ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿ ಬಿಟ್ಟವರ ವಿರುದ್ಧ ಕಾನೂನು ಕ್ರಮ

ಸಾಂದರ್ಭಿಕ ಚಿತ್ರ
ಉಡುಪಿ, ನ.3: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬೀದಿ ನಾಯಿಗಳಿಗೆ ಆಹಾರವನ್ನು ಹಾಕುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಬೀದಿ ನಾಯಿಗಳಿಗೆ ಅನಧಿಕೃತವಾಗಿ ರಸ್ತೆಯ ಚರಂಡಿಗಳ ಮೇಲೆ, ಶಾಲಾ ವಠಾರದಲ್ಲಿ, ಜನ ನಿಬಿಡ ಪ್ರದೇಶಗಳಲ್ಲಿ, ಬಸ್ ನಿಲ್ದಾಣ ಸೇರಿದಂತೆ ಇತರೆ ಸ್ಥಳಗಳಲ್ಲಿ ಸಾರ್ವಜನಿಕರು ಆಹಾರ ನೀಡಬಾರದು ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.
ನಗರಸಭೆಯಿಂದ ಪ್ರಾಥಮಿಕ ಹಂತದಲ್ಲಿ ಬೀಡಿನಗುಡ್ಡೆ ಹಿಂದೂ ರುದ್ರ ಭೂಮಿ ಎದುರುಗಡೆ, ಆದಿ ಉಡುಪಿ ಮಾರುಕಟ್ಟೆ ಹಿಂಬದಿ, ಇಂದ್ರಾಳಿ ಹಿಂದೂ ರುದ್ರಭೂಮಿ ಎದುರುಗಡೆ, ಪರ್ಕಳ ಸ್ವಾಗತ ಗೋಪುರದ ಹತ್ತಿರ, ನಿಟ್ಟೂರು ಕೊಳಚೆ ನೀರು ಶುದ್ದೀಕರಣ ಘಟಕದ ಎದುರುಗಡೆ, ಪೆರಂಪಳ್ಳಿ ಮುಖ್ಯ ರಸ್ತೆಯ ಭಾರತೀಯ ವಿಕಾಸ ಟ್ರಸ್ಟ್ ಕೆಳಗಡೆ, ರಾಜ್ ಫಿಶ್ ಮಿಲ್ ಹತ್ತಿರ, ಆದಿಉಡುಪಿ ಮಲ್ಪೆ ರಸ್ತೆಯ ಹೆಲಿಪ್ಯಾಡ್ ಹತ್ತಿರ, ಕಕ್ಕುಂಜೆ ನಾರಾಯಣನಗರಕ್ಕೆ ಹೋಗುವ ರಸ್ತೆಯ ತಿರುವು ಬಳಿ ಹಾಗೂ ಬೈಲೂರು ಹನುಮಾನ್ ಗ್ಯಾರೇಜ್ ಡಯಾನ ರಸ್ತೆ ಜಯವೀರ ಸಂಘದ ಹತ್ತಿರ ನಿಯಮಾನುಸಾರ ಷರತ್ತು ವಿಧಿಸಿ, ಬೀದಿ ನಾಯಿಗಳಿಗೆ ಆಹಾರ ಹಾಕಲು ಅನುಮತಿಯನ್ನು ನೀಡಲು ಸ್ಥಳಗಳನ್ನು ಗುರುತಿಸಲಾಗಿದೆ.
ಇದರೊಂದಿಗೆ ಇತರೆ ಯಾವುದೇ ಸ್ಥಳದಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಲು ಸಾರ್ವಜನಿಕರು ಮುಂದೆ ಬಂದಲ್ಲಿ ನಗರಸಭಾ ಕಚೇರಿಗೆ ಲಿಖಿತವಾಗಿ ಮನವಿ ಸಲ್ಲಿಸಿದ್ದಲ್ಲಿ, ಪರಿಶೀಲಿಸಿ ಅನುಮತಿ ನೀಡಲು ಕ್ರಮ ವಹಿಸಲಾಗುವುದು.
ಬೀದಿನಾಯಿಗಳಿಗೆ ಆಹಾರವನ್ನು ಹಾಕುವುವರಿಗೆ ಅನುಮತಿ ಹಾಗೂ ಗುರುತಿನ ಚೀಟಿ ಕಡ್ಡಾಯವಾಗಿದ್ದು, ಆಹಾರ ಹಾಕುವವರು ನಗರಸಭೆಯ ಕಚೇರಿಯಿಂದ ಲಿಖಿತದ ಮೂಲಕ ಅರ್ಜಿ ನೀಡಿ ನಿಯಮಾನುಸಾರ ಅನುಮತಿ ಪಡೆದುಕೊಳ್ಳಬೇಕು. ಬೀದಿ ನಾಯಿಗಳಿಗೆ ಆಹಾರ ಹಾಕುವವರೇ ಸದ್ರಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಗೂ ಸಂತಾನಹರಣ ಶಸ್ತ್ರಚಿಕಿತ್ಸೆ ವ್ಯವಸ್ಥೆ ಮಾಡಬೇಕು.
ಮನೆಗಳಲ್ಲಿ ನಾಯಿ ಸಾಕುವವರು ನಾಯಿಗಳ ಮರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತಂದು ಬಿಡುತ್ತಿರುವುದು ಕಂಡು ಬಂದಿದ್ದು, ಇದರಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹೀಗಾಗಿ ಸಾರ್ವಜನಿಕರು ಮನೆಗಳಲ್ಲಿ ಸಾಕುವ ನಾಯಿಗಳಿಗೆ ರೇಬಿಸ್ ಲಸಿಕೆ ಹಾಗೂ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಬೇಕು. ಜೊತೆಗೆ ಸಾಕು ನಾಯಿಗಳಿಗೆ ಬೆಲ್ಟ್ ಅಳವಡಿಸಬೇಕು.
ಯಾವುದೇ ಸಾಕು ನಾಯಿಯನ್ನು ಹಾಗೂ ಅದರ ಮರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತಂದು ಬಿಟ್ಟಿರುವುದು ಕಂಡು ಬಂದಲ್ಲಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.







