ಗ್ರಾಮಸ್ಥರ ಬದಲು ಮರಳು ಗುತ್ತಿಗೆದಾರರಿಗೆ ಉಡುಪಿ ಜಿಲ್ಲಾಡಳಿತ ರಕ್ಷಣೆ: ಸಂತ್ರಸ್ಥರ ಆಕ್ರೋಶ

ಉಡುಪಿ, ಎ.16: ಪೊಲೀಸರ ಭದ್ರ ಸರ್ಪಗಾವಲಿನಲ್ಲಿ ಕಳೆದ 15 ದಿನಗಳಿಂದ ಬಾರಕೂರು ಸಮೀಪದ ಹೊಸಾಳ ಗ್ರಾಮದ ನಾಗರಮಠದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಹಾಗೂ ಅಕ್ರಮ ಮರಳುಗಾರಿಕೆಯಿಂದ ತಮ್ಮ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಮರಳುಗಾರಿಕೆಯನ್ನು ನಿಲ್ಲಿಸಿ ಸಂತ್ರಸ್ಥರಾಗಿರುವ ಗ್ರಾಮದ 150ಕ್ಕೂ ಅಧಿಕ ಮಂದಿಯನ್ನು ರಕ್ಷಿಸುವಂತೆ ಆಗ್ರಹಿಸಿ ನಾಗರಮಠದ ಕೃಷಿಕರು ಹಾಗೂ ಸಂತ್ರಸ್ಥರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದಿನಿಂದ ಅನಿರ್ಧಿಷ್ಟಾವಧಿಯ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.
ತಮ್ಮ ಬೇಡಿಕೆಯನ್ನು ಈಡೇರಿಸಿ ಅವೈಜ್ಞಾನಿಕವಾಗಿ ಹಾಗೂ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆಯನ್ನು ನಿಲ್ಲಿಸುವಂತೆ ಕಳೆದ ಮೂರು ದಿನಗಳಿಂದ ನಾಗರಮಠದ ಮರಳುಗಾರಿಕಾ ಪ್ರದೇಶದಲ್ಲಿ ಧರಣಿ ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರು ಇದೀಗ ಮಣಿಪಾಲದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬೇಡಿಕೆ ಈಡೇರುವವರೆಗೂ ತಮ್ಮ ಪ್ರತಿಭಟನೆಯನ್ನು ಮುಂದು ವರಿಸುವ ದೃಢ ಸಂಕಲ್ಪದಿಂದ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.
ಬೇಡಿಕೆ ಈಡೇರುವವರೆಗೂ ಪ್ರತಿದಿನ ಕಚೇರಿ ಅವಧಿಯಲ್ಲಿ ಅಂದರೆ ಬೆಳಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ಗ್ರಾಮದ ಕೃಷಿಕರು, ಹೆಂಗಸರು, ಮಕ್ಕಳು ಸೇರಿದಂತೆ ಎಲ್ಲರೂ ಧರಣಿಯಲ್ಲಿ ಕೂರಲಿದ್ದೇವೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಹೋರಾಟಗ ಚಂದ್ರ ಕಾಂಚನ್ ತಿಳಿಸಿದರು.
