ಉಡುಪಿ ನಗರಸಭೆ | ಇ ಖಾತೆ ಅರ್ಜಿಗಳ ತಕ್ಷಣ ವಿಲೇವಾರಿಗೆ ಆದ್ಯತೆ: ಅಧಿಕಾರಿಗಳ ಸಭೆಯಲ್ಲಿ ಚರ್ಚೆ

ಉಡುಪಿ: ಉಡುಪಿ ನಗರಸಭೆಯ ಕಂದಾಯ ವಿಭಾಗದಲ್ಲಿ ಇ ಖಾತೆ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಉಡುಪಿ ನಗರಸಭೆಯ ಸಭಾಂಗಣದಲ್ಲಿ ಇಂದು ಅಧಿಕಾರಿಗಳ ಸಭೆ ನಡೆಯಿತು.
ಹಲವು ತಿಂಗಳಿನಿಂದ ಬಾಕಿ ಇರುವ ಖಾತೆ ಕಡತಗಳನ್ನು ತಕ್ಷಣ ವಿಲೇವಾರಿ ಮಾಡಿ ಇ ಖಾತೆ ನೀಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆಯಲ್ಲಿ ಸೆಪ್ಟಂಬರ್ ತಿಂಗಳಿನಿಂದ ಪ್ರತಿ ಮಂಗಳವಾರ ಇ ಖಾತೆ ವಿತರಣೆಗೆ ನಿಗದಿ ಮಾಡಬೇಕು. ಕಂದಾಯ ವಿಭಾಗದ ಸೇವೆಗಳನ್ನು ಸಾರ್ವಜನಿಕರಿಗೆ ತಕ್ಷಣ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಉಡುಪಿ ನಗರ ವ್ಯಾಪ್ತಿಯಲ್ಲಿ ಆಸ್ತಿ ನೋಂದಣಿಗಾಗಿ ಕಾವೇರಿ ತಂತ್ರಾಶ ಬಳಕೆ ಮಾಡುವ ಸಂದರ್ಭದಲ್ಲಿ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶ ಸಮನ್ವಯದ ಸಮಸ್ಯೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ನಗರಸಭೆ ಪೌರಾಯುಕ್ತರು, ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಉಪ-ನೊಂದಣಾಧಿಕಾರಿಗಳು ಚರ್ಚಿಸಿದರು.
ಪ್ರಸ್ತುತ ಕಾವೇರಿ ಮತ್ತು ಇ-ಆಸ್ತಿ ಜೋಡಣೆಯಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅದರಲ್ಲೂ ಅತೀ ಮುಖ್ಯವಾಗಿ ನಿವೇಶನ ಗಾತ್ರ ಅಳತೆ, ಕಟ್ಟಡ ಖಾತೆ ನೋಂದಣಿ ಮತ್ತು ಖಾಸಗಿ ಸಂಸ್ಥೆಗಳ ಆಸ್ತಿಗಳ ನೋಂದಣೆಯಲ್ಲಿನ ಸಮಸ್ಯೆ ಮತ್ತು ನೋಂದಣಿ ನಂತರ ಇ-ಖಾತೆಯಲ್ಲಿ ಸರ್ವೆ ಸಂಖ್ಯೆ ಅಳಿಸಿ ಹೊಗುತ್ತಿರುವುದರ ಬಗ್ಗೆ ಕಾವೇರಿ ತಂತ್ರಾಂಶದ, ಸಂಬಂಧಪಟ್ಟ ತಂತ್ರಾಂಶದ ನಿರ್ವಹಕರ ಗಮನಕ್ಕೆ ತರಲು ಉಡುಪಿ ಉಪ ನೋಂದಣಾಧಿಕಾರಿಯವರಿಗೆ ಶಾಸಕರು ನಿರ್ದೇಶನ ನೀಡಿದರು.
ಸಭೆಯಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಪೌರಾಯುಕ್ತ ಮಹಾಂತೇಶ್ ಹಂಗರಗಿ, ನಗರಸಭಾ ಸದಸ್ಯರಾದ ಹರೀಶ್ ಶೆಟ್ಟಿ, ಗಿರಿಧರ ಆಚಾರ್ಯ ಕರಂಬಳ್ಳಿ, ಜಿಲ್ಲಾ ನೋಂದಣಾಧಿಕಾರಿ, ಉಡುಪಿ ಉಪ ನೋಂದಣಾಧಿಕಾರಿ, ನಗರಸಭೆ ಕಂದಾಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.







