ಉಡುಪಿ | ಲಿಫ್ಟ್ನಲ್ಲಿ ಸಿಲುಕಿದ್ದ ಐವರು ವಿದ್ಯಾರ್ಥಿಗಳ ರಕ್ಷಣೆ

ಉಡುಪಿ, ನ.23: ವಸತಿ ಸಮುಚ್ಛಯದ ಲಿಫ್ಟ್ನಲ್ಲಿ ಸಿಲುಕಿದ್ದ ಐವರು ವಿದ್ಯಾರ್ಥಿಗಳನ್ನು ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಇಂದ್ರಾಳಿಯಲ್ಲಿ ನ.22ರಂದು ಮಧ್ಯರಾತ್ರಿ ವೇಳೆ ನಡೆದಿದೆ.
ಇಂದ್ರಾಳಿಯ ಯುನೈಟೆಡ್ ಐಕಾನ್ ನೆಲ ಮತ್ತು ಮೂರು ಮಹಡಿಗಳ ವಸತಿ ಸಮುಚ್ಛಯದಲ್ಲಿ ವಾಸವಾಗಿದ್ದ ಮಣಿಪಾಲದ ವಿದ್ಯಾರ್ಥಿಗಳು, ಮಧ್ಯರಾತ್ರಿ 12.10ರ ಸುಮಾರಿಗೆ ನೆಲಮಹಡಿಯಲ್ಲಿ ಲಿಫ್ಟ್ ನೊಳಗೆ ಸಿಲುಕಿಕೊಂಡಿದ್ದರು. ಹೊರಗೆ ಬಾರದ ಸ್ಥಿತಿಯಲ್ಲಿದ್ದ ಅವರು ಕೂಡಲೇ ತಮ್ಮ ಸ್ನೇಹಿತರನ್ನು ಸಂಪರ್ಕಿಸಿ, ಆ ಮೂಲಕ ಉಡುಪಿ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಲಾಯಿತು.
ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ತಂಡ, ಸುಮಾರು ಅರ್ಧ ತಾಸು ಕಾರ್ಯಾಚರಣೆ ನಡೆಸಿ, ಲಿಫ್ಟ್ ನೊಳಗೆ ಸಿಲುಕಿಕೊಂಡಿದ್ದ ಐವರನ್ನು ಸುರಕ್ಷಿತವಾಗಿ ಹೊರಗೆ ತರಲಾಯಿತು. ವಿದ್ಯಾರ್ಥಿಗಳು ಭಯಭೀತರಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾ ಅಧಿಕಾರಿ ರವೀಂದ್ರ, ಪ್ರಮುಖ ಫೈಯರ್ಮೆನ್ ರಾಘವೇಂದ್ರ, ಫೈಯರ್ಮೆನ್ ರವಿ ನಾಯ್ಕ್, ಚಾಲಕ ಸುಧೀರ್ ಪಾಲ್ಗೊಂಡಿದ್ದರು.