ಗ್ರಾಮದ ಮಹಿಳೆಯರು ಸೇರಿದಂತೆ ಪ್ರತಿಭಟನಕಾರರು ಜಿಲ್ಲಾಡಳಿತ ಹಾಗೂ ವಿಶೇಷ:ತ ಜಿಲ್ಲಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸು ತಿದ್ದಾರೆ. ಮರಳುಗಾರಿಕೆಯಿಂದ ತೊಂದರೆಗೊಳಗಾದ ಗ್ರಾಮಸ್ಥರಿಗೆ ರಕ್ಷಣೆ ನೀಡಬೇಕಿದ್ದ ಜಿಲ್ಲಾಡಳಿತ, ಮರಳುಗಾರಿಕೆಯ ಗುತ್ತಿಗೆದಾರರ ಹಿತಾಸಕ್ತಿ ಕಾಪಾಡಲು ಕಟಿಬದ್ಧವಾಗಿರುವಂತೆ ವರ್ತಿಸುತಿದ್ದು, ನಾಗರಮಠವೆಂಬ ಪುಟ್ಟ ಗ್ರಾಮದಲ್ಲಿ 100ರಿಂದ 150 ಮಂದಿ ಪೊಲೀಸರ ಭದ್ರಕೋಟೆಯ ನಡುವೆ ಮರಳುಗಾರಿಕೆ ನಡೆಸಲು ಅವಕಾಶ ಮಾಡಿಕೊಟ್ಟಿದೆ ಎಂದು ಧರಣಿ ಕುಳಿತ ಮಹಿಳೆಯರು ಒಕ್ಕೊರಲಿನಿಂದ ದೂರಿದರು.
ಅವೈಜ್ಞಾನಿಕ ಹಾಗೂ ಅಕ್ರಮ ಮರಳುಗಾರಿಕೆಯಿಂದ ನಾವು ನಮ್ಮ ಹಿರಿಯರಿಂದ ಬಂದ ಬದುಕಿನ ಆಧಾರವಾದ ಕೃಷಿಭೂಮಿ ಕಳೆದುಕೊಳ್ಳುವ ಭೀತಿ ಎದುರಿಸುತಿದ್ದು, ಇದನ್ನು ವಿರೋಧಿಸಿದ ತಮ್ಮ ವಿರುದ್ಧ ದಬ್ಬಾಳಿಕೆ ನಡೆಯು ತ್ತಿದೆ. ಹೆಂಗಸರು ಮಕ್ಕಳು ಸೇರಿದಂತೆ ಈಗಾಗಲೇ 25 ಮಂದಿ ಕೃಷಿಕರು, ಗ್ರಾಮಸ್ಥರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನೂ 20-22 ಮಂದಿಯ ವಿರುದ್ಧ ಪ್ರಕರಣ ದಾಖಲಿಸುವ ಬೆದರಿಕೆಯನ್ನು ಗುತ್ತಿಗೆದಾರರ ಬೆಂಬಲಿಗರು ಹಾಕುತಿದ್ದಾರೆ ಎಂದು ಗಿರಿಜಾ ಮರಕಾಲ ಆರೋಪಿಸಿದರು.
ಕಳೆದ ಡಿಸೆಂಬರ್ ತಿಂಗಳಿನಿಂದಲೇ ಮರಳುಗಾರಿಕೆ ನಡೆಸಲು ಸಿದ್ಧತೆ ನಡೆದರೂ, ಗ್ರಾಮಸ್ಥರ ಉಗ್ರ ಪ್ರತಿಭಟನೆ ಯಿಂದ ಅದನ್ನು ನಿಲ್ಲಿಸಲಾಗಿತ್ತು. ಆದರೆ 15 ದಿನಗಳಿಂದ 100-150ಕ್ಕೂ ಅಧಿಕ ಮಂದಿ ಪೊಲೀಸರ ಬೆಂಗಾವಲಿನೊಂದಿಗೆ ಮರಳುಗಾರಿಕೆ ನಡೆಯುತ್ತಿದೆ. ರಾತ್ರಿಯೂ ಗ್ರಾಮದಲ್ಲೇ ಇರುವ ಪೊಲೀಸರು ಮರಳು ಕಾರ್ಮಿಕರಿಗೆ ರಕ್ಷಣೆ ನೀಡುತಿದ್ದಾರೆ. ಸಂತ್ರಸ್ಥರಿಗೆ, ಮಹಿಳೆಯರಿಗೆ, ಬಡವರ ರಕ್ಷಣೆಗಿರುವ ಪೊಲೀಸರು, ಜಿಲ್ಲಾಡಳಿತದ ಆದೇಶದಂತೆ ನಾಗರಮಠದಲ್ಲಿ ದುಡ್ಡಿದ್ದವರ ರಕ್ಷಣೆಗೆ ನಿಂತಿರುವ ವಿಪರ್ಯಾಸವನ್ನು ನೀವು ಇಲ್ಲಿ ಕಾಣಬಹುದು ಎಂದು ಚಂದ್ರ ಕಾಂಚನ್ ಹಾಗೂ ಕೃಷ್ಣ ಬಂಗೇರ ಆಕ್ರೋಶ ಭರಿತರಾಗಿ ತಿಳಿಸಿದರು.
