಿ ಆಸ್ತಿ ಜನರ ಆಸ್ತಿ. ಸಾರ್ವಜನಿಕರಿಗೆ ಸೇರಿದ ಬಂದರು ಪ್ರದೇಶವನ್ನು ಖಾಸಗಿ ಸಂಸ್ಥೆ/ಸಂಘಗಳ ಲಾಭಕ್ಕಾಗಿ ವರ್ಗಾವಣೆ ಮಾಡುತ್ತಿರುವುದು ಕಾನೂನುಬಾಹಿರ, ಅಸಂವಿಧಾನಿಕ ಮತ್ತು ಜನಹಿತವಿರೋಧಿ ಕ್ರಮವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸ್ಥಳ ಪರಿಶೀಲನೆ, ಪರಿಸರ ಪ್ರಭಾವ, ಮೀನುಗಾರ ಸಮುದಾಯದ ಅಭಿಪ್ರಾಯ ಪಡೆದುಕೊಳ್ಳದೆ ಈ ಗುತ್ತಿಗೆ ನೀಡಲಾಗಿದೆ. ಮಲ್ಪೆ ಕಡಲ ತೀರದಲ್ಲಿ ನಿರ್ಮಿಸಿದ್ದ ಮಕ್ಕಳ ಆಟದ ಮೈದಾನ, ಭಜನಾ ಕ್ಷೇತ್ರ, ಪ್ರವಾಸೋದ್ಯಮ ಮೂಲಸೌಕರ್ಯಗಳ ಬಳಕೆಗೆ ಸಾರ್ವಜನಿಕರಿಗೆ ಇರುವ ಹಕ್ಕು ಉಲ್ಲಂಘನೆಯಾಗಿದೆ. ಮಲ್ಪೆ ಬಂದರು ಉಡುಪಿ ಜಿಲ್ಲೆಯ ಮೀನುಗಾರಿಕೆ ಆರ್ಥಿಕತೆಗೆ ಕೇಂದ್ರ, ಬಂದರು ಚಟುವಟಿಕೆಗಳಿಗೆ ಮೂಲ ಸೌಕರ್ಯ, ಪ್ರವಾಸೋದ್ಯಮದ ಪ್ರಮುಖ ಕೇಂದ್ರ, ಭಜನಾ-ಸಾಂಸ್ಕೃತಿಕ ಚಟುವಟಿಕೆಗಳ ವಿಕಾಸ ಕ್ಷೇತ್ರ. ಹೀಗಾಗಿ ಈ ಪ್ರದೇಶದ ಭೂಮಿಯನ್ನು ವ್ಯವಹಾರಿಕ ಹಕ್ಕಿಗೆ ಒಳಪಡಿಸುವುದು ಭವಿಷ್ಯದ ಬಂದರು ಮತ್ತು ಮೀನುಗಾರ ಸಮುದಾಯಕ್ಕೆ ಅಪಾಯಕಾರಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಗುತ್ತಿಗೆ ಒಪ್ಪಿಗೆ ಪತ್ರ ತಕ್ಷಣ ರದ್ದುಪಡಿಸಬೇಕು. ವಿಚಾರಣೆಗೆ ನ್ಯಾಯಿಕ/ನಿಜಾನ್ವೇಷಣಾ ಸಮಿತಿ ರಚಿಸಬೇಕು. ಭೂಮಿ ಬಳಕೆ ಕುರಿತು ಸಾರ್ವಜನಿಕ ಗ್ರಾಮಸಭೆ/ಸಾರ್ವಜನಿಕ ವಿಚಾರಣೆ ನಡೆಸಬೇಕು. ಭೂಮಿಯ ಸಮಗ್ರ ಬಳಕೆ ಕುರಿತು ಮೀನುಗಾರರು, ಸ್ಥಳೀಯರು, ಪ್ರವಾಸೋದ್ಯಮ ಸಂಘಟನೆಗಳು, ಪರಿಸರ ತಜ್ಞರು ಹಾಗೂ ಆಡಳಿತ ಸಮಿತಿಗಳ ಸಲಹೆ ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.







