ಉಡುಪಿ | ಐವರು ಬಾಲ ಪ್ರತಿಭೆಗಳಿಗೆ ʼಪ್ರಮಾ ಪ್ರಶಸ್ತಿʼ ಪ್ರದಾನ

ಉಡುಪಿ, ನ.18: ಡಾ.ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಐವರು ಬಾಲ ಪ್ರತಿಭೆಗಳಿಗೆ ʼಪ್ರಮಾ ಪ್ರಶಸ್ತಿʼಯನ್ನು ಮಣಿಪಾಲದ ಮಣಿಪಾಲ್ ಡಾಟ್ ನೆಟ್ ಸಂಸ್ಥೆಯಲ್ಲಿ ಪ್ರದಾನ ಮಾಡಲಾಯಿತು.
ಶ್ರೀಶ ಭಟ್ ಕನ್ನರ್ಪಡಿ(ವೇದ), ಆದ್ಯ ಯು.(ತಬಲ), ಆಪ್ತ ಚಂದ್ರಮತಿ ಮುಳಿಯ(ವಿಜ್ಞಾನ), ಸ್ವಸ್ತಿ ಎಂ.ಭಟ್(ಸಂಗೀತ), ಸುಶಾಂತ್ ಎಸ್.ಭಟ್ (ಯಕ್ಷಗಾನ) ಅವರಿಗೆ ಪ್ರಮಾ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಸದಾಶಿವ ರಾವ್ ಮಾತನಾಡಿ, ಮಕ್ಕಳ ಸಾಧನೆಗೆ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ, ಹೆತ್ತವರ ಪ್ರೋತ್ಸಾಹ, ಶ್ರಮ ಮತ್ತು ಯೋಗ್ಯ ಗುರುಗಳ ಮಾರ್ಗದರ್ಶನವು ಅಂತರ್ಗತವಾದ ಪ್ರತಿಭೆ ಅರಳಲು ಅವಶ್ಯಕ. ಸಾಧನೆಯ ಹಾದಿಯಲ್ಲಿ ಸೋಲು ಬಂದಾಗ ಅದನ್ನು ಎದುರಿಸುವ ಬಗ್ಗೆ, ಸೋಲನ್ನು ಸಕರಾತ್ಮಕವಾಗಿ ಒಪ್ಪಿಕೊಳ್ಳುವ ಬಗ್ಗೆ ಹೆತ್ತವರ ಗುರುಗಳ ಹಾಗೂ ಹಿರಿಯರ ಮಾರ್ಗದರ್ಶನ ಅತೀ ಅಗತ್ಯ ಎಂದರು.
ಟ್ರಸ್ಟ್ ಪರವಾಗಿ ಡಾ.ಅನುಸೂಯ ದೇವಿ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಮಾಳ ಸಂಸ್ಮರಣೆ ಮಾಡಲಾಯಿತು. ಟ್ರಸ್ಟ್ ಅಧ್ಯಕ್ಷೆ ದೇವಕಿ ಕೆ.ಭಟ್, ವಿದುಷಿ ಪವನ ಬಿ.ಆಚಾರ್ಯ ಉಪಸ್ಥಿತರಿದ್ದರು. ಡಾ.ಬಾಲಚಂದ್ರ ಆಚಾರ್ಯ ವಂದಿಸಿದರು. ಸಂಹಿತ ಜಿಪಿ ಕಾರ್ಯಕ್ರಮ ನಿರ್ವಹಿಸಿದರು.