ಮರಳಿನ ದಂಧೆ: ನಾಗರಮಠದಲ್ಲಿ ಗುತ್ತಿಗೆದಾರರು ಹೂಳು ತೆರವು ಮಾಡುವ ಹೆಸರಿನಲ್ಲಿ ಜಿಲ್ಲಾಡಳಿತದ ಬೆಂಬಲದಿಂದ ಮರಳಿನ ದಂಧೆ ಮಾಡುತಿದ್ದಾರೆ. ಒಂದು ಮೀ. ಆಳದ ಮರಳನ್ನು ಮಾತ್ರ ತೆರವು ಮಾಡುವ ಅವಕಾಶ ಪಡೆದ ಇವರು 3ರಿಂದ 4ಮೀ. ಆಳಕ್ಕಿಳಿದು ಮರಳನ್ನು ತೆಗೆಯು ತ್ತಿರುವುದರಿಂದ ಪರಿಸರದ 150ಕ್ಕೂ ಅಧಿಕ ಮನೆಯ ಬಾವಿ ನೀರು ಉಪ್ಪಾಗಿದೆ. ಇದು ಕುಡಿಯಲು ಅಯೋಗ್ಯವಾಗಿದೆ ಎಂದರು.
ಪರಿಸರದ ಐದು ಗ್ರಾಮಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ಹೊಳೆ ಬದಿಯಲ್ಲಿ ಸುಮಾರು 1.50 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಜಲ್ಜೀವನ್ ಮಿಷನ್ ಯೋಜನೆಯ ಕುಡಿಯುವ ಬಾವಿಯ ನೀರು ಸಹ ಉಪ್ಪಾಗಿದ್ದು, ಕುಡಿಯಲು ಅಯೋಗ್ಯವಾಗಿದೆ ಎಂದವರು ವಿವರಿಸಿದರು.
ಸಾಂಪ್ರದಾಯಿಕ ದೋಣಿಯಲ್ಲಿ 30 ಮಂದಿ ಕಾರ್ಮಿಕರ ಮೂಲಕ ಮರಳುಗಾರಿಕೆ ಮಾಡಲು ಅವಕಾಶ ಪಡೆದ ಗುತ್ತಿಗೆದಾರರು, 50ಕ್ಕೂ ಅಧಿಕ ದೊಡ್ಡದೊಡ್ಡ ದೋಣಿಗಳ ಮೂಲಕ ಅಸ್ಸಾಂ ಮತ್ತು ಉತ್ತರಪ್ರದೇಶಗಳಿಂದ ಬಂದ ನೂರಾರು ಕಾರ್ಮಿಕರನ್ನು ಬಳಸಿ ಮರಳುಗಾರಿಕೆ ಮಾಡುತಿದ್ದಾರೆ.
