ಉಡುಪಿ ನಗರಸಭೆ ಸಿಬ್ಬಂದಿಗೆ 10 ಲಕ್ಷ ರೂ. ನೀಡುವಂತೆ ಬೆದರಿಕೆ: ಮಹಿಳೆ ಸಹಿತ ಮೂವರು ಆರೋಪಿಗಳ ಬಂಧನ

ಉಡುಪಿ, ಜು.11: ಉಡುಪಿ ನಗರಸಭೆಯ ಪೌರ ಕಾರ್ಮಿಕರ ಪ್ರಭಾರ ಮೇಲ್ವಿಚಾರಕರೊಬ್ಬರಿಗೆ 10ಲಕ್ಷ ರೂ. ಹಣ ನೀಡುವಂತೆ ಹಾಗೂ ಇಲ್ಲದಿದ್ದರೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬೆದರಿಸುತ್ತಿದ್ದ ಮೂವರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ನಗರ ಸಭೆಯ ಪೌರಕಾರ್ಮಿಕ ಯೋಗೀಶ್ ಪ್ರಭು, ಹೊರ ಗುತ್ತಿಗೆ ಚಾಲಕರಾದ ವಿನಯ ಕುಮಾರ್ ಮತ್ತು ಸ್ಮಿತಾ ಬಿ.ಬಂಗೇರ ಬಂಧಿತ ಆರೋಪಿಗಳು.
ಉಡುಪಿ ನಗರಸಭೆಯ ಪೌರ ಕಾರ್ಮಿಕರ ಪ್ರಭಾರ ಮೇಲ್ವಿಚಾರಕ ರಾಗಿ ಕರ್ತವ್ಯ ನಿರ್ವಹಿಸುತಿದ್ದ ಬೈಂದೂರಿನ ಯೋಗೀಶ(34) ಎಂಬವರಿಗೆ ಯೋಗೀಶ್ ಪ್ರಭು, ವಿನಯ ಕುಮಾರ್ ಮತ್ತು ಸ್ಮಿತಾ ಬಿ.ಬಂಗೇರ ಎಂಬವರು ಅವರಿಗೆ ಅನುಕೂಲವಾಗುವಂತೆ ದೈನಂದಿನ ಕರ್ತವ್ಯದಲ್ಲಿ ಅವರನ್ನು ನಿಯೋಜನೆ ಮಾಡಿಕೊಳ್ಳಬೇಕು, ಇಲ್ಲವಾದರೆ ಸ್ಮಿತಾಳನ್ನು ಬಳಸಿಕೊಂಡು ಯೋಗೀಶ್ ವಿರುದ್ಧ ಲೈಂಗಿಕ ಕಿರುಕುಳದ ಅರೋಪ ಹೊರಿಸುವುದಾಗಿ ಹೆದರಿಸುತ್ತಿದ್ದರು.
ನಂತರ 10ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ ಆರೋಪಿಗಳಿಗೆ ಯೋಗೀಶ್, 2 ಲಕ್ಷ ಹಣವನ್ನು ನಗದು ರೂಪದಲ್ಲಿ ನೀಡಿದ್ದರು. ಬಳಿಕ ಆರೋಪಿಗಳು ಉಳಿದ 8 ಲಕ್ಷ ರೂ. ಹಣವನ್ನು ನೀಡುವಂತೆ ಬೆದರಿಸಿದ್ದರು. ಹಣವನ್ನು ನೀಡಲು ನಿರಾಕರಿಸಿದ ಯೋಗೀಶ್ ವಿರುದ್ಧ ಜ.29ರಂದು ಸ್ಮಿತಾ ಹೆಸರಿನಲ್ಲಿ ಉಡುಪಿ ಮಹಿಳಾ ಪೊಲೀಸ್ ಠಾಣೆ ಯಲ್ಲಿ ಲೈಂಗಿಕ ಅತ್ಯಾಚಾರ ಅರೋಪದಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಕೊಂಡಿದ್ದ ಯೋಗೀಶ್ ಅವರ ಮೊಬೈಲ್ಗೆ ಜೂ.30 ರಂದು ಕರೆ ಮಾಡಿದ ಆರೋಪಿಗಳು ಉಳಿಕೆ ಹಣ 8 ಲಕ್ಷ ರೂ. ನೀಡುವಂತೆ ಒತ್ತಾಯಿಸಿದರು. ಇಲ್ಲವಾದಲ್ಲಿ ಇನ್ನೊಂದು ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದರು. ಜು.6ರಂದು ಮಣಿಪಾಲ ಪೆರಂಪಳ್ಳಿ ಸರ್ಕಲ್ನಲ್ಲಿ ಆರೋಪಿ ಯೋಗೀಶ್ ಪ್ರಭು, ಯೋಗೀಶ್ಗೆ ಬೈದು ಉಳಿದ ಹಣ 8 ಲಕ್ಷ ರೂ. ಕೊಡದಿದ್ದರೆ ಪ್ರಕರಣ ದಾಖಲಿಸುವು ದಾಗಿ ಜಾತಿ ನಿಂದನೆ ಮಾಡಿ ಬೆದರಿಸಿದ್ದಾರೆಂದು ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