ಕೃಷಿಭೂಮಿಯಲ್ಲೇ 10ಸಾವಿರ ಲೋಡ್ ಮಣ್ಣು ತುಂಬಿ ಹೊಳೆ ಬದಿಯಿಂದ ಮರಳು ಸ್ಟಾಕ್ ಯಾರ್ಡ್ವರೆಗೆ ರಸ್ತೆ ಮಾಡಿದ್ದಾರೆ. ಇದರಿಂದ ಮಳೆಗಾಲದಲ್ಲಿ ಊರಿನ ಕೃಷಿಭೂಮಿಗೆ ಭಾರೀ ಅಪಾಯ ಉಂಟಾಗುವ ಸಾಧ್ಯತೆ ಇದೆ. ಪ್ರತಿದಿನ 100ರಿಂದ 150 ಟಿಪ್ಪರ್ ಲಾರಿಗಳು ನಿಗದಿಗಿಂತ ಅಧಿಕ ಮರಳು ತುಂಬಿ ಅತಿವೇಗದಲ್ಲಿ ಸಂಚರಿಸುತಿದ್ದು, ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಪೇಟೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ದೂರಿದರು.
ನಮ್ಮ ಬೇಡಿಕೆಯನ್ನು ಜಿಲ್ಲಾಡಳಿತ ಒಪ್ಪಿ ಮರಳುಗಾರಿಕೆಯನ್ನು ನಿಲ್ಲಿಸುವ ಖಚಿತ ಆಶ್ವಾಸನೆ ನೀಡುವವರೆಗೆ ನಮ್ಮ ಅನಿರ್ಧಿಷ್ಟಾವಧಿ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಕಾರರು ದೃಢಸಂಕಲ್ಪದಲ್ಲಿ ತಿಳಿಸಿದರು.
ಇಂದಿನ ಪ್ರತಿಭಟನೆಯಲ್ಲಿ ಚಂದ್ರ ಕಾಂಚನ್ ಅಲ್ಲದೇ ಕೃಷ್ಣ ಬಂಗೇರ, ಅಶೋಕ್ ಅಮೀನ್, ಚಂದ್ರ ಕುಂದರ್, ಶ್ರೀನಿವಾಸ, ಆನಂದ ಶೆಟ್ಟಿಗಾರ್, ಜೋಸೆಫ್ ಡಿಸೋಜ, ಮಣಿಕಂಠ, ಅಣ್ಣಪ್ಪ, ಗಿರಿಜ ಮರಕಾಲ, ಆಶಾ ಕುಂದರ್,ಉಷಾ, ವನಜ, ಕೃಷ್ಣಪೂಜಾರಿ ಮುಂತಾ ದವರು ಭಾಗವಹಿಸಿದ್ದರು.
‘ನಮ್ಮ ಮನೆ ಹೊಳೆ ದಂಡೆಯಲ್ಲಿದೆ. ಮನೆಯ ಬಳಿಯೇ ಮರಳು ಸ್ಟಾಕ್ ಯಾರ್ಡ್ ಇದೆ. ಇದರಿಂದ ನಮ್ಮ ಪರಿಸ್ಥಿತಿ ಹೇಳಲು ಸಾಧ್ಯವಿಲ್ಲ. ಮಕ್ಕಳಿಗೆ ಶಾಲೆಗೆ ಹೋಗಲಾಗುತ್ತಿಲ್ಲ. ಯಾವತ್ತೂ ಜನರ ಹಾಗೂ ವಾಹನಗಳ ಸಂಚಾರದಿಂದ ನಮಗೆ ಮನೆಯಲ್ಲಿರಲು ಹೆದರಿಕೆ. ಮನೆಯ ಪರಿಸರದಲ್ಲಿ ಸ್ಟಾಕ್ಯಾರ್ಡ್ಗೆ ಹೇಗೆ ಅನುಮತಿ ನೀಡಿದ್ದಾರೆ. ಇದರೊಂದಿಗೆ ನಮ್ಮ ಮನೆಯ ಬಾವಿಯ ನೀರು ಕುಡಿಯುವಂತಿಲ್ಲ. ದನಕರುಗಳಿಗೂ ಕುಡಿಯಲು ಸಾಧ್ಯವಿಲ್ಲ. ಹೊಳೆದಂಡೆಯಲ್ಲಿರುವ ನಾವು ಟ್ಯಾಂಕರ್ ನೀರನ್ನು ದೈನಂದಿನ ಬಳಕೆಗೆ ತರಬೇಕಿದೆ. ಮರಳುಗಾರಿಕೆಯ ಪರಿಣಾಮದಿಂದ ಹೀಗಾಗಿದೆ.
-ಜಾನೆಟ್, ಕಾವಡಿ ಗ್ರಾಮಸ್ಥೆ.
‘ದೋಣಿಯಲ್ಲಿ 100ರಿಂದ 150 ಮಂದಿ ಮರಳು ತೆಗೆಯಲು ಬರುತ್ತಾರೆ. ದಂಡೆಯ ಸಮೀಪ ಹೊಳೆಯಲ್ಲಿ ಆಳದ ಹೊಂಡ ಮಾಡಿದ್ದಾರೆ. ಇದು ಗೊತ್ತಿಲ್ಲದೇ ಇಬ್ಬರು ಮಹಿಳೆಯರು ಇಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಣಿಕಂಠ ಎಂಬ ಮೂಗನನ್ನು ಊರವರು ರಕ್ಷಿಸಿದ್ದಾರೆ. ನಮ್ಮ ಗದ್ದೆಯಲ್ಲಾ ಹೋಗಿದೆ. ಬಾವಿ ನೀರೆಲ್ಲಾ ಹಾಳಾಗಿದೆ. ಕುಡಿಯಲು ಸಹ ನೀರಿಲ್ಲ. ಲಾರಿಗಳ ಓಡಾಟದಿಂದ ರಸ್ತೆಯಲ್ಲಿ ಹೋಗಲು ಸಾಧ್ಯವಿಲ್ಲ. ಇದನ್ನು ಪ್ರಶ್ನಿಸಿದರೆ ಪೊಲೀಸರು ನಮ್ಮ ಮೇಲೆ ಕೇಸು ಹಾಕಿದ್ದಾರೆ. ಇದರ ವಿರುದ್ಧ ಮೂರು ದಿನ ನಾವು ಊರಲ್ಲಿ ಧರಣಿ ಕುಳಿತಿದ್ದೆವು. ಯಾರೊಬ್ಬರೂ ಬಂದು ಯಾಕೆ ಎಂದು ಕೇಳಿಲ್ಲ. ನಮಗೆಲ್ಲಾ ಹೀಗೆ ತೊಂದರೆ ಕೊಡುವುದಕ್ಕಿಂತ ಒಂದು ಬಾಂಬು ತಂದು ಊರಿನ ಮೇಲೆ ಹಾಕ್ಲಿ. ಎಲ್ಲರೂ ಒಟ್ಟಿಗೆ ಸಾಯ್ತೋ...’
ಗಿರಿಜ, ನಾಗರಮಠ ಗ್ರಾಮಸ್ಥೆ.
‘ನಮಗೆ ಹೊಳೆಬದಿ ಎರಡೂ ಕಡೆ ಕೃಷಿ ಭೂಮಿ ಇದೆ. ಇವರು ಹೀಗೆ ಐದು ವರ್ಷ ಹೊಯ್ಗೆ ತೆಗೆದ್ರೆ ಇರುವ ಜಾಗವೆಲ್ಲಾ ಹೊಳೆಗೆ ಹೋಗುತ್ತೆ. ಇವರು ಇಲ್ಲಿ ಮಾಡಿದ ರಸ್ತೆಯಿಂದ ನಮಗೆ ತುಂಬಾ ತೊಂದರೆಯಾಗಿದೆ. ಶಾಸಕರು, ಸಂಸದರು ಸೇರಿ ಯಾರೂ ನಮಗೆ ಸಹಾಯಕ್ಕೆ ಬರುತ್ತಿಲ್ಲ.
-ಉಷಾ, ಗ್ರಾಮಸ್ಥೆ.






